ಕನ್ನಡ ಕಲಿತರೆ ಏನು ಲಾಭ ಎಂದು ಪ್ರಶ್ನೆ ಕೇಳುವವರಿಗೆ
ಪ್ರೀತಿಯ ಸ್ನೇಹಿತರೇ,
ನಮಸ್ತೆ. ಈ ಪತ್ರವನ್ನು ಓದಲು ನೀವು ಮನಸ್ಸು ಮಾಡಿದ್ದಕ್ಕೆ ನಿಮಗೆ ಮೊದಲು ನನ್ನ ಧನ್ಯವಾದಗಳು. ನಿಮ್ಮಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲೇಬೇಕೆಂದು ಈ ಪತ್ರದ ಮೂಲಕ ನಿಮ್ಮನ್ನು ತಲುಪುತ್ತಿರುವೆ.
ನಮ್ಮ ಕನ್ನಡಿಗರಿಗೇ ಇಂದು ಕನ್ನಡ ಬೇಡವಾಗಿದೆ. ಕನ್ನಡ ಕಲಿತರೆ ಏನು ಲಾಭ? ಎನ್ನುವ ವಿಚಿತ್ರ ಪ್ರಶ್ನೆ ಕೇಳುವವರು ಹೆಚ್ಚಾಗಿದ್ದಾರೆ. ಜೊತೆಗೆ ನಮ್ಮ ಹೈಕೋರ್ಟ್, ಸುಪ್ರೀಂ ಕೋರ್ಟ್ ಸಹ ಇದುವರೆಗೂ ಕನ್ನಡ ಪರ (ಅಥವ ಭಾರತದ ಯಾವುದೇ ಪ್ರಾದೇಶಿಕ ಭಾಷೆಯ ಪರವಾಗಿ) ನಿಂತು ಇಂಗ್ಲಿಷ್ ಭಾಷೆಯ ಜೊತೆಗೆ, ಆ ಆ ರಾಜ್ಯಗಳ ಭಾಷೆಗಳು ಸಹ ಮುಖ್ಯ ಎಂಬ ತೀರ್ಪು ನೀಡದೆ ವಿಚಿತ್ರ ಆಘಾತಕಾರಿ ನಡವಳಿಕೆ ತೋರಿದೆ.
ಜೊತೆಗೆ ನಮ್ಮ ಜನತೆ ಸಹ ಇಂದು "ಬದುಕೆಂದರೆ ಹೇಗಾದರು ಸರಿ, ಶೀಘ್ರವಾಗಿ ಹಣ ಮಾಡುವ ಮಾರ್ಗ ತೋರುವ ಶಿಕ್ಷಣವಷ್ಟೇ ಬೇಕು" ಎಂಬ ಅಜ್ಞಾನದ ಅಂಚಿನಲ್ಲಿ ನಿಂತು ಕನ್ನಡವನ್ನು ಕಡೆಗಣಿಸಿದ್ದಾರೆ. ಇಂಗ್ಲಿಷ್, ಕಂಪ್ಯೂಟರ್ಸ್, ವಿಜ್ಞಾನ ಮತ್ತು ಗಣಿತ ಮಾತ್ರ ಮುಖ್ಯ. ಇತರೆ ಎಲ್ಲಾ ನಗಣ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬೇಸರದ ಸಂಗತಿಯೆಂದರೆ ಇಂದಿನ ಮಾಹಿತಿ ತಂತ್ರಜ್ಞಾನದ, ಜಾಗತೀಕರಣ, ಕಂಪ್ಯೂಟರೈಸೇಷನ್ ಯುಗದಲ್ಲಿ ಕನ್ನಡ ತನ್ನ ನೆಲೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. [ಪರಭಾಷಿಕರಿಗೆ ಹಾಡಿನ ಪೆಟ್ಟು ಕೊಟ್ಟ ಕಿರಿಕ್ ಕೀರ್ತಿ]
ಮೂಲತಃ ಅಮೇರಿಕದಲ್ಲಿ ಸಾಫ್ಟ್ ವೇರ್ ವೃತ್ತಿಯಲ್ಲಿದ್ದ ನನ್ನನ್ನು ಕರ್ನಾಟಕಕ್ಕೆ ಹಿಂತಿರುಗಿ ಬಂದು ಇಲ್ಲೇ ಸಂಪೂರ್ಣ ಕನ್ನಡಮಯವಾದ ಮಳಿಗೆಯನ್ನು ತೆರೆಯುವಂತೆ ಮಾಡಿದ ಈ ಕನ್ನಡ ಭಾಷೆಗೆ ಅಗಾಧ ಶಕ್ತಿಯಿದೆ ಎಂದು ನಾನು ನಂಬಿದ್ದೇನೆ. 10ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ ನಾನು ಪಿ.ಯು.ಸಿ. ಮತ್ತು ಇಂಜಿನಿಯರಿಂಗ್ ಅನ್ನು ಇಂಗ್ಲಿಷ್ ಭಾಷೆಯಲ್ಲಿ ಕಲಿತು, 14 ವರ್ಷ ಸಾಫ್ಟ್ ವೇರ್ ವೃತ್ತಿಯಲ್ಲಿ ಕೆಲಸ ಮಾಡುವಾಗ ಎಲ್ಲಿಯೂ ನನಗೆ ಇಂಗ್ಲೀಷ್ ಭಾಷೆ ಒಂದು ಸಮಸ್ಯೆಯಾಗಲೇ ಇಲ್ಲ.
ಜ್ಞಾನ ಮತ್ತು ಭಾಷೆ ಎರಡು ಬೇರೆ ಬೇರೆ. ಜ್ಞಾನಿಗಳಾಗಲು ಇಂಗ್ಲಿಷ್ ಭಾಷೆ ಕಲಿತಿರಲೇಬೇಕು ಎಂಬ ತಪ್ಪು ಕಲ್ಪನೆಯೇ ಇಂದು ಕನ್ನಡ ಮೂಲೆಗುಂಪಾಗಲು ಕಾರಣ. ಕರ್ನಾಟಕದಲ್ಲಿರುವ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲಿಯುವ ವ್ಯವಸ್ಥೆ ಇಲ್ಲದಿರುವುದು ನಮ್ಮ ಸರ್ಕಾರದ, ನಾಯಕರ, ಹೋರಾಟಗಾರರ ಸಂಪೂರ್ಣ ಸೋಲು ಎಂದೇ ನನ್ನ ಅನಿಸಿಕೆ. ನಮ್ಮ ಸರ್ಕಾರಗಳಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಕನ್ನಡಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಈಗ ನಾವು ಎಚ್ಚೆತ್ತುಕೊಳ್ಳಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಮಾಡಬೇಕಾದ್ದು ಇಷ್ಟೇ.. [ಕನ್ನಡದಲ್ಲೇ ಯುಪಿಎಸ್ಸಿ ಬರೆದ ಭೈರಪ್ಪ ಸಂದರ್ಶನ]
* ಪ್ರಾಥಮಿಕ ಶಿಕ್ಷಣ ಕನ್ನಡ ಮಾದ್ಯಮವಾಗದಿದ್ದರೂ ಚಿಂತೆಯಿಲ್ಲ. ಕಡೆಯ ಪಕ್ಷ ಕನ್ನಡವನ್ನು ಒಂದು ಭಾಷೆಯಾಗಿ ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಕಲಿಸುವ ವ್ಯವಸ್ಥೆಗೆ ಕಾನೂನಿನ ತಿದ್ದುಪಡಿ ತರಬೇಕು.
* ನಮ್ಮ ವ್ಯವಹಾರ (ಮಾರುಕಟ್ಟೆ, ಬ್ಯಾಂಕ್, ಸಾರ್ವಜನಿಕ ಸ್ಥಳಗಳು,ಇತ್ಯಾದಿ) ಕನ್ನಡದಲ್ಲೇ ಇರಬೇಕು. ಇತರೆ ಭಾಷೆಯವರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು.
* ಕಳೆದ ಹಲವಾರು ವರ್ಷಗಳಿಂದ ಇಲ್ಲೇ ನೆಲೆಸಿರುವ ತೆಲುಗು, ತಮಿಳು, ಇತ್ಯಾದಿ ಭಾಷೆಗಳನ್ನು ಮಾತನಾಡುತ್ತಿರುವ ಕನ್ನಡಿಗರು ಇನ್ನು ಮುಂದಾದರು "ನಾವು ಸಹ ಕನ್ನಡಿಗರು" ಎಂಬ ಧೋರಣೆ ತಾಳಬೇಕು.
* ಹೊರಗೆ ಮಾತ್ರವಲ್ಲ ಮನೆಯಲ್ಲಿ ಸಹ ಕನ್ನಡದ ವಾತಾವರಣ ಸೃಷ್ಟಿಸಬೇಕು. ಮಕ್ಕಳಿಗೆ ಕನ್ನಡದಲ್ಲಿರುವ ಸಾಹಿತ್ಯದ ಸೊಗಡಿನ, ರಂಗಭೂಮಿಯ, ಸಿನಿಮಾಗಳ ಪರಿಚಯ ಮಾಡಿಸಬೇಕು. ಕನ್ನಡಿಕ್ಕಿರುವ ಸಾಧ್ಯತೆಗಳನ್ನು ತೋರಿಸಬೇಕು. ಕನ್ನಡದಲ್ಲೂ ಸಹ ಬದುಕಿದೆ. ಕನ್ನಡ ನಂಬಿದರೆ ಕಾಸಿಲ್ಲ ಎಂಬ ಸುಳ್ಳನ್ನು ಅಳಿಸಿಹಾಕಬೇಕು.
ಕೊನೆಗೆ ಎಲ್ಲವನ್ನೂ ಸರ್ಕಾರವೇ ಸರಿಪಡಿಸುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ನಾವು ಕೂರದೇ ನಮ್ಮ ಜವಾಬ್ಧಾರಿಯನ್ನು ನಾವು ಪೂರೈಸಲೇಬೇಕು. ಈ ದಿಕ್ಕಿನಲ್ಲಿ ಒಮ್ಮೆ ಯೋಚಿಸಿ. ನಿಮ್ಮ ಮಕ್ಕಳನ್ನು, ಮರಿ ಮಕ್ಕಳನ್ನು, ಸ್ನೇಹಿತರನ್ನು, ಬಂಧು ಬಳಗವನ್ನು ವಾರಕ್ಕೊಮ್ಮೆಯಾದರೂ ನಮ್ಮ ಕನ್ನಡದ ಲೋಕದಲ್ಲಿ ವಿಹರಿಸಲು ಅವಕಾಶ ಮಾಡಿಕೊಡಿ. ಮಕ್ಕಳಿಗೆ, ಸ್ನೇಹಿತರಿಗೆ ಕನ್ನಡ ಪುಸ್ತಕಗಳ ರುಚಿ ಹತ್ತಿಸಿ. ಕನ್ನಡದ ನೆಪದಲ್ಲಿ ಸ್ನೇಹಿತರಾಗೋಣ. ಕನ್ನಡವನ್ನು ವಿಸ್ತರಿಸೋಣ. [ಸಣ್ಣಕಥೆ: ಮೀಸಲಾತಿಗೆ ಬಲಿಯಾದ ಒಂದು ಛೊಲೋ ಪ್ರೀತಿ!]
ಮುಖ್ಯವಾಗಿ ಮಕ್ಕಳೇ ಮತ್ತು ಯುವಕರೇ,
ಶಾಲಾ,
ಕಾಲೇಜುಗಳ
ಸಿಲಬಸ್,
ಅಬಾಕಸ್
ಗ್ಯಾಡ್ಜೆಟ್,
ಪ್ರಾಜೆಕ್ಟ್
ಗಳನ್ನು
ಪಕ್ಕಕ್ಕಿಟ್ಟು
ಆಗಾಗ
ಕನ್ನಡ
ಲೋಕಕ್ಕೆ
ಒಮ್ಮೆ
ಭೇಟಿ
ಕೊಟ್ಟು
ಅಥವ
ಚೆಕ್
ಅಸ್
ಆನ್
ಇಂಟರ್
ನೆಟ್ಟು.
ಒಟ್ಟಿನಲ್ಲಿ
ಎಲ್ಲಾದರು
ಇರು.
ಕನ್ನಡ
ಕಟ್ಟು.....
ಅಂದು ಕುವೆಂಪು ಬರೆದಿದ್ದು "ಸತ್ತಂತಿಹರನು ಬಡಿದೆಚ್ಚರಿಸು". ಇಂದಿಗೂ ಕುವೆಂಪುರವರ ಆ ಎಚ್ಚರಿಕೆ ಪ್ರಸ್ತುತವಾಗಿಯೇ ಇದೆ. ಇದನ್ನು ಇನ್ನು ಮುಂದಾದರೂ ಸುಳ್ಳು ಮಾಡೋಣವೇ? ಕನ್ನಡ ಉಳಿಸಿ, ಬೆಳೆಸಿ ಎಂಬುದು ಕೇವಲ ಘೋಷಣೆಯಾಗದಿರಲಿ.
ಧನ್ಯವಾದಗಳು,
ವಿ.
ಲಕ್ಷ್ಮೀಕಾಂತ್
(ಕಾಲವಿ)
ನಮ್ಮ ವಿಳಾಸ
ಟೋಟಲ್
ಕನ್ನಡ
638,
31ನೇ
ಅಡ್ಡ
ರಸ್ತೆ
10ನೇ
'ಬಿ'
ಮುಖ್ಯ
ರಸ್ತೆ
(ಪವಿತ್ರ
ಹೋಟೆಲ್
ಎದುರಿರುವ
ರಸ್ತೆ)
ಜಯನಗರ
4ನೇ
ಬಡಾವಣೆ
ಬೆಂಗಳೂರು
560011
ದೂರವಾಣಿ
:
080
-
4146
0325
ಸನಿಹವಾಣಿ
:
92434
55672
www.totalkananda.com