ತಾಲಿಬಾನ್ ಬದಲಾದರೂ ಚೀನಾ-ಪಾಕಿಸ್ತಾನ ಬದಲಾಗುವುದಿಲ್ಲ: ಮೋಹನ್ ಭಾಗವತ್
ನಾಗ್ಪುರ್, ಅಕ್ಟೋಬರ್ 15: ಅಫ್ಘಾನಿಸ್ತಾನದ ಭೌಗೋಳಿಕ ಹಾಗೂ ರಾಜಕೀಯ ಬದಲಾವಣೆ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕಾಳಜಿ ತೋರಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವಾರ್ಷಿಕ ಸ್ಥಾಪನಾ ದಿನವಾದ ವಿಜಯದಶಮಿಯಂದು ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ತಾಲಿಬಾನ್ ಇತಿಹಾಸ ನಮಗೆಲ್ಲ ಗೊತ್ತಿರುವುದೇ ಇದೆ. ಒಂದು ವೇಳೆ ತಾಲಿಬಾನ್ ಬದಲಾಗಬಹುದು, ಆದರೆ ಪಾಕಿಸ್ತಾನ ಮತ್ತು ಚೀನಾಗಳು ಎಂದಿಗೂ ಬದಲಾಗುವುದಿಲ್ಲ ಎಂದಿದ್ದಾರೆ.
RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಜಾವೇದ್ ಅಖ್ತರ್ಗೆ ಲೀಗಲ್ ನೋಟಿಸ್
ಅಫ್ಘಾನಿಸ್ತಾನದ ಜೊತೆಗೆ ಪಾಕಿಸ್ತಾನ ಮತ್ತು ಚೀನಾ ಕೈಜೋಡಿಸಿರುವುದರ ಬಗ್ಗೆ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ. ನೆರೆ ರಾಷ್ಟ್ರಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಗಡಿಯಲ್ಲಿ ನಮ್ಮ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ ಎಂದಿದ್ದಾರೆ.
ಅಫ್ಘಾನಿಸ್ತಾನದ ಜೊತೆಗೆ ಅಪವಿತ್ರ ಮೈತ್ರಿ:
"ಇಸ್ಲಾಂ ಹೆಸರಿನಲ್ಲಿ ಪ್ರತಿಯೊಬ್ಬರೂ ತಾಲಿಬಾನ್ ಬಗ್ಗೆ ಭಯಭೀತರಾಗಲು ಅವರ ಪ್ರವೃತ್ತಿ, ಭಾವೋದ್ರಿಕ್ತ ಮತಾಂಧತೆ, ದೌರ್ಜನ್ಯ ಮತ್ತು ಭಯೋತ್ಪಾದನೆ ಸಾಕಾಗುತ್ತದೆ. ಈ ಮಧ್ಯೆ ಚೀನಾ, ಪಾಕಿಸ್ತಾನ ಮತ್ತು ಟರ್ಕಿಗಳು ತಾಲಿಬಾನ್ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಭೂ ಗಡಿಯ ಭದ್ರತೆಯಷ್ಟೇ ಅಲ್ಲದೇ ಕರಾವಳಿಯಲ್ಲೂ ಕಣ್ಗಾವಲು ಹೆಚ್ಚಿಸಬೇಕಿದೆ. ನಮ್ಮ ವಾಯುವ್ಯ ಗಡಿಗಳ ಬಗ್ಗೆ ಮತ್ತೊಮ್ಮೆ ಗಂಭೀರ ಕಾಳಜಿಯ ತೋರಬೇಕಿದೆ," ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.
ಬಹಿರಂಗ ಅಥವಾ ಗೌಪ್ಯವಾಗಿ ಹಲವಾರು ಸಮಾಜ ವಿರೋಧಿ ಹಿತಾಸಕ್ತಿಗಳು ಒಳ ಒಪ್ಪಂದದಲ್ಲಿ ಸಕ್ರಿಯವಾಗಿವೆ. ಇವರ ಮೋಸ ಮತ್ತು ಕುತಂತ್ರದ ಯೋಜನೆಗಳನ್ನು ಪಡೆಯಲು ಮತ್ತು ಅವರಿಗೆ ಸಮಾಜ ಬಲಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕಾಲ-ಕಾಲಕ್ಕೆ ಈ ಹಿತಾಸಕ್ತಿಗಳು ಉದ್ದೇಶವನ್ನು ಬದಲಿಸುವ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಜನ ಸಮುದಾಯಗಳನ್ನು ದುರುಪಯೋಗಪಡಿಸಿಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ ಎಂದಿದ್ದಾರೆ.
ನಾಗರಿಕರ ಹತ್ಯೆ ತಡೆಯಲು ಅಗತ್ಯ ಕ್ರಮ:
ಕಾನೂನುಬಾಹಿರ ಗಡಿ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಬೇಕು. ರಾಷ್ಟ್ರೀಯ ನಾಗರಿಕ ಹಕ್ಕು ರಚಿಸುವ ಮೂಲಕ ಈ ನುಸುಳುಕೋರರಿಗೆ ಪೌರತ್ವ ಹಕ್ಕು ಸಿಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇತ್ತೀಚೆಗೆ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ಭಾಗವತ್, ಆಡಳಿತವನ್ನು ಹೊಗಳುತ್ತಾ ಕಣಿವೆಯಲ್ಲಿ ಉದ್ದೇಶಿತ ಹತ್ಯೆಗಳನ್ನು ನಿಲ್ಲಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
"ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ರಾಷ್ಟ್ರೀಯವಾದಿಗಳು ವಿಶೇಷವಾಗಿ ಹಿಂದೂಗಳ ಉದ್ದೇಶಿತ ಹತ್ಯೆಗಳನ್ನು ಆರಂಭಿಸಿದ್ದಾರೆ. ಅವರ ಮನೋಬಲವನ್ನು ನಾಶಮಾಡಲು ಮತ್ತು ಕಣಿವೆಯಲ್ಲಿ ಭಯೋತ್ಪಾದನೆಯ ಆಳ್ವಿಕೆಯನ್ನು ಪುನಃ ಸ್ಥಾಪಿಸಲು ಹೀಗೆ ಮಾಡಲಾಗುತ್ತಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು ತಟಸ್ಥಗೊಳಿಸಲು ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು," ಎಂದು ಭಾಗವತ್ ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯದ ಬಗ್ಗೆ ಭಾಗವತ್ ಉಲ್ಲೇಖ:
"ಭಾರತಕ್ಕೆ ರಾತ್ರಿ ಕಳೆದು ಬೆಳಕಾಗುವದಲ್ಲಿ ಸ್ವಾತಂತ್ರ್ಯ ಸಿಗಲಿಲ್ಲ. ಶಾಂತಿಯುತ ಧರಣಿಗಳಿಂದ ಹಿಡಿದು ಸಶಸ್ತ್ರ ಹೋರಾಟಗಳವರೆಗೆ ಎಲ್ಲಾ ರೀತಿ ಪರಿಶ್ರಮದ ಫಲವಾಗಿ ಸ್ವಾತಂತ್ರ್ಯವನ್ನು ಗಳಿಸಿದ್ದೇವೆ. ಬೋಸ್ ಮತ್ತು ಇತರ ಭಾರತೀಯ ಕ್ರಾಂತಿಕಾರಿಗಳು ಮಾಡಿರುವ ಹೋರಾಟ ಮತ್ತು ಹಲವಾರು ಜಾತಿ ಸಮುದಾಯಗಳು, ವಿವಿಧ ಪ್ರದೇಶಗಳಿಗೆ ಸೇರಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮಾಡಿರುವ ಅನೇಕ ತ್ಯಾಗಗಳಿಗೆ ಸ್ವಾತಂತ್ರ್ಯ ಎಂಬ ಮಾನ್ಯತೆ ದಕ್ಕಿದೆ. ಈ ಹೋರಾಟದಲ್ಲಿ ತೊಡಗಿದವರಿಗೆ ಕೃತಜ್ಞತೆ ಅರ್ಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಡಾ. ಮೋಹನ್ ಭಾಗವತ್ ಹೇಳಿದ್ದಾರೆ.
ದೇಶ ವಿಭಜನೆ ಕುರಿತು ಜ್ಞಾಪಿಸಿಕೊಂಡ ಭಾಗವತ್:
ಭಾರತದ ಭೂಪ್ರದೇಶವು ಅಖಂಡತೆ ಮತ್ತು ಏಕತೆಗೆ ಬದ್ಧವಾಗಿದ್ದು, ಅಖಂಡ ರಾಷ್ಟ್ರದ ಕಡೆ ದೂರದೃಷ್ಟಿ ಹೊಂದಿದೆ. ಈ ಹಿನ್ನೆಲೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶ ವಿಭಜನೆಯ ಗಾಯದ ಗುರುತು ಉಳಿದು ಹೋಗಿದೆ. ದೇಶದ ಏಕತೆ ಮತ್ತು ಸಮಗ್ರತೆಗಳನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲು ನಮ್ಮ ಇಡೀ ಸಮಾಜ, ಯುವ ಜನಾಂಗ, ವಿಭಜನೆಯ ಚರಿತ್ರೆಯನ್ನು ಗಮನಿಸಿ, ಅರ್ಥೈಸಿ ನೆನೆಪಿಟ್ಟುಕೊಳ್ಳಬೇಕು," ಎಂದು ಒತ್ತಿ ಹೇಳಿದ್ದಾರೆ.
"ಭಾರತದ ಪ್ರಗತಿ ಮತ್ತು ಮಾನ್ಯತೆ ಸಿಗುತ್ತಿರುವುದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಹಿಸುತ್ತಿಲ್ಲ. ಹಲವು ರಾಷ್ಟ್ರಗಳಲ್ಲಿ ಪ್ರಭಾವಿ ಎನಿಸಿರುವ ಈ ಪಟ್ಟಭದ್ರ ಹಿತಾಸಕ್ತಿಗಳು, ಸ್ವಾರ್ಥ ಶಕ್ತಿ, ದುರ್ವರ್ತನೆ ಪ್ರದರ್ಶಿಸುತ್ತಿವೆ. ಏಕೆಂದರೆ, ಭಾರತ ಧಾರ್ಮಿಕ ದೃಷ್ಟಿಕೋನದಿಂದ ಸಮುದಾಯಗಳನ್ನು ಪ್ರಭಾವಿಸಲು ಸಾಧ್ಯವಿಲ್ಲದ ಸಮತೋಲನವನ್ನು ಹೊಂದಿದೆ. ಸಹಕಾರ ಪ್ರವೃತ್ತಿ ಉತ್ತೇಜನ ನೀಡುವಂತಾ ವಾತಾವರಣ ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ತಡೆಯಲು ಅಪಪ್ರಚಾರದ ಮೂಲಕ ಭಾರತದ ಬಗ್ಗೆ ಗೊಂದಲ ಸೃಷ್ಟಿಸುವ ಮತ್ತು ಭಾರತೀಯರ ಹಾದಿತಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ," ಎಂದಿದ್ದಾರೆ.
ಹಿಂದೂ ದೇವಸ್ಥಾನಗಳ ಬಗ್ಗೆ ಭಾಗವತ್ ಮಾತು:
ಹಿಂದೂ ದೇವಾಲಯಗಳು ಚಾರಿತ್ರಿಕವಾಗಿ ಸಾಮಾಜಿಕ-ಸಾಂಸ್ಕೃತಿಕ ಕೇಂದ್ರಗಳಾಗಿವೆ ಎಂಬುದು ತಿಳಿದಿದೆ. ಆದರೆ, ಈಗಿರುವ ದೇವಾಲಯಗಳು, ಮುಖ್ಯವಾಗಿ ದಕ್ಷಿಣ ಭಾರತದಲ್ಲಿರುವ ದೇವಾಲಯಗಳು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿದ್ದು ಅನೇಕ ರೀತಿಯ ಪಕ್ಷಪಾತಗಳಿಗೆ ಒಳಗಾಗಿವೆ. ದೇವಾಲಯಗಳ ಆಡಳಿತ ಕಳಪೆಯಾಗಿದೆ, ರಾಜ್ಯ ಸರ್ಕಾರಗಳು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ. ದೇವಾಲಯಗಳ ಸ್ವತ್ತುಗಳನ್ನು ಕಾನೂನಿಗೆ ವಿರುದ್ಧವಾಗಿ ಅತಿಕ್ರಮಣ ಆಗುತ್ತಿವೆ. ಧಾರ್ಮಿಕ ಶ್ರದ್ಧೆ ಇಲ್ಲದ ವ್ಯಕ್ತಿಗಳ ದೇವಾಲಯಗಳ ಆಡಳಿತ ಮಂಡಳಿಯಲ್ಲಿ ಸೇರಿಕೊಳ್ಳುತ್ತಿದ್ದಾರೆ," ಎಂದು ಮೋಹನ್ ಭಾಗವತ್ ದೂಷಿಸಿದ್ದಾರೆ.