ರಸ್ತೆ ಗುಂಡಿಗಳ ಜೊತೆ ಢೋಂಗಿ ಜ್ಯೋತಿಷ್ಯವನ್ನೂ ಮುಚ್ಚಿ!
ಜ್ಯೋತಿಷ್ಯ ಮೂಢನಂಬಿಕೆ ಅಲ್ಲ. ಅದನ್ನು ಶಾಸ್ತ್ರಬದ್ಧವಾಗಿ, ಲೆಕ್ಕ ಪ್ರಕಾರ ಕಲಿತು, ವೈಜ್ಞಾನಿಕತೆಯ ತಳಹದಿಯ ಮೇಲೆ ಅಭ್ಯಸಿಸಿ, ಕೇವಲ ಹಣ, ಪೊಳ್ಳು ಕೀರ್ತಿ, ಆಚಾರಕ್ಕಷ್ಟೇ ಸೀಮಿತಗೊಳಿಸಿ ಕುಲಗೆಡಿಸದೇ ಹೋದರೆ ಅದರಿಂದ ಬಹು ಉಪಯೋಗವಿದ್ದೇ ಇದೆ.
ಆದರೆ, ಈಗ ಆಗುತ್ತಿರುವುದು ಅದಕ್ಕೆ ತದ್ವಿರುದ್ಧ. ಬೆಳ್ಬೆಳಗ್ಗೆ ಟಿ.ವಿ ಹಾಕೋ ಹಾಂಗೇ ಇಲ್ಲ.. ಇದ್ದ ಬಿದ್ದ ಬಣ್ಣವನ್ನೆಲ್ಲಾ ಹಣೆಗೆ ಬಳಿದುಕೊಂಡು, ಕೈಯಲ್ಲಿ ದಂಡ, ಕಮಂಡಲ ಎಲ್ಲಾ ಹಿಡಿದು ಪೋಸ್ ಕೊಟ್ಟು, ಬಾಯಿಗೆ ಬಂದ ತಪ್ಪು ತಪ್ಪು ಶ್ಲೋಕಗಳನ್ನು ಹೇಳುತ್ತಾ, ತಾವೇ ಪ್ರಕಾಂಡ ಪಂಡಿತರು ಎಂಬಂತೇ ಸ್ವಯಂ ಬಿಂಬಿಸಿಕೊಂಡು, ಹುಚ್ಚುಚ್ಚುಗಾಗಿ, ಸಿಕ್ಕಾಪಟ್ಟೆ, ಬಾಯಿಗೆ ಬಂದಂತೇ ಭವಿಷ್ಯ ಒದರುತ್ತಿರುವ ಛದ್ಮವೇಷಧಾರಿಗಳಿಂದ ನಯಾ ಪೈಸೆ ಉಪಯೋಗವಾಗುತ್ತಿಲ್ಲ..
ಉಲ್ಟಾ, ಮುಗ್ಧ, ದಡ್ಡ ಜನರೆಲ್ಲಾ ಬಲಿ ಬೀಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ, ಕೊನೆಗೆ ಅವರ ನಂಬರ್ ಹೇಳುವುದರಿಂದ, ಜನ ಅವರನ್ನು ಸಂಪರ್ಕಿಸಿ, ಮೋಸಕ್ಕೊಳಗಾಗಿ, ಮತ್ತಷ್ಟು ಬೇಸರ, ಖಿನ್ನತೆ, ಹತಾಶೆಗೆ ಹೋಗಿ, ನಂಬಿಕೆ, ವಿಶ್ವಾಸ ಕಳೆದುಕೊಂಡು ಅವರ ಸ್ವಾಸ್ಥ್ಯದ ಜೊತೆ ಸಮಾಜದ ಸ್ವಾಸ್ಥ್ಯವೂ ಹದಗೆಟ್ಟುಹೋಗುತ್ತಿದೆ. [ಟಿವಿ ವಾಹಿನಿಗಳ ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧ?]
ಹಾಗಿರುತ್ತದೆ ಅವರ ಜಾಲ, ಬೀಸುವ ಬಲೆ. ನಿಶ್ಚಿತವಾಗಿ ಇದು ನಿಲ್ಲಬೇಕು. ಟಿ.ವಿಯಲ್ಲಿ ಲೇವಡಿ ಮಾಡುತ್ತಿರುವುದು ಜನರ ಭಾವನೆಗಳನ್ನು ಮಾತ್ರವಲ್ಲ, ನಿಜವಾದ ಅಪ್ಪಟ ಜ್ಯೋತಿಷ್ಯ ವಿಜ್ಞಾನವನ್ನೂ ಕೂಡಾ! ಹೀಗಾಗಿ ಸರಕಾರ ರಸ್ತೆಯ ತುಂಬಾ ಆವರಿಸಿಕೊಂಡಿರುವ ಗುಂಡಿಗಳ ಮುಚ್ಚುವುದರ ಜೊತೆಗೇ ಇಂಥಾ ಹಾಳು ಕಾರ್ಯಕ್ರಮಗಳನ್ನು ಮುಚ್ಚುವುದೂ ಅತಿ ಆವಶ್ಯಕವೇ. [ಟಿವಿಯಲ್ಲಿ ಜ್ಯೋತಿಷ್ಯ ಮೌಢ್ಯ ಬಿತ್ತುತ್ತಿದೆಯಾ? ವೋಟ್ ಮಾಡಿ]
ಟಿ.ವಿ ಜ್ಯೋತಿಷ್ಯ(ಢೋಂಗಿ)ವನ್ನು ನಿಷೇಧಿಸುವ ಕ್ರಮ ಸ್ವಾಗತಾರ್ಹ. ಹಾಗೆಂದು ನಿಜವಾದ, ಗಣಿತಾಧಾರಿತ ಜ್ಯೋತಿಷ್ಯವನ್ನೇ ಅವೈಜ್ಞಾನಿಕ ಎನ್ನುವುದನ್ನು ನಾನು ಒಪ್ಪಲಾರೆ. ಇದು ಅವರ ಅಜ್ಞಾನವನ್ನಷ್ಟೇ ತೋರುವುದು. [ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧ : ಜಯಚಂದ್ರ ಹೇಳುವುದೇನು?]