ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?
ಪತ್ರಕರ್ತ ರವಿ ಬೆಳಗೆರೆಯವರು ಎಂಟು ವರ್ಷಗಳ ಹಿಂದೆ ಬರೆದಿದ್ದ ಈ ಲೇಖನಕ್ಕೆ ಇಷ್ಟೊಂದು ಪ್ರತಿಕ್ರಿಯೆ ಬರುತ್ತದೆಂದು ನೆನೆಸಿರಲಿಲ್ಲ. 'ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲ ಪ್ರಶ್ನೆ!' ಶೀರ್ಷಿಕೆಯ ಲೇಖನಕ್ಕೆ ನಮ್ಮ ಓದುಗರು ಅಭಿಪ್ರಾಯಗಳ ಮಳೆ ಸುರಿಸಿದ್ದಾರೆ. ಪ್ರತಿಕ್ರಿಯೆಗಳು ಒಂದಕ್ಕಿಂತ ಒಂದು ಉತ್ತಮವಾಗಿವೆ. ಅವುಗಳಲ್ಲಿ ಅತ್ಯುತ್ತಮವಾದದ್ದನ್ನು ಆರಿಸಿ ಇಲ್ಲಿ ಪ್ರಕಟಿಸಿದ್ದೇವೆ. ವಸ್ತುನಿಷ್ಠ ಚರ್ಚೆಗೆ ಸ್ವಾಗತ.
ಅವರು ಬ್ರಾಹ್ಮಣರನ್ನು ಬೈದರು ಎಂದ ಮಾತ್ರಕ್ಕೆ ಮುಸ್ಲಿಮರನ್ನು ಬೈಯಬೇಕು ಅಂತಲ್ಲ. (ಬೈಯ್ಯಬೇಕು ಅಂತ ನೀವು ಹೇಳಿಯೂ ಇಲ್ಲ ಬಿಡಿ). ಅಸಲಿಗೆ ವಿಷಯ ಅದಲ್ಲ. ಗೊಡ್ಡು ಸಂಪ್ರದಾಯ ಎಲ್ಲ ಜಾತಿಗಳಲ್ಲೂ, ಧರ್ಮಗಳಲ್ಲೂ ಇದೆ. ಅದೇ ರೀತಿ ಎಲ್ಲರಿಗೂ ಅವರವರ ಜಾತಿ, ಧರ್ಮ ಹೆಚ್ಚು. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಅದನ್ನು ಇನ್ನೊಬ್ಬರ ಮೇಲೆ ಹೇರಲು ಪರೋಕ್ಷ ಪ್ರಯತ್ನ ನಡೆಸುತ್ತಾರೆ. ಅದು ಕೆಲವೊಮ್ಮೆ ಗೊತ್ತಿಲ್ಲದೆ ಕೂಡ ಆಗುತ್ತದೆ. ಆದರೆ ಬೈಗುಳಕ್ಕೆ ಗುರಿಯಾಗಿರುವುದು ಬ್ರಾಹ್ಮಣ ಮಾತ್ರ. ಇದು ಯಾವ ನ್ಯಾಯ?
ಅಷ್ಟಕ್ಕೂ ಬ್ರಾಹ್ಮಣರೇನು ಇದರ ಬಗ್ಗೆ ತಲೆಕೆಡಿಸಿಕೊಂಡು ಕಿತ್ತೋದ್ ಕಾಮೆಂಟುಗಳನ್ನು ಮಾಡುತ್ತಾ ಕೂತುಕೊಳ್ಳುವಷ್ಟು ಮೂರ್ಖರಲ್ಲ ಬಿಡಿ. ಬ್ರಾಹ್ಮಣರನ್ನು ಬೈದು ಬಿಟ್ಟರೆ ಇವರನ್ನು ಜಾತ್ಯತೀತರು ಎನ್ನಲಾಗುತ್ತದೆಯೇ...
ಮಾತೆತ್ತಿದರೆ ಜಾತ್ಯತೀತ ಅಂತ ಬಡಿದುಕೊಳ್ಳುತ್ತಾರಲ್ಲ, ನಮ್ಮದು ಸೆಕ್ಯುಲರ್ ಕಂಟ್ರಿ ಅಂತಾರಲ್ಲ... ಆದರೂ ನಮ್ಮ ದೇಶದಲ್ಲಿ ಅಧಿಕೃತವಾಗಿ ಇಷ್ಟೊಂದು ಜಾತಿಗಳಿವೆ. ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆಗೆ ತಕ್ಕಂತೆ, ಮೂಗಿನ ನೇರಕ್ಕೆ ಮಾತನಾಡುತ್ತಾರೆ. ತಾವು ಮಾತನಾಡುವುದನ್ನು ಇನ್ನೊಬ್ಬರು ಸರಿ ಅಂತ ಒಪ್ಪಿಕೊಂಡರೆ ಇವರಿಗೆ ಸಂತುಷ್ಟವಾಗುತ್ತದೆ. ಇಲ್ಲಾಂದ್ರೆ ಅವನು ಕೋಮುವಾದಿ, ಆರೆಸ್ಸೆಸ್ಸಿಗ, ಬಿ.ಜೆ.ಪಿಯವನು ಅಂತಾರೆ. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]
ಅಸಲಿಗೆ ನಮ್ಮ ದೇಶಕ್ಕೆ ಬೇಕಾಗಿರುವುದು ಇವರಲ್ಲ.... ಇಂದಿನ ಯುವಕರು ಇಂತಹ ಡೇಂಜರಸ್ ಆಸಾಮಿಗಳನ್ನು ಮೂಲೆಗೆ ಸರಿಸಿ ದೇಶಕ್ಕೆ ಏನಾದರೂ ಕೊಡುಗೆ ಕೊಡುವುದರತ್ತ ಗಮನ ಹರಿಸಬೇಕು. ಯೋಧರಾಗಬೇಕು. ಗಡಿಯಲ್ಲಿ ಶತ್ರುಗಳನ್ನು ಹೆಡೆಮುರಿ ಕಟ್ಟಲು ಆ ಸೈನಿಕರು ಹಗಲು ರಾತ್ರಿ ಕಾಯುತ್ತಿದ್ದರೆ, ಒಳಗಿರುವ ಶತ್ರುಗಳನ್ನು ಸದೆಬಡಿಯಲು ಯುವಕರು ಜಾಗೃತರಾಗಬೇಕು. ಅಷ್ಟೇ...
ಅವನು ಬ್ರಾಹ್ಮಣನಾದರೂ ಸರಿ ಮತ್ತೊಬ್ಬನಾದರೂ ಸರಿ. ಜಾತಿ ಹೆಸರಲ್ಲಿ ಕಾಮೆಂಟುಗಳನ್ನು ಮಾಡಿ ವಿಷ ಬೀಜ ಬಿತ್ತುವ ಶಕುನಿಗಳನ್ನು ಬೇರು ಸಮೇತ ಕಿತ್ತು ಹಾಕಿ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿ, ಪರಸ್ಪರ ಗೌರವಿಸಿ, ಭ್ರಷ್ಟಾಚಾರವೆಂಬ ಪಿಡುಗನ್ನು ನಿರ್ಮೂಲನೆ ಮಾಡುವತ್ತ ಹೆಜ್ಜೆ ಹಾಕಬೇಕು. [ಬ್ರಾಹ್ಮಣರೆಂಬ ರೋಮನ್ ಕ್ಯಾಥೋಲಿಕ್ಕರು!]
ಭಾರತ ನಮ್ಮ ಮನೆ. ಒಂದು ಮನೆಯೊಳಗೆ ವಿಭಿನ್ನ ಅಭಿಪ್ರಾಯಗಳು ಇರುತ್ತದೆ. ಸಹಬಾಳ್ವೆಯಿಂದಲೇ ಜೀವನ ನಂದನವನ ಆಗುತ್ತದೆ. ನಾವು ನಾವುಗಳೇ ಕಿತ್ತಾಡಿಕೊಂಡರೆ ಪಕ್ಕದ ಮನೆಯವನು ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಗ್ಯಾರಂಟಿ. ಹಾಗಾಗದಿರಲಿ. ನಮ್ಮ ದೇಶ ಗಟ್ಟಿಯಾಗಲಿ, ಬಡವ ಉದ್ಧಾರವಾಗಲಿ. ಜೈ ಭಾರತಾಂಬೆ....