ಬೆಂಗಳೂರು, ಅಕ್ಟೋಬರ್ 16: ಶ್ರೀರಾಮ್ ಪ್ರಾಪರ್ಟೀಸ್ ಬೆಂಗಳೂರು ಮ್ಯಾರಥಾನ್ನ ನಾಲ್ಕನೇ ಆವೃತ್ತಿ ಅತ್ಯುತ್ಸಾಹದಿಂದ ಕೊನೆಗೊಂಡಿದೆ.
ಶ್ರೀರಾಮ್ ಪ್ರಾಪರ್ಟೀಸ್ನ ವ್ಯವಸ್ಥಾಪಕ ನಿರ್ದೇಶಕರಾದ ಮುರಳಿ, ಮಾಜಿ ಬಾಡ್ಮಿಂಟನ್ ಆಟಗಾರ ವಿಮಲ್ ಕುಮಾರ್, ಎಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಮಾಲಿನಿ ಕೃಷ್ಣಮೂರ್ತಿ, ಹೆಚ್ಚುವರಿ ಆಯುಕ್ತ(ಟ್ರಾಫಿಕ್) ಅಭಿಷೇಕ್ ಗೋಯಲ್ ಅವರು ಉಪಸ್ಥಿತರಿದ್ದು, ಓಟಗಾರರನ್ನು ಹುರಿದುಂಬಿಸಿದರು.
ಮೂರು ವಿಭಿನ್ನ ವಿಭಾಗಗಳಾದ 42.19 ಕಿ.ಮೀ ಸಂಪೂರ್ಣ ಮ್ಯಾರಥಾನ್, 21.1 ಕಿ.ಮೀ ಅರ್ಧ ಮ್ಯಾರಥಾನ್ ಮತ್ತು 5 ಕಿ.ಮೀ ಹೋಪ್ ರನ್ ವಿಭಾಗದಲ್ಲಿ ರನಿಂಗ್ ಮತ್ತು ಫಿಟ್ನೆಸ್ ಉತ್ಸಾಹಿಗಳು ಭಾಗವಹಿಸಿದ್ದರು. ಪುರಸ್ಕಾರದ ಹಣವು ಒಟ್ಟು 30 ಲಕ್ಷ ರೂ. ಆಗಿತ್ತು.
ಮ್ಯಾರಥಾನ್ನಲ್ಲಿ ಬೆಂಗಳೂರಿನ ವಿವಿಧ ಸ್ತರದ ಒಟ್ಟು 14,000 ರನ್ನರ್ಗಳು ಭಾಗವಹಿಸಿದ್ದರು. ಅಷ್ಟೇ ಅಲ್ಲ. ಸಮರ್ಥನಮ್ ಟ್ರಸ್ಟ್ ಫಾರ್ ಡಿಸೇಬಲ್ಡ್ನ ಅಂಧ ಮಕ್ಕಳು, ಮಾತೃ ಫೌಂಡೇಶನ್ನ ಅಂಗವಿಕಲ ಮಕ್ಕಳು ಮತ್ತು ಪರಿಕ್ರಮ ಫೌಂಡೇಶನ್ನ ಮಕ್ಕಳು 5 ಕಿ.ಮೀ ಹೋಪ್ ರನ್ನಲ್ಲಿ ಭಾಗವಹಿಸಿದ್ದರು.
ಸಮುದಾಯದಲ್ಲಿ ಓಟವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಹೋಪ್ ರನ್ ಪರಿಚಯಿಸಲಾಗಿದ್ದು, ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಲು ಭಾರೀ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ್ದರು.
ಎಲೈಟ್ ಪುರುಷರು
ವಿಜೇತರು: ಸಂಜಿತ್ : 02:24:56
ಎಲೈಟ್ ಮಹಿಳೆಯರು:
ಜ್ಯೋತಿ ಗವಾತೆ: 03:07:54
ಹಾಫ್ ಮ್ಯಾರಥಾನ್(ಪುರುಷರು)
ದುರ್ಗಾ ಬಹೆದೂರ್: 01:09:01
ಹಾಫ್ ಮ್ಯಾರಥಾನ್(ಮಹಿಳೆಯರು)
ಪ್ರೀಣು ಯಾದವ್ -01:27:30
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ್ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ ಎಂ. ಮುರಳಿ 'ಇಂದು ಇಷ್ಟು ಭಾರೀ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿರುವುದು ಕುತೂಹಲಕರ ಸಂಗತಿಯಾಗಿದೆ. ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾಗಿರುವ ನಾವು ಬದುಕುವುದಕ್ಕೆ ಸ್ಥಳಾವಕಾಶವನ್ನು ಒದಗಿಸುವುದಕ್ಕಷ್ಟೇ ಬದ್ಧವಾಗಿಲ್ಲ. ಬದಲಿಗೆ ಜನರ ಜೀವನ ಶೈಲಿಯ ಮೇಲೂ ಪ್ರಭಾವ ಬೀರಲು ಬಯಸಿದ್ದೇವೆ. ಇದರಲ್ಲಿ ಫಿಟ್ನೆಸ್ ಪ್ರಮುಖ ಸ್ಥಾನ ವಹಿಸುತ್ತದೆ ಮತ್ತು ಬೆಂಗಳೂರನ್ನು ಆರೋಗ್ಯಕರ ನಗರವನ್ನಾಗಿಸುವಲ್ಲಿ ಇದು ಮಹತ್ವದ್ದಾಗಿದೆ ಎಂದರು.