ಶಿವಮೊಗ್ಗದಲ್ಲಿರುವ ಸಿರಾಜ್
ಸಿರಾಜ್ ಅವರ ತಂದೆ ಮುಹಮ್ಮದ್ ಗೌಸ್ ಮತ್ತು ತಾಯಿ ಶಬನಾ ಬೇಗಮ್ ಅವರು ಸಂಭ್ರಮದಲ್ಲಿ ಮುಳುಗಿದ್ದಾರೆ. ಸದ್ಯ ಕರ್ನಾಟಕದ ಶಿವಮೊಗ್ಗದಲ್ಲಿರುವ ಸಿರಾಜ್ ಅವರು ಹೈದರಾಬಾದ್ ಪರ ರಣಜಿ ಪಂದ್ಯವಾಡಲು ಸಜ್ಜಾಗುವಾಗ ಈ ಸುದ್ದಿ ಸಿಕ್ಕಿದೆ. ಈ ಬಗ್ಗೆ ನಮ್ಮ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ಸಿರಾಜ್, 'ನನ್ನ ಕನಸು ಕೊನೆಗೂ ಈಡೇರಿದೆ, ಭಾರತ ತಂಡಕ್ಕೆ ಆಯ್ಕೆಯಾಗುವುದು ನನ್ನ ದೊಡ್ಡ ಕನಸಾಗಿತ್ತು' ಎಂದರು
ವಿವಿಎಸ್ ಲಕ್ಷ್ಮಣ್ ಮೆಂಟರ್
ಐಪಿಎಲ್ ನಲ್ಲಿ ಹೈದರಾಬಾದ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮೆಂಟರ್ ಆಗಿದ್ದರು. ಡೇವಿಡ್ ವಾರ್ನರ್ ಅವರು ನಾಯಕರಾಗಿರುವ ತಂಡದಲ್ಲಿ ಆಡಿದ ಅನುಭವ ನನಗೆ ಲಾಭ ತಂದಿದೆ. ಕೋಚ್ ಭರತ್ ಅರುಣ್ ಅವರ ಸಲಹೆ ಸೂಚನೆ ಪಾಲಿಸುತ್ತಾ ಬಂದಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನೀಡಿದದ ಪ್ರದರ್ಶನ ಹಾಗೂ ಭಾರತ ‘ಎ' ಮತ್ತು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಸಹಕಾರಿಯಾಗಿದೆ ಎಂದರು.
ತಂದೆ ಮತ್ತು ತಾಯಿಯ ತ್ಯಾಗ
ನನ್ನ ಈ ಸಾಧನೆಗೆ ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ. ಆಟೋರಿಕ್ಷಾ ಚಾಲಕರಾಗಿದ್ದರೂ ನಮ್ಮ ಮೇಲೆ ಕುಟುಂಬದ ಕಷ್ಟ ಬೀಳದಂತೆ ನನ್ನಪ್ಪ ನೋಡಿಕೊಂಡರು. ಇದರಿಂದ ನಾನು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಯಿತು ಎಂದು ಸಿರಾಜ್ ಹೇಳಿದ್ದಾರೆ.
ಸಿರಾಜ್ ಅವರ ಇಲ್ಲಿ ತನಕದ ಸಾಧನೆ
ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್ ಆರಂಭಿಸಿದ ಸಿರಾಜ್ ಅವರು ವೇಗದ ಬೌಲಿಂಗ್ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಸ್ವಂತ ಪರಿಶ್ರಮದಿಂದ ಹೈದರಾಬಾದ್ ನ ಅಂಡರ್ -22, ಮುಷ್ತಾಕ್ ಅಲಿ, ವಿಜಯ್ ಹಝಾರೆ , ರಣಜಿ ಟ್ರೋಫಿ ತಂಡಕ್ಕೆ ಆಡಿದ ಸಾಧನೆ ಮಾಡಿದರು. ಭಾರತ ‘ಎ' ತಂಡದಲ್ಲಿ ಆಡುವ ಅವಕಾಶ ಕೂಡಾ ಪಡೆದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಟಿ20 ಆಡಿದ್ದಾರೆ. ಕಳೆದ ರಣಜಿ ಋತುವಿನಲ್ಲಿ ಹೈದರಾಬಾದ್ ಪರ 41 ವಿಕೆಟ್ ಗಳಿಸಿದ್ದಾರೆ.