ಕೊಲಂಬೋ, ಆಗಸ್ಟ್ 24: ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಅತಿಥೇಯ ಶ್ರೀಲಂಕಾದ ತಂಡ ಎರಡನೇ ಟೆಸ್ಟ್ ಪಂದ್ಯದ ಐದನೇ ದಿನ ಹೀನಾಯ ಸೋಲು ಕಂಡಿದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 278 ರನ್ ಗಳ ಬೃಹತ್ ಜಯ ದಾಖಲಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿ ನಂತರ ವಿಕೆಟ್ ಕೀಪರ್ ಆಗಿ ಕೂಡಾ ಕಾರ್ಯ ನಿರ್ವಹಿಸಿದ ಕೆಎಲ್ ರಾಹುಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಾರೆ.
413 ರನ್ ಚೇಸ್ ಮಾಡಲು ಆರಂಭಿಸಿದ ಶ್ರೀಲಂಕಾ ತಂಡ ಭೋಜನ ವಿರಾಮದ ನಂತರ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿದೆ.
ಭಾರತದ ಪರ ಆರ್ ಅಶ್ವಿನ್ ಮತ್ತೊಮ್ಮೆ 5 ವಿಕೆಟ್ ಪಡೆದು ಗೆಲುವಿಗೆ ಕಾರಣರಾಗಿದ್ದಾರೆ. 16 ಓವರ್ ಗಳಲ್ಲಿ 5/42 ಪಡೆದರೆ, ಅಮಿತ್ ಮಿಶ್ರಾ 2 ವಿಕೆಟ್ ಪಡೆದರು. ಕೆ ಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆ ಶತಕ ಕೂಡಾ ಟೀಂ ಇಂಡಿಯಾ ಗೆಲುವಿಗೆ ಕಾರಣವಾಯಿತು. ಐದನೇ ದಿನದ ಮೊದಲ ಎಸೆತದಲ್ಲೇ ರಾಹುಲ್ ಹಿಡಿದ ಅದ್ಭುತ ಕ್ಯಾಚ್ ತಂಡಕ್ಕೆ ಹುರುಪು ನೀಡಿತು ಎಂದು ನಾಯಕ ವಿರಾಟ್ ಕೊಹ್ಲಿ ಹೊಗಳಿಸದ್ದಾರೆ.
ಸಂಗಕ್ಕಾರ ಕ್ರಿಕೆಟ್ ಬದುಕು ಅಂತ್ಯ: ಸಂಗಕ್ಕಾರ ಅವರು ಎರಡನೇ ಇನ್ನಿಂಗ್ಸ್ ನಲ್ಲಿ 18 ರನ್ ಗಳಿಸಿದ್ದಾಗ ಅಶ್ವಿನ್ ಸ್ಪಿನ್ ಬಲೆಗೆ ಸಿಲುಕಿ ವಿಕೆಟ್ ಒಪ್ಪಿಸಿದರು. ಸಂಗಕ್ಕಾರ ಅವರು ತಮ್ಮ ಟೆಸ್ಟ್ ಜೀವನದಲ್ಲಿ 57.40ರನ್ ಸರಾಸರಿಯಂತೆ 12,400 ರನ್ ಗಳಿಸಿದ್ದು, ಟಾಪ್ 10 ರನ್ ಗಳಿಕೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ನಾಲ್ಕನೇ ದಿನದ ಅಂತ್ಯಕ್ಕೆ 72/2 ಸ್ಕೋರ್ ಮಾಡಿದ್ದ ಲಂಕಾ ತಂಡ, ಐದನೇ ದಿನದ ಭೋಜನ ವಿರಾಮಕ್ಕೆ ಶ್ರಿಲಂಕಾ 130/9 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಅಂತಿಮವಾಗಿ 43.4 ಓವರ್ ಗಳಲ್ಲಿ 134 ಸ್ಕೋರಿಗೆ ಆಲೌಟ್ ಆಯಿತು.
ಮೂರು ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು 63ರನ್ ಗಳಿಂದ ಸೋತ್ತಿದ್ದ ಭಾರತ ತಂಡ ಈ ಪಂದ್ಯ ಗೆಲ್ಲುವ ಮೂಲಕ ಸರಣಿಯಲ್ಲಿ 1-1ರಲ್ಲಿ ಸಮಪಾಲು ಪಡೆದುಕೊಂಡಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 28ರಂದು ಕೊಲಂಬೋದದ ಎಸ್ಎಸ್ ಸಿ ಮೈದಾನದಲ್ಲಿ ನಡೆಯಲಿದೆ.