ಕೊಲಂಬೋ, ಸೆ.4- ಪಾಕಿಸ್ತಾನದ ಆರಂಭಿಕ ಕ್ರಿಕೆಟ್ ಆಟಗಾರ ಅಹ್ಮದ್ ಶೆಹ್ಜಾದ್ ಅವರು ಶ್ರೀಲಂಕಾದ ಆಟಗಾರ ತಿಲಕರತ್ನೆ ಬಳಿ ಮತಾಂತರದ ಪ್ರಚೋದನಾತ್ಮಕ ಹೇಳಿಕೆ ನೀಡಿ ಧರ್ಮನಿಂದನೆ ಮಾಡಿರುವ ಆರೋಪ ಹೊತ್ತಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತನಿಖೆ ನಡೆಸುತ್ತಿದೆ. ಇಷ್ಟಕ್ಕೂ ದಿಲ್ಶನ್ ಬಳಿ ಶೆಹ್ಜಾದ್ ಹೇಳಿದ್ದಾದರೂ ಏನು?
ಆಗಸ್ಟ್ 30ರಂದು ಲಂಕಾ ಮತ್ತು ಪಾಕ್ ನಡುವೆ ಏಕದಿನ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ದಿಲ್ಶನ್ ಅವರು ಅಜೇಯ 50 ರನ್ ಚೆಚ್ಚಿ ತಂಡಕ್ಕೆ 7 ವಿಕೆಟ್ ಜಯ ತಂದಿತ್ತರು.
ಡಂಬುಲಾದಲ್ಲಿ ನಡೆದ ಪಂದ್ಯ ನಂತರ ಅಹ್ಮದ್ ಶೆಹ್ಜಾದ್ ಅವರು ಡ್ರೆಸ್ಸಿಂಗ್ ರೂಂನಲ್ಲಿದ್ದ ತಿಲಕರತ್ನೆಗೆ ಧರ್ಮನಿಂದನೆ ಮಾಡಿರುವುದು ವೀಡಿಯೋ ಚಿತ್ರೀಕರಣದಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಕ್ರಿಕೆಟ್ ಮಂಡಳಿ ತನಿಖೆಗೆ ಆದೇಶಿಸಿತ್ತು. ಒಂದು ವೇಳೆ ತಿಲಕರತ್ನೆಗೆ ನಿಂದನೆ ಮಾಡಿರುವುದು ಸಾಬೀತಾದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೆಸ್ಸಿಂಗ್ ರೂಂನಲ್ಲಿ ಶೆಹ್ಜಾದ್ ಅವರು ತಿಲಕರತ್ನೆ ಕುರಿತು 'ನೀನು ಮುಸ್ಲಿಂಯೇತರ ವ್ಯಕ್ತಿಯಾಗಿದ್ದು, ಬಳಿಕ ಮುಸ್ಲಿಂ ಧರ್ಮದವನಾಗಿದ್ದೀಯ. ನಿನ್ನ ಜೀವನದಲ್ಲಿ ಮುಸ್ಲಿಂನಾಗಿ ಹುಟ್ಟದಿದ್ದರೆ ಸ್ವರ್ಗಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ' ಎಂದು ಕೆಣಕಿದ್ದಾರೆ. ಅದರೆ, ಇದಕ್ಕೆ ದಿಲ್ಶನ್ ಕೊಟ್ಟ ಉತ್ತರ ಸರಿಯಾಗಿ ರೆಕಾರ್ಡ್ ಆಗಿಲ್ಲ ಎಂದು AP ವರದಿ ಮಾಡಿದೆ. ಈ ವರದಿ ಹಾಗೂ ವಿಡಿಯೋ ತುಣುಕು ಆಧಾರದ ಮೇಲೆ ತನಿಖೆ ನಡೆಯುತ್ತಿದೆ.
ಈ ಘಟನೆ ನಂತರ ದಿಲ್ಶನ್ ಅವರು ಲಂಕಾ ಕ್ರಿಕೆಟ್ ಮಂಡಳಿಗೆ ದೂರು ನೀಡಿದ್ದರು. 37 ವರ್ಷದ ತಿಲಕರತ್ನೆ ದಿಲ್ಶನ್ ಅವರ ತಂದೆ ಮುಸ್ಲಿಂ ಆಗಿದ್ದರೆ, ತಾಯಿ ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದಾರೆ. ಅವರ ಪೂರ್ಣ ಹೆಸರು ತುವಾನ್ ಮಹಮ್ಮದ್ ದಿಲ್ಶನ್ ಆಗಿದೆ.
ಅದರೆ, 1999 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿರಿಸುತ್ತಿದ್ದಂತೆ ಅವರು ತಮ್ಮ ಮುಸ್ಲಿಂ ಸರ್ ನೇಮ್ ಕಿತ್ತುಹಾಕಿದ್ದರು. ತಮ್ಮ ಹೆಸರನ್ನು ತಿಲಕರತ್ನೆ ಮುಡಿಯಾನ್ ಸೆಲಗೆ ದಿಲ್ಶನ್ ಎಂದು ಸಿಂಹಳೀಯ ಬೌದ್ಧ ಧರ್ಮದ ಅನುಗುಣವಾಗಿ ಬದಲಾಯಿಸಿಕೊಂಡಿದ್ದರು. ದಿಲ್ಶನ್ ಅವರ ಸೋದರ, ಸೋದರಿಯರು ಕೂಡಾ ಬೌದ್ಧ ಧರ್ಮವನ್ನೇ ಪಾಲಿಸುತ್ತಾ ಬಂಡಿದ್ದಾರೆ ಎಂದು ದಿಲ್ಶನ್ ಅವರ ಕೋಚ್ ರಂಜನ್ ಪರನವಿತನ ಹೇಳಿದ್ದಾರೆ.