ಮೆಲ್ಬೋರ್ನ್, ಜ.18: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ಮೂರನೇ ಏಕದಿನ ಪಂದ್ಯಕ್ಕೆ ಆಯ್ಕೆ ಮಾಡಲಿಲ್ಲ ಏಕೆ? ಎಂಬ ನಿರೀಕ್ಷಿತ ಪ್ರಶ್ನೆಗೆ ನಾಯಕ ಧೋನಿ ಉತ್ತರಿಸಿ, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಪರ್ತ್ ಹಾಗೂ ಬ್ರಿಸ್ಬೇನ್ ಏಕದಿನ ಕ್ರಿಕೆಟ್ ನಲ್ಲಿ ಸತತ ಎರಡು ಸೋಲು ಕಂಡ ಭಾರತ ತಂಡ ಮೆಲ್ಬೋರ್ನ್ ನಲ್ಲೂ ಸೋತಿದ್ದಲ್ಲದೆ ಸರಣಿಯನ್ನು 0-3 ಅಂತರದಲ್ಲಿ ಆಸ್ಟ್ರೇಲಿಯಾಕ್ಕೆ ಒಪ್ಪಿಸಿದೆ.
ಹೆಚ್ಚಿನ ಬ್ಯಾಟಿಂಗ್ ಅವಕಾಶ ಸಿಗದ ಕರ್ನಾಟಕದ ಮನೀಶ್ ಪಾಂಡೆ ಹಾಗೂ ಉತ್ತಮ ಪ್ರದರ್ಶನ ನೀಡದ ಆರ್ ಅಶ್ವಿನ್ ಅವರ ಬದಲಿಗೆ ಆಲ್ ರೌಂಡರ್ ರಿಷಿ ಧವನ್ ಹಾಗೂ ಗುರ್ ಕೀರತ್ ಸಿಂಗ್ ಅವರು ಚೊಚ್ಚಲ ಪಂದ್ಯವಾಡುವ ಅವಕಾಶ ಪಡೆದರು.ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಧೋನಿ ಅವರು ಈ ಬಗ್ಗೆ ಪ್ರಶ್ನೆಗಳನ್ನು ಎದುರಿಸಿದರು.
ಅಶ್ವಿನ್ ಅವರು ಚೆನ್ನಾಗಿ ಬೌಲ್ ಮಾಡುತ್ತಿದ್ದಾರೆ. ಆದರೆ, ಮೆಲ್ಬೋರ್ನ್ ಅಂಗಳದಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾತ್ರ ಸಾಧ್ಯವಿತ್ತು. ಜಡೇಜ ಅವರನ್ನು ಡ್ರಾಪ್ ಮಾಡುವಂತಿರಲಿಲ್ಲ. ಹೀಗಾಗಿ, ಅಶ್ವಿನ್ ಅವರನ್ನು ಕೈಬಿಡುವುದರಿಂದ ಇಬ್ಬರಿಗೆ ಅವಕಾಶ ಸಿಗುತ್ತಿತ್ತು. ಬ್ಯಾಟ್ಸ್ ಮನ್ ಹಾಗೂ ಬೌಲರ್ ರೊಬ್ಬರನ್ನು ತೆಗೆದು ಆಲ್ ರೌಂಡರ್ ಗಳನ್ನು ಹಾಕಿಕೊಳ್ಳಲು ಮ್ಯಾನೇಜ್ಮೆಂಟ್ ನಿರ್ಧರಿಸಿತು.ವೇಗಿಗಳಿಗೆ ಪಿಚ್ ಅನುಕೂಲವಾಗುವ ನಿರೀಕ್ಷೆಯಿತ್ತು ಎಂದರು.
ಅಶ್ವಿನ್ ಅವರು ಮೊದಲ ಪಂದ್ಯದಲ್ಲಿ 7.55 ಪ್ರತಿ ಓವರ್ ರನ್ ಸರಾಸರಿಯಂತೆ 2/68 ಕೊಟ್ಟರು. ಆಸ್ಟೇಲಿಯಾ 310 ಸುಲಭವಾಗಿ ಚೇಸ್ ಮಾಡಿತು. ಎರಡನೇ ಪಂದ್ಯದಲ್ಲಿ 10 ಓವರ್ ಗಳಲ್ಲಿ 60ರನ್ನಿತ್ತು ಯಾವುದೇ ವಿಕೆಟ್ ಪಡೆದಿರಲಿಲ್ಲ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯ ಕ್ಯಾನ್ ಬೆರಾದಲ್ಲಿ ಬುಧವಾರ (ಜನವರಿ 20) ದಂದು ನಡೆಯಲಿದೆ. ಅಶ್ವಿನ್ ಅವರು ತಂಡವನ್ನು ಸೇರುವ ನಿರೀಕ್ಷೆಯಿದೆ. (ಒನ್ ಇಂಡಿಯಾ ಸುದ್ದಿ)