ಲಂಡನ್, ಜೂನ್ 15: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವ ತನಕ ಅನಿಲ್ ಕುಂಬ್ಳೆ ಅವರೇ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಡಳಿತ ಸಮಿತಿ ಗುರುವಾರ(ಜೂನ್ 15) ದಂದು ಅಧಿಕೃತವಾಗಿ ಪ್ರಕಟಿಸಿದೆ.
ಜೂನ್ ತಿಂಗಳ ಅಂತ್ಯಕ್ಕೆ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಕ್ಕೆ ಹೊಸ ಕೋಚ್ ನೇಮಕಾತಿಗಾಗಿ ಸಂದರ್ಶನ ಆರಂಭವಾಗಿರುವ ಬೆನ್ನಲ್ಲೇ, ಇಂಥದ್ದೊಂದು ಸುದ್ದಿಯನ್ನು ಸೋಮವಾರ(ಜೂನ್ 12)ದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಡಳಿತ ಅಧಿಕಾರಿ ವಿನೋದ್ ರಾಯ್ ಸುಳಿವು ನೀಡಿದ್ದರು.
ಆದರೆ, ಕೋಚ್ ಆಗಿ ಇನ್ನೊಂದು ಪ್ರವಾಸ ಕೈಗೊಳ್ಳಬೇಕೆ? ಬೇಡವೇ ಎಂಬ ನಿರ್ಧಾರವನ್ನು ಕುಂಬ್ಳೆ ಅವರಿಗೆ ಬಿಡಲಾಗಿತ್ತು. ಕುಂಬ್ಳೆ ಅವರ ಒಪ್ಪಿಗೆ ಸಿಕ್ಕಿದ್ದರಿಂದ, ಮುಂದಿನ ವಿಂಡೀಸ್ ಪ್ರವಾಸಕ್ಕೆ ಚಾಂಪಿಯನ್ಸ್ ಟ್ರೋಫಿಯ ಕೋಚ್ ತಂಡವೇ ಮುಂದುವರೆಯಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಸೆಮಿಫೈನಲ್ ಹಂತಕ್ಕೇರಿದ್ದು, ಜೂನ್ 15ರಂದು ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಜೂನ್ 18ರಂದು ಫೈನಲ್ ನಡೆಯಲಿದೆ.