ಧರ್ಮದ ಮುಖವಾಡದಲ್ಲಿ ವ್ಯವಹಾರ ಮಾಡೋರಿಗೆ ಸರಕಾರದ ಕಡಿವಾಣ ಬೇಡವೆ?
ದೇವಸ್ಥಾನ, ಮಠ- ಮಾನ್ಯಗಳಿಗೆ ಸಂಬಂಧಿಸಿದಂತೆ ಒನ್ಇಂಡಿಯಾ ಕನ್ನಡದ ಓದುಗರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಒನ್ ಇಂಡಿಯಾ ಕನ್ನಡದ್ದಲ್ಲ. - ಸಂಪಾದಕ
ಧಾರ್ಮಿಕ ದತ್ತಿ ನಿಧಿ ಹೊಸ ಕಾಯ್ದೆ ತರಲು ರಾಜ್ಯ ಸರಕಾರ ಮುಂದಾಗಿತ್ತು. ಮಠ-ಮಾನ್ಯಗಳಿಂದ ಭಾರೀ ವಿರೋಧ ವ್ಯಕ್ತವಾಯಿತು. ಹೀಗಾದಲ್ಲಿ ನಾನು ಉಡುಪಿಯ ಕೃಷ್ಣ ಮಠ ಬಿಟ್ಟು ಹೊರ ಹೋಗುತ್ತೇನೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥರು ತಮ್ಮ ಸಿಟ್ಟು ಹೊರ ಹಾಕಿದರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಸಹ ಇಂಥ ನಿರ್ಧಾರ ಬೇಡ ಎಂದರು.
ಮಠ ಮಾನ್ಯಗಳು ಮುಜರಾಯಿ ವ್ಯಾಪ್ತಿಗೆ: ಸೊಗಡು ಶಿವಣ್ಣ ವಿರೋಧ
ಈ ತೀರ್ಮಾನದಿಂದ ಸರಕಾರದ ಅಧೀನದಲ್ಲಿ ಇದ್ದಂತಾಗುತ್ತದೆ ಅಂತಲೋ ಅಥವಾ ಧಾರ್ಮಿಕ ಕಾರ್ಯಗಳಿಗೆ ರಾಜಕೀಯ ಮರ್ಜಿಗೆ ಬೀಳಬೇಕಾಗುತ್ತದೆ ಅಂತಲೋ ಈ ರೀತಿ ಸ್ವಾಮೀಜಿಗಳು ತಮ್ಮ ಅಸಮಾಧಾನ ಹೊರ ಹಾಕಿರರಬಹುದು. ಇದರ ಜತೆಗೆ ಚರ್ಚ್- ಮಸೀದಿಗಳನ್ನು ಸಹ ಸರಕಾರ ತನ್ನ ಹತೋಟಿಗೆ ತೆಗೆದುಕೊಳ್ಳಲಿ ನೋಡೋಣ ಎಂಬ ಸವಾಲು ಹಾಕಿದರು.
ಇನ್ನು ಇದರಿಂದ ಹೆಚ್ಚು ಆಕ್ರೋಶ ತೋರಿದವರು ರಾಜಕಾರಣಿಗಳು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ವಿಪರೀತ ಕೋಪ ಪ್ರದರ್ಶಿಸಿದರು. ಹಿಂದೂ ವಿರೋಧಿ ಸರಕಾರ ಎಂಬ ಹಣೆಪಟ್ಟಿ ಹಚ್ಚಿದರು. ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಸರಕಾರ ಏನು ತರುತ್ತದೋ ಬಿಡುತ್ತದೋ ಎಂಬುದನ್ನು ಪರಿಶೀಲಿಸದೆ ವಿರೋಧ ತೋರಲಾಯಿತು.
ಚುನಾವಣೆ ಮುಂದಿಟ್ಟುಕೊಂಡು ಇಂಥ ನಿರ್ಧಾರಕ್ಕೆ ಸಿದ್ದರಾಮಯ್ಯ ಅವರು ಹಿಂದಡಿ ಇಟ್ಟಿರಬಹುದು. ಆದರೆ ಮಠ-ಮಾನ್ಯ- ದೇವಸ್ಥಾನಗಳ ವಿಚಾರವಾಗಿ ಕೆಲವು ವೈಯಕ್ತಿಕ ಸಲಹೆಗಳಿವೆ. ಈ ಬಗ್ಗೆ ಸರಕಾರ ಏಕೆ ಯೋಚಿಸಬಾರದು? ಇದಕ್ಕೆ ತರ್ಕಬದ್ಧ ಉತ್ತರ- ಸಲಹೆ, ಪ್ರತಿಕ್ರಿಯೆ ನೀಡುವವರಿಗೆ ಸ್ವಾಗತ.
ಸರಕಾರ ಅನುದಾನ ನಿಲ್ಲಿಸಲಿ
ಕರ್ನಾಟಕದ ಮಟ್ಟಿಗೆ ಹಲವು ಸಮುದಾಯದ ಮಠಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಅದರಲ್ಲೂ ಎಂಜಿನಿಯರಿಂಗ್, ಮೆಡಿಕಲ್ ಮತ್ತೊಂದು ಚಿನ್ನದ ಮೊಟ್ಟೆಗಳಂತಾಗಿವೆ. ಇಂಥ ಶಿಕ್ಷಣ ಸಂಸ್ಥೆಗಳು ವಂತಿಗೆ, ಶುಲ್ಕ ಎಂದು ಪಡೆಯುತ್ತಿರುವ ಆದಾಯ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ಪರಿಶೀಲನೆ ಆಗಬೇಕು. ವಿದ್ಯಾರ್ಥಿಗಳಲ್ಲಿ ಅನುಕೂಲ ಮಾಡಿಕೊಡುವ ಉದ್ದೇಶವಿಲ್ಲ ಎಂದು ಗೊತ್ತಾದರೆ ಸರಕಾರದ ಅನುದಾನವನ್ನು ನಿಲ್ಲಿಸಬೇಕು.
ಮಸೀದಿ, ಚರ್ಚ್, ದೇವಸ್ಥಾನಗಳನ್ನು ಸುಪರ್ದಿಗೆ ಪಡೆಯಲಿ
ಇನ್ನು ಎಲ್ಲ ದೇವಸ್ಥಾನಗಳ ಆದಾಯವನ್ನು ಸರಕಾರವೇ ತೆಗೆದುಕೊಳ್ಳಬೇಕು. ಸರಕಾರದಿಂದಲೇ ಆಡಳಿತಾಧಿಕಾರಿಗಳನ್ನು ನೇಮಿಸಿ, ದೇವಸ್ಥಾನಗಳನ್ನು ನಡೆಸಬೇಕು. ಈ ವಿಚಾರದಲ್ಲಿ ಚರ್ಚ್, ಮಸೀದಿ, ದೇವಸ್ಥಾನ ಯಾವುದಕ್ಕೂ ರಿಯಾಯಿತಿ ಬೇಡ. ಎಲ್ಲದರ ಆದಾಯ ಇಷ್ಟು, ಖರ್ಚು ಇಷ್ಟು ಎಂಬುದರ ಲೆಕ್ಕಾಚಾರ ಜನರ ಮುಂದೆ ಇಟ್ಟರೆ ಆಯಿತು.
ಧರ್ಮ ಕಾರ್ಯದಲ್ಲಿ ಇದೆಂಥ ವಾಣಿಜ್ಯ ಉದ್ದೇಶ?
ಧಾರ್ಮಿಕ ಕಾರ್ಯಕ್ರಮ, ಧರ್ಮ ಪ್ರಸಾರವೇ ಮಠ- ದೇವಸ್ಥಾನಗಳ ಮೂಲ ಉದ್ದೇಶ ಅನ್ನೋದಾದರೆ ಹುಂಡಿ ಹಣ ಎಣಿಸುವುದು, ಕಲ್ಯಾಣ ಮಂಟಪ, ಬಡ್ಡಿ ವ್ಯವಹಾರ, ಬ್ಯಾಂಕ್, ವಾಣಿಜ್ಯ ಉದ್ದೇಶದ ಶಿಕ್ಷಣ ಸಂಸ್ಥೆಗಳು, ಮಳಿಗೆಗಳ ಬಾಡಿಗೆ ಇವೆಲ್ಲ ಪ್ರಾಪಂಚಿಕ ವಿಚಾರಗಳ ಬಗ್ಗೆ ಆಸಕ್ತಿ ಏಕೆ? ಸರಕಾರವೇ ಪುಕ್ಕಟೆ ಶಿಕ್ಷಣ ನೀಡಲಿ, ಊಟ ಹಾಕಲಿ, ಉನ್ನತ ಶಿಕ್ಷಣಕ್ಕೂ ಅನುಕೂಲ ಮಾಡಿಕೊಡಲಿ.
ಸರಕಾರ ವಶಕ್ಕೆ ಪಡೆಯಲಿ
ಯಾವುದೇ ಮಠ-ಮಾನ್ಯ, ದೇವಸ್ಥಾನ, ಮಸೀದಿ, ಚರ್ಚ್ ಹೀಗೆ ಧಾರ್ಮಿಕ ಉದ್ದೇಶ ಇರಿಸಿಕೊಂಡ ಸಂಸ್ಥೆಗಳು ಮಾಡಿಕೊಂಡ ಭೂಮಿ -ಕೆರೆ ಒತ್ತುವರಿಗಳನ್ನು ತೆರವು ಮಾಡಿಸಲು ಸರಕಾರ ಕ್ರಮ ಕೈಗೊಳ್ಳಲಿ. ಸದ್ಯಕ್ಕೆ ಲೀಸ್ ಆಧಾರ ಮುಗಿದರೂ ಮುಂದುವರಿದಿರುವ ಸಂಸ್ಥೆಗಳನ್ನು ಅಲ್ಲಿಂದ ಎಬ್ಬಿಸಲಿ. ಮುಜರಾಯಿ ಇಲಾಖೆಗೆ ಸೇರಬೇಕಾದ ದೇವಸ್ಥಾನಗಳನ್ನು ನಿರ್ದಿಷ್ಟ ಮಠದ- ಕುಟುಂಬದ ಆಸ್ತಿ ಮಾಡಿಕೊಂಡಿರುವುದನ್ನು ಸರಕಾರ ವಶಕ್ಕೆ ಪಡೆಯಲಿ.