ಕೊಲ್ಹಾಪುರ (ಮಹಾರಾಷ್ಟ್ರ), ಡಿಸೆಂಬರ್ 15: ಭಾರತ ಕ್ರಿಕೆಟ್ ತಂಡದ ಆಟಗಾರ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬುರಾವ್ ರಹಾನೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಮಧುಕರ್ (54) ಅವರು ಚಲಾಯಿಸುತ್ತಿದ್ದ ಕಾರು ಮಹಾರಾಷ್ಟ್ರದ ಕೊಲ್ಹಾಪುರದ ಕಾಗಲ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಹಿಳೆಗೆ ಡಿಕ್ಕಿ ಹೊಡಿದಿದೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರು ಚಲಾಯಿಸುತ್ತಿದ್ದ ರಹಾನೆ ಅವರ ತಂದೆ ಮಧುಕರ್ ಅವರನ್ನು ವಶಕ್ಕೆ ಪಡೆದರು.
ಮಧುಕರ್ ಅವರು ಹುಂಡೈ ಐ20 ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಾಗಲ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆಶಾತಾಯ್ ಕಾಂಬ್ಳೆ ಎಂಬ ಮಹಿಳೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆಶಾತಾಯ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಶಾತಾಯ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಘಟನೆಗೆ ಸಂಬಂಧಿಸಿದಂತೆ ಕೊಲ್ಹಾಪುರ ಪೊಲೀಸರು ಮಧುಕರ್ ಅವರನ್ನು ವಶಕ್ಕೆ ಪಡೆದು ಐಪಿಸಿ ಸೆಕ್ಷನ್ 304ಎ, 337, 338, 279 ಹಾಗೂ 184ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.