ನವದೆಹಲಿ, ಫೆ. 04: ಭಾರತದಲ್ಲಿ ನಡೆಯಲಿರುವ ವಿಶ್ವಟಿ20 ಟೂರ್ನಿ ಹಾಗೂ ಮುಂಬರುವ ಏಷ್ಯಾ ಕಪ್ ಗಾಗಿ ಟೀಂ ಇಂಡಿಯಾವನ್ನು ಶುಕ್ರವಾರ (ಫೆಬ್ರವರಿ 05) ಪ್ರಕಟಿಸಲಾಗುತ್ತದೆ. ತಂಡದಲ್ಲಿ ಸ್ಥಾನಕ್ಕಾಗಿ ಅಜಿಂಕ್ಯ ರಹಾನೆ ಹಾಗೂ ಮನೀಶ್ ಪಾಂಡೆ ನಡುವೆ ಪೈಪೋಟಿ ಏರ್ಪಟ್ಟಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡುವುದಕ್ಕೂ ಮುನ್ನ ಸಿಡ್ನಿ ಏಕದಿನ ಪಂದ್ಯದಲ್ಲಿ ಕರ್ನಾಟಕದ ಮನೀಶ್ ಪಾಂಡೆ ಅವರು ಭರ್ಜರಿ ಶತಕ ಸಿಡಿಸಿ ಆಯ್ಕೆದಾರರ ಗಮನ ಸೆಳೆದಿದ್ದರು. ರಹಾನೆ ಅವರು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.[ಮನೀಶ್ ಪಾಂಡೆ ಶತಕ, ಆಸೀಸ್ನಲ್ಲಿ ಮೊದಲ ಗೆಲುವು]
ಲಂಕಾ ಸರಣಿ ನಿರ್ಣಾಯಕ: ಫೆಬ್ರವರಿ 9ರಿಂದ ಶ್ರೀಲಂಕಾ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಮನೀಶ್ ಪಾಂಡೆಗೆ ಸ್ಥಾನ ಕಲ್ಪಿಸಲಾಗಿದೆ. ಈ ಸರಣಿಯಲ್ಲಿನ ಸಾಧನೆ ಪರಿಗಣಿಸಿ ಆಯ್ಕೆ ನಡೆಸಬಹುದಾಗಿತ್ತು. ಆದರೆ, ಫೆಬ್ರವರಿ 5ರಂದೇ ತಂಡ ಪ್ರಕಟಗೊಳ್ಳುವುದು ಖಾತ್ರಿಯಾಗಿದೆ.
ಮಾರ್ಚ್- ಏಪ್ರಿಲ್ ನಲ್ಲಿ ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ನಡೆಯಲಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶಿಖರ್ ಧವನ್, ಸುರೇಶ್ ರೈನಾ, ಯುವರಾಜ್ ಸಿಂಗ್, ಎಂಎಸ್ ಧೋನಿ ತಂಡದ ಸ್ಥಾನ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ಆಸೀಸ್ ಸರಣಿಯಲ್ಲಿ ಗಾಯಾಳುವಾಗಿ, ಚೇತರಿಸಿಕೊಂಡಿರುವ ರಹಾನೆ ಅಥವಾ ಪಾಂಡೆ ನಡುವೆ ಯಾರಿಗೆ ಅದೃಷ್ಟ ಒಲಿಯಲಿದೆ ಕಾದು ನೋಡಬೇಕಿದೆ.[ಲಂಕಾ ಸರಣಿ: ಕೊಹ್ಲಿಗೆ ರೆಸ್ಟ್, ಮನೀಶ್ ಇನ್, ನೇಗಿಗೆ ಚಾನ್ಸ್]
ಇನ್ನೊಂದೆಡೆ ರವೀಂದ್ರ ಜಡೇಜಗೆ ಸಾಥ್ ನೀಡಲು ಆಲ್ ರೌಂಡರ್ ಆಗಿ ಪವನ್ ನೇಗಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಆಯ್ಕೆ ಕಷ್ಟ.[ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]
ಆರ್ ಅಶ್ವಿನ್ ಗೆ ಸಾಥ್ ನೀಡಲು ಹರ್ಭಜನ್ ಸಿಂಗ್ ಗೆ ಕೊನೆ ಅವಕಾಶ ಸಿಗಬಹುದು. ಹೇಗೆ ಲೆಕ್ಕಾಚಾರ ಹಾಕಿದರೂ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ನಂತರ ಟಿ20 ಸರಣಿಗೆ ಆಯ್ಕೆಯಾಗದ ಮನೀಶ್ ಪಾಂಡೆ ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಹಳಿಯುತ್ತಾ ಕಾಯಬೇಕಾದ ಪರಿಸ್ಥಿತಿ ಬರಲಿದೆ. (ಪಿಟಿಐ)