ಹರಾರೆ, ಜುಲೈ 14: ಅತಿಥೇಯ ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಗೆಲ್ಲುವ ಮೂಲಕ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಏಕದಿನ ಶತಕ ದಾಖಲಿಸಿದ ಕೇದಾರ್ ಜಾಧವ್ ಅವರು ಪಂದ್ಯಶ್ರೇಷ್ಠ ಎನಿಸಿದರೆ, ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಅಂಬಟಿ ರಾಯುಡು ಸರಣಿ ಶ್ರೇಷ್ಠ ಎಂದು ಘೋಷಿಸಲಾಯಿತು. ಮೂರನೇ ಏಕದಿನ ಪಂದ್ಯದಲ್ಲಿ 277 ರನ್ ಗುರಿ ಬೆನ್ನು ಹತ್ತಿದ ಜಿಂಬಾಬ್ವೆ ತಂಡ 193 ಸ್ಕೋರಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಜಿಂಬಾಬ್ವೆ ಇನ್ನಿಂಗ್ಸ್: ಆರಂಭಿಕ ಆಟಗಾರ ಚಿಭಾಭಾ 7 ಬೌಂಡರಿ ಇದ್ದ 82 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚಿನ ಪ್ರತಿರೋಧ ತೋರಿಸಲಿಲ್ಲ. ಛಕಾಬ್ವ 27 ರನ್, ಮುತುಮ್ಬಾಮಿ 22 ರನ್ ಗಳಿಸಿದರು. ಅಂತಿಮವಾಗಿ 42.4 -ಓವರ್ ಗಳಲ್ಲಿ 193 ಸ್ಕೋರಿಗೆ ಆಲೌಟ್ ಆಯಿತು. ಭಾರತದ ಪರ ಸ್ಟುವರ್ಟ್ ಬಿನ್ನಿ 55 ರನ್ನಿತ್ತು 3 ವಿಕೆಟ್ ಕಬಳಿಸಿದರು.
ಭಾರತದ ಇನ್ನಿಂಗ್ಸ್: ನಾಯಕ ರಹಾನೆ 15 ರನ್ ಗಳಿಸಿ ಔಟಾದರೆ, ವಿಜಯ್ 13ರನ್ ಗಳಿಸಿದರು. ಕ್ರಮಾಂಕದಲ್ಲಿ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಾಬಿನ್ ಉತ್ತಮ 31 ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಮನೀಶ್ ಪಾಂಡೆ 71 ರನ್ (86 ಎಸೆತ 4x4 1x6 ), ಕೇದಾರ್ ಜಾಧವ್ 105 ರನ್ (87ಎಸೆತ, 12 x4 1x6), ಸ್ಟುವರ್ಟ್ ಬಿನ್ನಿ 8 ಎಸೆತಗಳಲ್ಲಿ 18 ರನ್ ಗಳಿಸಿ ತಂಡದ ಮೊತ್ತವನ್ನು ನಿಗದಿತ 50 ಓವರ್ ಗಳಲ್ಲಿ 276/5 ಸ್ಕೋರಿಗೆ ಹೆಚ್ಚಿಸಿದರು.
ಮನೀಶ್ ಪಾಂಡೆಗೆ ಮೊದಲ ಪಂದ್ಯ: ಕರ್ನಾಟಕದ ಮನೀಶ್ ಪಾಂಡೆ ಅವರ ಕನಸು ಕೊನೆಗೂ ನೆರವೇರಿದೆ. ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಪಂದ್ಯವಾಡುವ ಕನಸು ನನಸಾಗಿದೆ. ಜಿಂಬಾಬ್ವೆ ವಿರುದ್ಧ ಆರಂಭಗೊಂಡಿರುವ ಮೂರನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಆಡುವ XIನಲ್ಲಿ ಮನೀಶ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ.
25 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಅವರು ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದಾರೆ. ಭಾರತದ ಪರ ಆಡುತ್ತಿರುವ 206ನೇ ಆಟಗಾರ. ಅಂಬಟಿ ರಾಯುಡು ಬದಲಿಗೆ ಆಡುವ XIನಲ್ಲಿ ಸ್ಥಾನ ಪಡೆದುಕೊಂಡರೆ, ಧವಳ್ ಕುಲಕರ್ಣಿಗೆ ವಿಶ್ರಾಂತಿ ನೀಡಿ ಮೋಹಿತ್ ಶರ್ಮ ಅವರನ್ನು ಕಣಕ್ಕಿಳಿಸಲಾಗಿದೆ.
ಜಿಂಬಾಬ್ವೆ ನಾಯಕ ಎಲ್ಟಾನ್ ಚಿಂಗುಬುರಾ ಅವರು ಸತತ ಮೂರನೇ ಬಾರಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೂರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಶುಕ್ರವಾರ ಜುಲೈ 10ರಂದು ನಡೆಯಿತು. ಭಾರತ ತಂಡ ಗೆಲ್ಲಲು ತಿಣುಕಾಡಿ ಪ್ರಯಾಸದ ಜಯ ಗಳಿಸಿತು. [ವರದಿ ಇಲ್ಲಿ ಓದಿ]
ಜುಲೈ 12ರಂದು ನಡೆದ ಎರಡನೇ ಏಕದಿನ ಪಂದ್ಯವನ್ನು 62ರನ್ ಗಳ ಅಂತರದಿಂದ ಗೆದ್ದ ಭಾರತ, ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಿಂದ ತನ್ನದಾಗಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಪಂದ್ಯದ ವರದಿ]
ಭಾರತ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಮನೀಶ್ ಪಾಂಡೆ, ಮನೋಜ್ ತಿವಾರಿ, ಕೇದಾರ್ ಜಾಧವ್, ರಾಬಿನ್ ಉತ್ತಪ್ಪ(ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಅಕ್ಷರ್ ಪಟೇಲ್, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್. ಮೋಹಿತ್ ಶರ್ಮ
ಜಿಂಬಾಬ್ವೆ: ಎಲ್ಟಾನ್ ಚಿಗುಂಬರಾ (ನಾಯಕ), ಸೀನ್ ವಿಲಿಯಮ್ಸ್, ಚಾಮು ಚಿಭಾಭಾ, ಗ್ರೀಮ್ ಕ್ರೇಮೆರ್, ನೆವಿಲ್ ಮಡ್ಜಿವಾ, ಹ್ಯಾಮಿಲ್ಟನ್ ಮಸಕಡ್ಜ, ರಿಚ್ಮಂಡ್ ಮುತುಮ್ಬಾಮಿ (ವಿಕೆಟ್ ಕೀಪರ್), ವುಸಿ ಸಿಬಾಂಡಾ, ಸಿಕಂದರ್ ರಾಜ, ಡೋನಾಲ್ಡ್ ತಿರಿಪಾನೋ, ಬ್ರಿಅಯನ್ ವಿಟೋರಿ. (ಒನ್ ಇಂಡಿಯಾ ಸುದ್ದಿ)