ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಆನ್ ಲೈನ್ ಸೇವೆಗೆ ಏನಾಗಿದೆ?
ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಬಗ್ಗೆ ಇರುವ ಭಕ್ತಿ, ಗೌರವ ಒಟ್ಟಾದ ನಂತರವೂ ಇಂಥದ್ದೊಂದು ಪತ್ರ ಬರೆಯದಿರಲು ಸಾಧ್ಯವಾಗಲಿಲ್ಲ. ಇದು ನನ್ನೊಬ್ಬನ ಪರಿಸ್ಥಿತಿ ಅಗಿರಲಿ ಎಂದು ಆ ರಾಯರನ್ನು ಕೇಳಿಕೊಳ್ತೇನೆ. ಒಂದು ವೇಳೆ ನನ್ನ ರೀತಿಯೇ ಸಮಸ್ಯೆ ಎದುರಿಸಿದಂಥವರು ಇದ್ದರೆ ದಯವಿಟ್ಟು ಅಭಿಪ್ರಾಯ ತಿಳಿಸಿ, ಕಡೇ ಪಕ್ಷ ಆ ವ್ಯವಸ್ಥೆಯಲ್ಲಿ ಒಂದು ಬದಲಾವಣೆಯಾದರೂ ಅಗಲಿ ಎಂಬುದಷ್ಟೇ ನನ್ನ ನಿರೀಕ್ಷೆ.
ನನ್ನ ಹೆಸರು ಶ್ರೀನಿವಾಸ. ನನ್ನ ತಂದೆಯವರು ಒಂದು ದಿನದ ಮಟ್ಟಿಗೆ ಮಂತ್ರಾಲಯಕ್ಕೆ ಹೋಗಿ ಒಂದು ಯಾವುದಾದರೂ ಸೇವೆ ಮಾಡಿಸಿ ಬರಬೇಕು ಅನ್ನಿಸ್ತಿದೆ ಎಂದರು. ಅವರ ಆರೋಗ್ಯ ಸರಿಯಾಗಿಲ್ಲದ ಕಾರಣ, ಆನ್ ಲೈನ್ ಮೂಲಕ ಸೇವೆ ಬರೆಸೋಣ ಅಂದುಕೊಂಡು ಮಂತ್ರಾಲಯದ ವೆಬ್ ಸೈಟ್ ಪರಿಶೀಲಿಸಿದೆ.[ವೃಂದಾವನದ ಮುಂದೆ ಮಂತ್ರಾಲಯ ಶ್ರೀಗಳು ಕಣ್ಣೀರಿಟ್ಟಿದ್ದು ಯಾಕೆ?]
ಆ ರೀತಿ ಆನ್ ಲೈನ್ ನಲ್ಲಿ ಸೇವೆಗೆ ಹಣ ಟ್ರಾನ್ಸ್ ಫರ್ ಮಾಡಿದರೆ ಮನೆ ವಿಳಾಸಕ್ಕೆ ಪ್ರಸಾದ ಕೂಡ ತಲುಪತ್ತದೆ. ಆದರೆ ಆ ಸೇವೆಯ ಮೊತ್ತ ಒಂದು ಸಾವಿರಕ್ಕಿಂತ ಹೆಚ್ಚಿರಬೇಕು ಎಂದಿತ್ತು. ಅಂತೂ ನನ್ನ ತಂದೆಯನ್ನು ಸಮಾಧಾನ ಮಾಡುವುದಕ್ಕೆ ಒಂದು ಅವಕಾಶ ಸಿಕ್ಕಿತು ಎಂಬ ತೃಪ್ತಿಯಿಂದ ರಜತ ರಥ ಸೇವೆಗಾಗಿ ಕೊಟ್ಟಿದ್ದೆ.
ಆಗಸ್ಟ್ 31ಕ್ಕೆ ಸೇವೆಗೆ ದಿನ ಆಯ್ಕೆ ಮಾಡಿಕೊಂಡಿದ್ದೆ. ಅದಾದ ವಾರದೊಳಗೆ ಆನ್ ಲೈನ್ ಮೂಲಕ ಪ್ರಸಾದ ಮನೆ ವಿಳಾಸಕ್ಕೆ ಬರಬಹುದು ಎಂದುಕೊಂಡೆ, ಬರಲಿಲ್ಲ. ಅದಾದ ಮೇಲೆ ಮಠದ ವೆಬ್ ಸೈಟ್ ನಲ್ಲಿ ಹಾಕಿರೋ ಎಲ್ಲ ದೂರವಾಣಿ ಸಂಖ್ಯೆಗೂ ಕರೆ ಮಾಡಿದೀನಿ. ಅದರಲ್ಲೂ +91 8512-279429ಸಂಖ್ಯೆಗೆ ಕನಿಷ್ಠ 50 ಸಲ ಕರೆ ಮಾಡಿರಬಹುದು. ಒಂದು ಸಲಕ್ಕೂ ಸ್ವೀಕರಿಸಲಿಲ್ಲ.[ರಾಯರ ವರ್ಧಂತಿಯಂದು ಸುವರ್ಣ ಕವಚ ಸಮರ್ಪಣೆ]
ಆನ್ ಲೈನ್ ಸೇವೆಯ ಪ್ರಸಾದ ಯಾವಾಗ ತಲುಪಬಹುದು ಎಂದು ಕೇಳೋಣ ಅಂದುಕೊಂಡು ಬಹಳ ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ. ಈ ರೀತಿ ಆನ್ ಲೈನ್ ಸೇವೆ ಅಚ್ಚುಕಟ್ಟಾಗಿ ಒದಗಿಸಲಿಕ್ಕೆ ಆಗೋದಿಲ್ಲ ಅನ್ನೋದಾದರೆ ವ್ಯವಸ್ಥೆಯಾದರೂ ಯಾಕೆ? ನನ್ನ ತಂದೆ ಪ್ರತಿ ದಿನ ಪ್ರಸಾದ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಇದು ಮಂತ್ರಾಲಯದ ಆನ್ ಲೈನ್ ಸೇವೆ ಅಂತ ಫೇಸ್ ಬುಕ್ ಗೆ ಹಾಕಿಬಿಡೋಣ ಅನ್ನಿಸಿತು. ಅದಕ್ಕೂ ಮುನ್ನ ಒನ್ ಇಂಡಿಯಾ ವೆಬ್ ಸೈಟ್ ನಲ್ಲಿ ಹಾಕೋಣ ಅಂದುಕೊಂಡು ನನ್ನ ಬೇಸರವನ್ನು ಇಲ್ಲಿ ಹಂಚಿಕೊಳ್ತಿದೀನಿ. ನನ್ನ ಉದ್ದೇಶ ಇಷ್ಟೇ, ನನ್ನಂತೆಯೇ ರಾಯರ ಪ್ರಸಾದ ಎದುರು ನೋಡುತ್ತಾ, ಸರಿಯಾದ ಸ್ಪಂದನೆ ದೊರೆಯದೆ ಬೇಸರವಾಗಿದ್ದವರಿದ್ದರೆ ಒಂದು ಪರಿಹಾರ ದೊರೆಯಬೇಕು.[ರಾಯರ ವರ್ಧಂತಿಯಂದು ಸುವರ್ಣ ಕವಚ ಸಮರ್ಪಣೆ]
ಅಷ್ಟೊಂದು ದೂರವಾಣಿ ಸಂಖ್ಯೆಯನ್ನು ಹಾಕಿ ಕರೆಯೇ ಸ್ವಿಕರಿಸಲಿಲ್ಲ ಅಂದರೆ ಹೇಗೆ? ಕಡೇ ಪಕ್ಷ ಪ್ರಸಾದ ಇಂಥ ದಿನ ತಲುಪುತ್ತದೆ ಎಂದು ಅನ್ ಲೈನ್ ನಲ್ಲೇ ತಿಳಿದುಕೊಳ್ಳುವುದಕ್ಕೆ ಒಂದು ವ್ಯವಸ್ಥೆ ಮಾಡಬಹುದಲ್ಲವೇ? ಇಲ್ಲಿ ಹಣದ ವಿಚಾರಕ್ಕಿಂತ ಭಾವನಾತ್ಮಕ ಸಂಗತಿ ಮುಖ್ಯವಾಗಿರುತ್ತದೆ ಅಲ್ಲವಾ?