ನವದೆಹಲಿ, ನ.21: ಕ್ರಿಕೆಟ್ ಜಗತ್ತಿನ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದರ್ ಸೆಹ್ವಾಗ್ ತಮ್ಮ ವೃತ್ತಿ ಬದುಕಿನ ಕೊನೆ ದಿನಗಳನ್ನು ಎದುರಿಸುತ್ತಿದ್ದಾರೆ. ದೆಹಲಿಯ ಕ್ರಿಕೆಟ್ ಸುಲ್ತಾನನ ಆಳ್ವಿಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಂತೂ ಇನ್ಮುಂದೆ ಕಾಣಲು ಸಾಧ್ಯವಿಲ್ಲ.
ಇತ್ತೀಚೆಗೆ ಏಕದಿನ ಕ್ರಿಕೆಟ್ ಮಾದರಿ ದೇವಧರ್ ಟ್ರೋಫಿಯಿಂದ ಸೆಹ್ವಾಗ್ ಹಿಂದೆ ಸರಿದಿದ್ದಾರೆ. ಯುವಕರಿಗೆ ಅವಕಾಶ ನೀಡುವ ಸಲುವಾಗಿ ಉತ್ತರ ವಲಯ ಪರ ಆಡುತ್ತಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.ಸೆಹ್ವಾಗ್ ಹಾದಿಯಲ್ಲೇ ಸಾಗಿರುವ ದೆಹಲಿಯ ಮತ್ತೊಬ್ಬ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡಾ ದೇವಧರ್ ಟ್ರೋಫಿಯಿಂದ ಹಿಂದೆ ಸರಿದಿದ್ದರು.
ಆದರೆ, ಗೌತಮ್ ಅವರು ಯಾವ ಕಾರಣಕ್ಕೆ ಹಿಂದೆ ಸರಿದರು ಎಂಬುದು ಗೊತ್ತಿಲ್ಲ. ಸೆಹ್ವಾಗ್ ಅವರು ಮಾತ್ರ ಯುವಕರಿಗೆ ಆದ್ಯತೆ ನೀಡಿ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ವಿಕ್ರಮ್ ರಾಥೋಡ್ ಗೆ ವೈಯಕ್ತಿಕವಾಗಿ ಕೇಳಿಕೊಂಡಿದ್ದರಂತೆ.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದೇಶಿ ಲೀಗ್ ನಲ್ಲಿ ಉತ್ತಮ ನಿರ್ವಹಣೆ ತೋರುವುದು ಮುಖ್ಯವಾಗಿರುವ ಕಾಲದಲ್ಲಿ ಸೆಹ್ವಾಗ್ ಅವರ ನಡೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ಮಾರಕವಾಗಿ ಪರಿಣಮಿಸಿದೆ. ಇನ್ನೊಂದೆಡೆ ಸೆಹ್ವಾಗ್, ಗಂಭೀರ್ ಇಲ್ಲದ ಟೀಂ ಇಂಡಿಯಾದಲ್ಲಿ ಯುವ ಆರಂಭಿಕ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
ಯುವ ಆಟಗಾರರ ದರ್ಬಾರ್: ಐಸಿಸಿ ವಿಶ್ವಕಪ್ 2015ಕ್ಕೆ ದಿನಗಣನೆ ಆರಂಭವಾಗಿರುವ ಕಾಲದಲ್ಲಿ ಸೆಹ್ವಾಗ್ ಅವರು ತಂಡಕ್ಕೆ ಮರಳುವುದು ಹಾಗಿರಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇನ್ಮುಂದೆ ಕಾಣಿಸಿಕೊಳ್ಳುವುದೇ ಅನುಮಾನ ಎನಿಸಿದೆ. ಆರಂಭಿಕ ಆಟಗಾರನ ಸ್ಥಾನದಲ್ಲಿ ಶಿಖರ್ ಧವನ್, ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಭದ್ರವಾಗಿ ನೆಲೆಯೂರಿದ್ದಾರೆ. ರಾಬಿನ್ ಉತ್ತಪ್ಪ ಕೂಡಾ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.
36 ವರ್ಷದ ಸೆಹ್ವಾಗ್ ಅವರು ವಿಶ್ವಕಪ್ ತಂಡದಲ್ಲಿ ಆಡಿ ಕ್ರಿಕೆಟ್ ಗೆ ವಿದಾಯ ಹೇಳುವ ಕನಸು ಇಟ್ಟುಕೊಂಡಿದ್ದರೇನೋ ಅದರೆ, ಈಗ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಎರಡಕ್ಕೂ ಆಯ್ಕೆಯಾಗದ ಸ್ಥಿತಿಯಲ್ಲಿದ್ದಾರೆ. ವಯಸ್ಸು, ಫಾರ್ಮ್ ಅವರ ಆಯ್ಕೆಗೆ ಅಡ್ಡಿಯಾಗಿದೆ.
33 ವರ್ಷದ ಗಂಭೀರ್ ಹೇಗಾದರೂ ಮಾಡಿ ಟೆಸ್ಟ್ ಕ್ರಿಕೆಟ್ ನಲ್ಲಾದರೂ ಸ್ಥಾನ ಪಡೆಯಲು ಯತ್ನಿಸುತ್ತಿದ್ದಾರೆ. ಅದರೆ, ಟೀಂ ಇಂಡಿಯಾದಿಂದ ಹೊರ ಬಿದ್ದ ನಂತರ ದೇಶಿ ಕ್ರಿಕೆಟ್ ನಲ್ಲಿ ಗೌತಮ್ ಉತ್ತಮ ಸಾಧನೆಯನ್ನೇನೂ ತೋರಿಲ್ಲ. ಶಿಖರ್ ಧವನ್, ಮುರಳಿ ವಿಜಯ್ ಅಲ್ಲದೆ ಕನ್ನಡಿಗ ಕೆಎಲ್ ರಾಹುಲ್(22) ಕೂಡಾ ಗಂಭೀರ್ ಅಯ್ಕೆಗೆ ಪೈಪೋಟಿ ನೀಡುತ್ತಿದ್ದಾರೆ.
ಅಭಿಮಾನಿಗಳಿಗಂತೂ ನಿರಾಶೆ : ಮುಂದಿನ ರಣಜಿ ಋತುವಿನಲ್ಲಿ ಭರ್ಜರಿ ಆಟವಾಡಿದರೆ ಮಾತ್ರ ಗಂಭೀರ್ ಗೆ ಸ್ಥಾನ ಸಿಗುವ ಸಾಧ್ಯತೆಯಿದೆ.ಆದರೆ, ಸೆಹ್ವಾಗ್ ಹಾಗೂ ಗಂಭೀರ್ ಜೋಡಿಯ ಆಟ ನೋಡುವ ಆಸೆ ಇಟ್ಟುಕೊಂಡಿರುವ ಅವರ ಅಭಿಮಾನಿಗಳಿಗಂತೂ ನಿರಾಶೆ ಕಾದಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ 2 ತ್ರಿಶತಕ( 293 ಕೂಡಾ) ಬಾರಿಸಿರುವ ಸೆಹ್ವಾಗ್ ಅವರು ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ್ದು ಈಗಲೂ ಲಯ ಕಂಡುಕೊಂಡರೆ ವಿಶ್ವದ ಯಾವುದೇ ಬೌಲರ್ ನ ಎಸೆತವನ್ನು ಚೆಂಡಾಡುವ ಶಕ್ತಿವಂತ.
104 ಟೆಸ್ಟ್, 251 ಏಕದಿನ ಪಂದ್ಯ, 19 ಟಿ20 ಪಂದ್ಯಗಳನ್ನು ಆಡಿರುವ ಸೆಹ್ವಾಗ್ ಕೊನೆ ಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದು ಮಾರ್ಚ್ 2013ರಲ್ಲಿ ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ಮರೆಯಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ದೇಶಿ ಕ್ರಿಕೆಟ್, ಐಪಿಎಲ್ ನಲ್ಲಿ ಕಿಂಗ್ಸ್ XI ಪಂಜಾಬ್ ಪರ ಸೆಹ್ವಾಗ್ ಬ್ಯಾಟ್ ಬೀಸಲಿದ್ದಾರೆ.