ಪತ್ರ : ರಸ್ತೆಯ ವಿಚಾರದಲ್ಲಿ ಒಣ ಪ್ರತಿಷ್ಠೆ ಸರಿಯೇ?
ಇತ್ತೀಚೆಗೆ ಮಂಗಳೂರಿನ ಒಂದು ಪ್ರತಿಷ್ಠಿತ ರಸ್ತೆಗೆ ಮರುನಾಮಕರಣ ವಿವಾದದಿಂದಾದ ಗೊದಲದಿಂದ ಮನನೊಂದು ಈ ಪತ್ರ ಬರೆಯುತ್ತಿದ್ದೇನೆ. ಒಂದು ಸಣ್ಣ ವಿವಾದ, ಅದೂ, ಕೆಲವು ಅಧಿಕಾರಿಗಳ ಜ್ಞಾನದ ಕೊರತೆಯಿಂದಾಗಿ ಉಂಟಾಗಿದ್ದು, ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದದ್ದು ಬೇಸರ ತರಿಸುತ್ತದೆ.
ಸಂತ ಅಲೋಶಿಯಸ್ ಕಾಲೇಜು ರಸ್ತೆ ಹೆಸರು ಬದಲಾವಣೆಗೆ ವಿರೋಧ
ನಾನು ಕಳೆದ 19 ವರ್ಷಗಳಿಂದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಧ್ಯಾಪಕನಾಗಿ ದುಡಿಯುತ್ತಿದ್ದು, ನನಗೆ ತಿಳಿದ ಪ್ರಕಾರ, ಕಾಲೇಜಿನ ಶತಮಾನೋತ್ಸವ ಸಂದರ್ಭದಲ್ಲಿ, ಲೈಟ್ಹೌಸ್ ರಸ್ತೆಗೆ 'ಸಂತ ಅಲೋಶಿಯಸ್ ಕಾಲೇಜು ರಸ್ತೆ' ಎಂದು ನಾಮಕರಣ ಮಾಡಲಾಯಿತು. ಅದರ ನಾಮಫಲಕವನ್ನು ಕಸ್ತೂರ್ಬಾ ಕಾಲೇಜಿನ ಆವರಣದಲ್ಲಿ ಹಾಕಿರುವುದು ಆ ಸಂಸ್ಥೆಯವರು ಕಾಲೇಜಿನ ಬಗ್ಗೆ ತೋರುವ ಗೌರವವನ್ನು ಸೂಚಿಸುತ್ತದೆ. ಈ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಇಡಬೇಕೆಂಬುದು ಆಗ್ರಹ.
ಸಂತ ಅಲೋಶಿಯಸ್ ಸಂಸ್ಥೆಗೆ 137 ವರ್ಷಗಳ ಇತಿಹಾಸವಿದ್ದು ಸಹಸ್ರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿಉದ್ಯೋಗ ಪಡೆದಿದ್ದಾರೆ. ಈ ರಸ್ತೆಯಲ್ಲಿರುವ ಈ ಸಂಸ್ಥೆ ಮಂಗಳೂರಿನ ಗೌರವ ಹೆಚ್ಚಿಸಿದೆ. ವಿಶ್ವ ಪ್ರಸಿದ್ದ ಚಾಪೆಲ್ ಒಂದು ಪ್ರವಾಸಿ ತಾಣವಾಗಿದ್ದು ದೇಶವಿದೇಶಗಳಿಂದ ಪ್ರವಾಸಾರ್ಥಿಗಳು ಪ್ರತಿ ವರುಷ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ.
ಅದಕ್ಕೂ ಮಿಗಿಲಾಗಿ ಮುಲ್ಕಿ ಸುಂದರರಾಮ ಶೆಟ್ಟಿಯವರಂತಹ ಧೀಮಂತ ವ್ಯಕ್ತಿಯ ಹೆಸರಲ್ಲಿ ಈ ವಿವಾದ ಉಂಟಾಗಿರುವುದು ಮನಸ್ಸಿಗೆ ನೋವುಂಟು ಮಾಡುತ್ತದೆ. ಸುಂದರರಾಮ ಶಟ್ಟಿಯವರು ಒಂದು ಆರ್ಥಿಕ ಸಂಸ್ಥೆಯನ್ನು ಹುಟ್ಟು ಹಾಕಿದವರು. ಅವರ ಅಭಿಮಾನಿಗಳು ಎಲ್ಲಾ ಜಾತಿ ಧರ್ಮದಲ್ಲಿಯೂ ಇದ್ದಾರೆ.
ವಿಜ್ಞಾನ ಕಾಲೇಜುಗಳಲ್ಲಿ ಮಂಗಳೂರಿನ ಅಲೋಶಿಯಸ್ ಗೆ 23ನೇ ರ್ಯಾಂಕ್
ಅವರಂತಹ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ದತ್ತಿ ಉಪನ್ಯಾಸಗಳನ್ನು ಪ್ರತೀ ವರ್ಷ ಏರ್ಪಡಿಸಿ ಹೊಸ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡಬೇಕು. ಅವರ ಹೆಸರಿನಲ್ಲಿ ವಿದ್ಯಾರ್ಥಿ ವೇತನಗಳನ್ನು ಸ್ಥಾಪಿಸಬಹುದು. ಅಷ್ಟೇ ಏಕೆ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನೇ ಸ್ಥಾಪಿಸಬಹುದು. ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ರಸ್ತೆ ವಿವಾದವನ್ನು ಒಂದು ಪ್ರತಿಷ್ಠೆಯ ವಿಚಾರವನ್ನಾಗಿ ಮಾಡಬಾರದಾಗಿ ನನ್ನ ಅರಿಕೆ.
ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಬೆರೆಸುವುದು, ಒಂದಿಬ್ಬರು ರಾಜಕಾರಣಿಗಳನ್ನು ಹರಕೆಯ ಕುರಿಯಾಗಿಸುವುದು, ಉಳಿದವರು ತಮ್ಮ ರಾಜಕಾರಣದ ಚಾಣಾಕ್ಷತೆ ತೋರಿಸುವುದು ಮಂಗಳೂರಿಗೆ ಶೋಭೆ ತರುವುದಿಲ್ಲ. ಇನ್ನೊಂದು ಕಡೆ ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ಮರುನಾಮಕರಣವನ್ನು ವಿರೋಧಿಸಿದರೇ ಹೊರತು ಮುಲ್ಕಿ ಸುಂದರರಾಮ ಶೆಟ್ಟಿಯವರನ್ನು ಅಲ್ಲ.
ಸಂತ ಅಲೋಶಿಯಸ್ನ ಹೆಸರು ಸಂಸ್ಥೆಯ ಹೆಸರಾಗಿ ಮಾತ್ರವಲ್ಲದೇ ಒಬ್ಬ ಮನುಕುಲದ ಸೇವೆಯಲ್ಲಿ ಜೀವನವನ್ನು ಅರ್ಪಿಸಿದ ಸಂತರ ಹೆಸರೂ ಹೌದು. ಅವರ ಆದರ್ಶಗಳಿಂದ ಪ್ರೇರಣೆಗೊಂಡವರಲ್ಲಿ ಮಣಿಪಾಲದ ನಿರ್ಮಾತೃ ಟಿಎಂಎ ಪೈ, ನಿಟ್ಟೆಯ ಕನಸುಗಾರ ವಿನಯ ಹೆಗ್ಡೆಯವರು, ಕ್ರಾಂತಿಕಾರಿ ರಾಜಕಾರಣಿ ಜಾರ್ಜ್ ಫರ್ನಾಂಡಿಸ್ ರವರು, ಏನೆಪೋಯ ಅಬ್ದುಲ್ಲ ಕುಞಃಯವರು, ಇನ್ನೂ ಅನೇಕರಿದ್ದಾರೆ.
ಅಗಣಿತ ಸಂಖ್ಯೆಯ ಅಲೋಶಿಯಸ್ ಕಾಲೇಜಿನ ಹಳೆವಿದ್ಯಾರ್ಥಿಗಳ ಸಮುದಾಯ ಯಾವಾಗಲೂ ಕಾಲೇಜಿನ ಅಭಿಮಾನಿಗಳು ಮಾತ್ರವಲ್ಲ ಆಸ್ತಿಯೂ ಕೂಡಾ. ಸಂಸ್ಥೆಯನ್ನು ಪ್ರತಿನಿಧಿಸುವ ಏಸು ಸಭೆಯ ಸದಸ್ಯರು ಯಾವಾಗಲೂ ಯಾರೊಂದಿಗೂ ದ್ವೇಷ ಬಯಸಿದವರಲ್ಲ. ಯಾವ ಸಮುದಾಯದೊಂದಿಗೂ ನಿಷ್ಠುರವಾಗಿ ನಡೆದುಕೊಂಡವರಲ್ಲ. ಅದರಲ್ಲಿ ಬಂಟ ಸಮೂದಾಯವೂ ಸೇರಿದೆ. ಕೆಲವೇ ಕೆಲವು ವ್ಯಕ್ತಿಗಳು ಬಂಟ ಸಮುದಾಯವನ್ನು ಶಿಕ್ಷಣ ಸಂಸ್ಥೆಯ ವಿರುದ್ದ ಎತ್ತಿ ಕಟ್ಟಲು ಪ್ರಯತ್ನ ಮಾಡುತ್ತಿರುವುದು ವಿಷಾದನೀಯ.
ಅಂತಿಮವಾಗಿ ತಪ್ಪುಗಳು ಎರಡೂ ಪಂಗಡಗಳಲ್ಲಿ ನಡೆದಿರಬಹುದು. ತಪ್ಪುಗಳನ್ನು ಸರಿಪಡಿಸಲು ಮತ್ತಷ್ಟು ತಪ್ಪುಗಳಿಂದ ಸಾಧ್ಯವಿಲ್ಲ. ಈ ವಿವಾದಕ್ಕೆ ಎಲ್ಲರೂ ಸೇರಿ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವುದನ್ನು ಮಂಗಳೂರು ಜನತೆ ಕಾತರದಿಂದ ಎದುರು ನೋಡುತ್ತಿದೆ.