ಬೆಂಗಳೂರು, ನ.18: ಕರ್ನಾಟಕದ ರಣಜಿ ಆಟಗಾರರು ಈ ಹಿಂದೆ ಟೀಂ ಬಸ್ ಮಿಸ್ ಮಾಡಿಕೊಂಡು ಆಟೋರಿಕ್ಷಾ ಹತ್ತಿ ಎಲ್ಲೆಲ್ಲೋ ಹೋಗಿ ಕೊನೆಗೆ ಮೈದಾನ ತಲುಪಿದ ಘಟನೆ ಬಗ್ಗೆ ಒನ್ ಇಂಡಿಯಾದಲ್ಲಿ ಓದಿರುತ್ತೀರಿ.. ಓದಿಲ್ಲವೆಂದ್ರೆ ಓದಿ..ಈಗ ಅದೇ ರೀತಿ ಪ್ರಸಂಗವನ್ನು ಕೆಎಲ್ ರಾಹುಲ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಆಂಬ್ಯುಲೆನ್ಸ್ ಹತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮಳೆಗೆ ಆಹುತಿಯಾಗಿ ನೀರಸ ಡ್ರಾನಲ್ಲಿ ಅಂತ್ಯಗೊಂಡ ಬಳಿಕ ಕ್ರಿಕೆಟರ್ಸ್ ಆಂಬ್ಯುಲೆನ್ಸ್ ಹತ್ತಿ ತಮ್ಮ ಹೋಟೆಲ್ ಗೆ ತೆರಳಿದ್ದಾರೆ. ಅಯ್ಯೋ ಏಕೆ ಎಂದು ಚಿಂತಿಸಬೇಡಿ. ಯಾವ ಆಟಗಾರರು ಗಾಯಗೊಂಡಿರಲಿಲ್ಲ. ಅದರೆ, ಮೈದಾನದಿಂದ ಹೋಟೆಲ್ ಗೆ ಹೋಗುವ ಬಸ್ ಮಿಸ್ ಮಾಡಿಕೊಂಡಿದ್ದರು.
ಹೀಗಾಗಿ, ಶಿಖರ್ ಧವನ್, ಕೆಎಲ್ ರಾಹುಲ್, ಸ್ಟುವರ್ಟ್ ಬಿನ್ನಿ, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಎಷ್ಟು ಹೊತ್ತು ಕಾದರೂ ಮಳೆಯೂ ನಿಲ್ಲಲಿಲ್ಲ, ಬಸ್ ಕೂಡಾ ಬರಲಿಲ್ಲ. ಹೀಗಾಗಿ, ಸ್ಟೇಡಿಯಂನಲ್ಲಿ ಪಾರ್ಕ್ ಮಾಡಿದ್ದ ಆಂಬ್ಯುಲೆನ್ಸ್ ವಾಹನವನ್ನು ತೆಗೆದುಕೊಂಡು ಹತ್ತಿರದಲ್ಲೇ ಇದ್ದ ಹೋಟೆಲ್ ಗೆ ತೆರಳಿದ ಘಟನೆ ನಡೆದಿದೆ.
ನಾಲ್ಕು ದಿನಗಳ ಕಾಲ ಮಳೆಯಿಂದ ಬೇಸತ್ತಿದ್ದ ಕ್ರಿಕೆಟರ್ಸ್ ಗೆ ಆಂಬ್ಯುಲೆನ್ಸ್ ನ ಸವಾರಿ ಹೊಸ ಅನುಭವ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 1-0 ಅಂತರದಿಂದ ಮುನ್ನಡೆ ಪಡೆದಿದೆ. ಮುಂದಿನ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನವೆಂಬರ್ 25ರಂದು ಆರಂಭಗೊಳ್ಳಲಿದೆ.
ಸ್ಥಳೀಯ ಆಟಗಾರರಾದ ಸ್ಟುವರ್ಟ್ ಬಿನ್ನಿ ಅವರು ಡ್ರೈವರ್ ಪಕ್ಕ ಕುಳಿತು ಮಾರ್ಗ ದರ್ಶನ ಮಾಡಿದ್ದಾರೆ. ಧವನ್, ರಾಹುಲ್ ಹಾಗೂ ಬಂಗಾರ್ ಹಿಂಬದಿ ಕುಳಿತು ಸವಾರಿ ಮಾಡಿ ಪಂಚತಾರಾ ಹೋಟೆಲ್ ತಲುಪಿದ್ದಾರೆ. (ಒನ್ ಇಂಡಿಯಾ ಸುದ್ದಿ)