ಬೆಂಗಳೂರು, ಫೆಬ್ರವರಿ 09 : ಪೊಲೀಸ್ ಐಜಿಪಿ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ [ಕೆಎಸ್ ಆರ್ ಟಿಸಿ] ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎನ್.ಎಸ್.ರೆಡ್ಡಿ ಮಧ್ಯ ಪ್ರದೇಶದ ಒಪಿ ದೀಕ್ಷಿತ್ ಅವರೊಂದಿಗೆ ಸೇರಿ ಮತ್ತೊಂದು ಸಾಧನೆ ಮಾಡಿದ್ದಾರೆ. 16 ನೇ ಭಾರತೀಯ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ ಶಿಪ್ ನ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.[ಅಮೆರಿಕದಲ್ಲಿ ಚಿನ್ನದ ಬೇಟೆಯಾಡಿದ ಬಿಎನ್ಎಸ್.ರೆಡ್ಡಿ]
ಫೆಬ್ರವರಿ 7 ರಂದು ನವದೆಹಲಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಸಿಆರ್ ಪಿಎಫ್ ನ ರಣದೀಪ್ ದತ್ತಾ ಮತ್ತು ವಿಜಯ್ ಕುಮಾರ್ ಅವರನ್ನು ಮಣಿಸಿ ಜೋಡಿ ಪ್ರಶಸ್ತಿ ಜಯಿಸಿದೆ. ಅಮೆರಿಕದಲ್ಲಿ ನಡೆದ ವಿಶ್ವ ಪೊಲೀಸ್ ಗೇಮ್ಸ್ ನಲ್ಲಿ ರೆಡ್ಡಿ ಟೆನ್ನಿಸ್ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಇದಾದ ನಂತರ ಸಂದರ್ಶನ ನೀಡಿದ್ದ ರೆಡ್ಡಿ, ನಾನು ರೋಜರ್ ಫೆಡರರ್, ನಡಾಲ್ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ. ಪ್ರಮುಖ ಅಂಶಗಳನ್ನು ದಾಖಲು ಮಾಡಿಕೊಂಡು ನನ್ನ ಆಟದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡುತ್ತೇನೆ ಎಂದು ಹೇಳಿದ್ದರು.
5 ಚಿನ್ನದ ಪದಕಗಳನ್ನು ಗೆದ್ದಿದ್ದರು : 2013ರಲ್ಲಿ ಬಿ.ಎನ್.ಎಸ್.ರೆಡ್ಡಿ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದರು. ರೆಡ್ಡಿ ಅವರು ಟೆನಿಸ್, ಬಿಲಿಯರ್ಡ್ಸ್, ಸ್ನೂಕರ್ಗಳಲ್ಲಿ ಪದಕ ಬೇಟೆಯಾಡಿದ್ದರು.