ಹುಣಸೋಡು ಸ್ಫೋಟಕ್ಕೆ ಕಾರಣವಾಗಿದ್ದು ವಾಟರ್ ಜೆಲ್ ? !
ಬೆಂಗಳೂರು, ಜನವರಿ 23: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಶಿವಮೊಗ್ಗ ಹುಣಸೋಡು ಸ್ಫೋಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಾರ್ಮಿಕರನ್ನು ಬಲಿ ಪಡೆದ ಸ್ಫೋಟಕ್ಕೆ ಕಾರಣ ಜಿಲೆಟಿನ್ ಕಟ್ಟಿ ಕಾರಣವಲ್ಲ, ಬದಲಿಗೆ ವಾಟರ್ ಜೆಲ್ ಸ್ಫೋಟಕ ಬಳಿಸಿರುವ ಸಾಧ್ಯತೆ ಬಗ್ಗೆ ವಿಧಿ ವಿಜ್ಞಾನ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹುಣಸೋಡು ಅಬ್ಬಲಗೆರೆ ನಡುವಿನ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಸಿಡಿದು ನೆರೆಯ ಜಿಲ್ಲೆಗಳಿಗೂ ಭೂ ಕಂಪನದ ಅನುಭವ ಆಗಿದೆ. ಸ್ಫೋಟದ ಸದ್ದಿಗೆ ಮನೆ ಬಿಟ್ಟು ಜನರು ಹೊರ ಬಂದಿದ್ದಾರೆ. ನೆರೆಯ ಜಿಲ್ಲೆಗಳಿಗೂ ಸ್ಫೋಟದ ಸದ್ದು ಕೇಳಿಸಿದೆ. ಈ ಘಟನೆಯಲ್ಲಿ ಐವರು ಕಾರ್ಮಿಕರ ಮೃತದೇಹ ಪತ್ತೆಯಾಗಿದ್ದು, ಹದಿನೈದಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಈ ಸ್ಫೋಟಕ್ಕೆ ಜಿಲೆಟನ್ ಕಡ್ಡಿಗಳು ಕಾರಣ ಎಂದೇ ಬಿಂಬಿಸಲಾಗಿದೆ. ಆದರೆ ವಾಸ್ತವದಲ್ಲಿ ಜಿಲೆಟಿನ್ ಕಡ್ಡಿಗಳ ಸ್ಫೋಟ ಈ ಪರಿ ಇರುವುದಿಲ್ಲ ಎಂಬುದನ್ನು ವಿಧಿ ವಿಜ್ಞಾನ ತಜ್ಞ ರವೀಂದ್ರ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
ಈ ಮೊದಲು ಕಲ್ಲು ಕ್ವಾರಿಗಳಲ್ಲಿ ಡೈನಾಮೆಂಟ್ ಬಳಸುತ್ತಿದ್ದರು. ತದನಂತರ ಜಿಲೆಟಿನ್ ಕಡ್ಡಿಗಳನ್ನು ಬಳಸತೊಡಗಿದರು. ಇತ್ತೀಚೆಗೆ ಸಾಮಾನ್ಯವಾಗಿ ಜಿಲೆಟಿನ್ ಕಡ್ಡಿಗಳನ್ನು ಅಪರೂಪಕ್ಕೆ ಬಳಸುತ್ತಾರೆ. ಕಲ್ಲು ಕ್ವಾರಿಗಳಲ್ಲಿ ಯತೇಚ್ಚವಾಗಿ ವಾಟರ್ ಜೆಲ್ ಎಕ್ಸ್ಪ್ಲೋಸೀವ್ ( ಅಮೋನಿಯಂ ನೈಟ್ರೇಟ್ ) ಬಳಸುತ್ತಾರೆ. ಶಿವಮೊಗ್ಗದ ಹುಣಸೋಡು ಸ್ಫೋಟದಲ್ಲೂ ಸಹ ಈ ವಾಟರ್ ಜೆಲ್ ಸ್ಫೋಟಗೊಂಡಿರಬಹುದು ಎಂದು ವಿಧಿ ವಿಜ್ಞಾನ ತಜ್ಞ ರವೀಂದ್ರ ತಿಳಿಸಿದ್ದಾರೆ. ಜಿಲೆಟಿನ್ ಕಡ್ಡಿ ಐವತ್ತು ಅಲ್ಲ, ನೂರು ಒಂದೇ ಸಲ ಸ್ಪೋಟಿಸಿದರೂ ಈ ಪರಿಯ ಸ್ಫೋಟ ಸಂಭವಿಸುತ್ತಿರಲಿಲ್ಲ. ಈ ಸ್ಫೋಟಕ್ಕೆ ವಾಟರ್ ಜೆಲ್ ಸ್ಫೋಟಕ ಕಾರಣವಿರಬಹುದು ಎಂದು ಅವರು ತಿಳಿಸಿದ್ದಾರೆ.
ಜಿಲೆಟಿನ್ ತುಂಬಿದ್ದ ಲಾರಿ ಸ್ಫೋಟ ಎಂದೇ ಎಲ್ಲಡೆ ಸುದ್ದಿಯಾಗುತ್ತಿದೆ. ಲಾರಿ ಸಮೀಪವೇ ಇದ್ದ ಜೀಪು ಸುಮಾರು ಇಪ್ಪತ್ತು ಅಡಿ ದೂರದಲ್ಲಿ ಛಿದ್ರವಾಗಿದೆ. ಸ್ಫೋಟ ಸಂಬಂಧಿಸಿದ ಚಿತ್ರಗಳನ್ನು ವಿಶ್ಲೇಷಣೆ ಮಾಡಿದ್ದೇನೆ. ಇತ್ತೀಚೆಗೆ ಕಲ್ಲು ಗಣಿಗಾರಿಕೆಯಲ್ಲಿ ಜಿಲೆಟಿನ್ ಬದಲಿಗೆ ವಾಟರ್ ಜೆಲ್ ಎಕ್ಸ್ಪ್ಲೋಸೀವ್ ಬಳಸಲಾಗುತ್ತಿದೆ. ಹುಣಸೋಡು ಸ್ಪೋಟದಲ್ಲಿ ಇದು ಬಳಕೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಸ್ಫೋಟಕ್ಕೆ ಸಂಬಂಧಿಸಿದ ಸಾಕ್ಷಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿದಾಗ ಸತ್ಯಾಂಶ ಹೊರಬರಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ಫೋಟ ಸಾಧ್ಯತೆ -1 :
ಸಾಮಾನ್ಯವಾಗಿ ವಾಟರ್ ಜೆಲ್ ಸ್ಪೋಟಕ ಬಿಸಿಯಾದರೆ ಮಾತ್ರ ಅದು ಸ್ಫೋಟಿಸುತ್ತದೆ. ಅದು ಸ್ಫೋಟಗೊಳ್ಳಲು ಡಿಟೋನೇಟರ್ ಅಗತ್ಯ. ಅಗತ್ಯ. ಈ ಸ್ಫೋಟವನ್ನು ಗಮನಿಸಿದರೆ, ಲಾರಿಯಲ್ಲಿ ಒಂದಡೆ ಡಿಟೋನೇಟರ್ ಮತ್ತು ವಾಟರ್ ಜೆಲ್ ಸ್ಪೋಟಕ ಇಟ್ಟಿರುವ ಸಾಧ್ಯತೆಯಿದೆ. ಇದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದೆ. ವಾಟರ್ ಜೆಲ್ ಗೆ ವಿದ್ಯತ್ ನಿಂದ ಬಿಸಿ ಮಾಡದೇ ಅದು ಸ್ಫೋಟಗೊಳ್ಳುವುದಿಲ್ಲ. ಬೆಂಕಿ ಬಿದ್ದರೂ ಏನೂ ಆಗಲ್ಲ. ಹುಣಸೋಡು ಘಟನೆಯಲ್ಲಿ ಇಂತಹ ಅವಘಡ ಸಂಭವಿಸಿರುವ ಸಾಧ್ಯತೆಯಿದೆ ಎಂದು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ನಿವೃತ್ತ ಅಧಿಕಾರಿ ರವೀಂದ್ರ ಅವರು ಹೇಳಿದ್ದಾರೆ.
ಸಾಧ್ಯತೆ 2:
ವಾಟರ್ ಜೆಲ್ ಇಲ್ಲವೇ ಗೋರ್ ಗಮ್ ಮಾದರಿಯ ಸ್ಫೋಟಕ ಬಳಸಿರಬೇಕು. ವಾಟರ್ ಜೆಲ್ ಇಟ್ಟಿರುವ ಜಾಗದಲ್ಲಿ ಬಿಸಿ ತಾಗಿ ಅದು ಸ್ಫೋಟಿಸಿರಬೇಕುಡ. ಯಾರಾದರೂ ಬೀಡಿ ಅಥವಾ ಸಿಗರೇಟು ಸೇದಿ ಅದರಿಂದ ಏನಾದರೂ ಬಿಸಿ ತಾಗಿ ಸ್ಫೋಟಿಸಿದ್ದರೂ ಅಚ್ಚರಿ ಪಡಬೇಕಿಲ್ಲ. ಕ್ರೈಮ್ ಸೀನ್ ತನಿಖೆ ನಡೆಸಿದಾಗ ವಾಸ್ತವ ಗೊತ್ತಾಗಲಿದೆ. ನಾನು ಸ್ಫೋಟ ಕುರಿತ ಚಿತ್ರಗಳನ್ನು ಅನ್ವೇಷಣೆ ಮಾಡಿದ ಪ್ರಕಾರ ವಾಟರ್ ಜೆಲ್ ನಿಂದ ಆಗಿರುವ ಸ್ಫೋಟ ಎಂದೆನಿಸುತ್ತದೆ. ಹೀಗಾಗಿಯೇ ಸ್ಪೋಟದ ಕಂಪನ ಹೊರ ಜಿಲ್ಲೆಗಳಿಗೂ ಕೇಳಿಸಿದೆ.
ಸಾಧ್ಯತೆ 3 :
ಸ್ಥಳೀಯರು ಹಾಗೂ ಮಾಧ್ಯಮಗಳ ಸುದ್ದಿ ಪ್ರಕಾರ ಮೊದಲು ಒಂದು ಸ್ಪೋಟ ಕೇಳಿಸಿದೆ. ಆನಂತರ ಎರಡನೇ ಸಲ ದೊಡ್ಡ ಸ್ಫೋಟದ ಸದ್ದು ಕೇಳಿಸಿದೆ. ಇದನ್ನು ಪರಿಗಣಿಸಿ ಹೇಳುವುದಾದರೆ, ಮೊದಲು ಡಿಟೋನೇಟರ್ ಸ್ಫೋಟಿಸಿದೆ. ಆನಂತರ ವಾಟರ್ ಜೆಲ್ ಸ್ಫೋಟಗೊಂಡಿದೆ. ವಾಟರ್ ಜೆಲ್ ಸ್ಫೋಟಕ ಕಲ್ಲು ಕ್ವಾರಿಯಲ್ಲಿ ನಿಯಮ ಬದ್ಧವಾಗಿ ಬಳಕೆ ಮಾಡಬೇಕು. ಅದು ಗೊತ್ತಿಲ್ಲದೇ ಸ್ಪೋಟಿಸಲು ಹೋಗಿ ಈ ಅವಘಡ ಸಂಭವಿಸಿರುವ ಸಾಧ್ಯತೆಯಿದೆ ಎಂದು ರವೀಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಅನುಮತಿ ಅಗತ್ಯ:
ಅಮೋನಿಯಂ ನೋಟ್ರೋಜನ್ ಸ್ಪೋಟಕ ಜಿಲೆಟಿನ್, ವಾಟರ್ ಜೆಲ್, ಗೋರ್ ಗಮ್, ಡಿಟೋನೇಟರ್, ಡೈನಾಮೆಂಟ್ ಯಾವುದೇ ಸ್ಫೋಟಕ ಬಳಿಸಬೇಕಾದರೂ ಅದನ್ನು ಸುರಕ್ಷಿತವಾಗಿ ಸಾಗಿಸಬೇಕಾದರೂ ಆಯಾ ರಾಜ್ಯದಲ್ಲಿರುವ ಪೆಟ್ರೋಲಿಯಂ ಮತ್ತು ಸ್ಫೋಟಕ ನಿಯಂತ್ರಣ ಸಂಸ್ಥೆಯ ಅನುಮತಿ ಪಡೆಯಬೇಕು. ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮತಿ ಪಡೆಯಬೇಕಾದರೂ ಅನುಮತಿ ಪಡೆಯಬೇಕು. ಪೆಸೋ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಸ್ಪೋಟಕ ಬಳಕೆಗೂ ಮುನ್ನ, ಬಳಕೆ ಉದ್ದೇಶ, ಪ್ರಮಾಣ, ಗಣಿಗಾರಿಕೆ ಸಂಬಂಧಿಸಿದ ಎಲ್ಲಾ ಪರವಾನಗಿಗಳನ್ನು ಸಲ್ಲಿಸಬೇಕು. ಪರವಾನಗಿ ಇಲ್ಲದೇ ಯಾವುದೇ ಸ್ಫೋಟಕ ಬಳಸುವಂತಿಲ್ಲ. ಆದರೆ ಹುಣಸೋಡು ಸ್ಫೋಟದಲ್ಲಿ ಬಳಕೆ ಮಾಡಲಾಗಿದೆ ಎನ್ನಲಾದ ವಾಟರ್ ಜೆಲ್ ಅಕ್ರಮವಾಗಿ ಸಾಗಣೆ ಮಾಡಿ ಗಣಿಗಾರಿಕೆಗೆ ಬಳಸಲು ಪ್ರಯತ್ನಿಸಲಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.