ಪತ್ರ: ಉನ್ನಾವೋ, ಕತುವಾ ಅತ್ಯಾಚಾರ ದೇಶವೇ ತಲೆತಗ್ಗಿಸುವಂಥದ್ದು
ದೇಶವನ್ನೇ ಬೆಚ್ಚಿಬೀಳಿಸುವ ಎರಡು ಪೈಶಾಚಿಕ ಘಟನೆಗಳು ಇತ್ತೀಚೆಗೆ ನಡೆದಿವೆ. ಜಮ್ಮುವಿನ ಅಲೆಮಾರಿ ಜನಾಂಗದ ಎಂಟು ವರ್ಷದ ಅಮಾಯಕ ಬಾಲೆಯೊಬ್ಬಳನ್ನು ಅಪಹರಿಸಿ, ನಾಲ್ಕು ದಿನಗಳ ಕಾಲ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಸರಣಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಂದ ಹೀನಾತಿಹೀನ, ಮನುಕುಲವೇ ತಲೆ ತಗ್ಗಿಸುವಂತಹ ಹೇಯಕರ ಘಟನೆ.
ಇನ್ನೊಂದೆಡೆ ಉತ್ತರಪ್ರದೇಶದ ಉನ್ನಾವೋದಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು, ಸ್ಥಳೀಯ ಬಿಜೆಪಿ ಶಾಸಕನ ಮೇಲೆಯೆ ಆರೋಪ ಮಾಡಲಾಗಿದೆ. ಮಾತ್ರವಲ್ಲದೆ ಸಂತ್ರಸ್ತೆಯ ತಂದೆ ಪೋಲಿಸ್ ಠಾಣೆಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಮೇಲಿನ ಎರಡೂ ಘಟನೆಗಳು ಭಾರತೀಯ ಸಮಾಜವೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ.
ಕಾಮುಕರಿಗೆ ಬಲಿಯಾದ ಮುಗ್ಧ ಬಾಲಕಿ ಪರ ಒಗ್ಗೂಡಿದ ಧ್ವನಿ
ದೇಶದಲ್ಲಿ ಇಂಥ ಘೋರ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.
ಜಮ್ಮುವಿನ ಕತುವಾದಲ್ಲಿ ನಡೆದ ಪೈಶಾಚಿಕ ಘಟನೆಗೆ ಕೋಮು ಆಯಾಮವೂ ಇರುವಂತೆ ಕಂಡು ಬರುತ್ತಿದ್ದು, ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಇದು ನಾಚಿಕೆಗೇಡಿನ ಸಂಗತಿ. ಪ್ರಪಂಚದ ಯಾವುದೇ ಧರ್ಮವೂ, ಯಾವುದೇ ದೇವರೂ ಇಂತಹ ಹೀನ ಕೃತ್ಯವನ್ನು ಕ್ಷಮಿಸುವುದಿಲ್ಲ.
ಆಮ್ ಆದ್ಮಿ ಪಕ್ಷವು ಮೇಲಿನ ಎರಡೂ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತದೆ. ಹಾಗೂ ದುಷ್ಟರ ರಕ್ಷಣೆ ಮಾಡುತ್ತಿರುವ ಉತ್ತರ ಪ್ರದೇಶದ ಸರ್ಕಾರ ಮತ್ತು ಕಾಶ್ಮೀರದ ಪಿಡಿಪಿ-ಬಿಜೆಪಿ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಇಲಾಖೆಯನ್ನು ಒತ್ತಾಯಿಸುತ್ತದೆ. ಮಾತ್ರವಲ್ಲದೇ ಎರಡೂ ಘಟನೆಗಳ ಸ್ವತಂತ್ರ ನ್ಯಾಯಾಂಗ ತನಿಖೆ ನಡೆದು ಆರೋಪಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತದೆ. ಹಾಗೂ ಅತ್ಯಾಚಾರಿಗಳು, ದುರಾಚಾರಿಗಳು, ಕಾಮುಕರ ರಕ್ಷಣೆಗೆ ಪಣತೊಟ್ಟು ನಿಂತಿರುವ ದುಷ್ಟಪಕ್ಷಗಳನ್ನು ಚುನಾವಣೆಯಲ್ಲಿ ಸಾರಸಗಟಾಗಿ ತಿರಸ್ಕರಿಸ ತಕ್ಕ ಪಾಠ ಕಲಿಸಬೇಕೆಂದು ಕರ್ನಾಟಕದ ಜನತೆಗೆ ಮನವಿ ಮಾಡುತ್ತದೆ.
(ಲೇಖಕರು: ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರರು ಮತ್ತು ಸಹಸಂಚಾಲಕರು)