ನಿಮಗೆ ಆತ್ಮಸಾಕ್ಷಿ ಇದ್ರೆ, ಮಾನ ಮರ್ಯಾದೆ ಇದ್ದರೆ...
ಕರ್ನಾಟಕದ ಮಾನ್ಯ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ಇತ್ತೀಚೆಗೆ ಆಯ್ಕೆಯಾಗಿರುವ, ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿರುವ ನಿರ್ಮಲಾ ಸಿತಾರಾಮನ್ ಅವರಿಗೆ ಹಾಗೂ ಎಲ್ಲ ಕನ್ನಡಿಗರಿಗೂ ಕಾವೇರಿ ಸಂಕಷ್ಟದ ಬಗ್ಗೆ ಒಬ್ಬ ಕನ್ನಡಿಗನ ತೆರದ ಪತ್ರ...
ಕರ್ನಾಟಕದಿಂದ ರಾಜ್ಯಸಭೆಗೆ ಅಯ್ಕೆಯಾದ ತಾವಿಬ್ಬರೂ ಕಾವೇರಿ ವಿಷಯದಲ್ಲಿ ಕನ್ನಡಿಗರಿಗೆ ಅಗಿರುವ ಅನ್ಯಾಯದ ಬಗ್ಗೆ ದೆಹಲಿಯಲ್ಲಿ ಕನ್ನಡಿಗರ ಪರವಾಗಿ ದ್ವನಿ ಎತ್ತುತ್ತೀರ ಎಂದು ಭಾವಿಸಿದ್ದೆವು. ಆದರೆ ಇದರ ಬಗ್ಗೆ ನಿಮ್ಮಿಂದ ಒಂದೇ ಒಂದು ಅನಿಸಿಕೆಯೂ ಹೊರಬಿದ್ದಿಲ್ಲ ಏಕೆ?
ಈ ಬಾರಿ ಪಶ್ಚಿಮ ಘಟ್ಟದ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ವೈನಾಡಿನಲ್ಲಿ ನೈರುತ್ಯ ಮುಂಗಾರು ಮಳೆ ಕೈಕೊಟ್ಟು, ಕಾವೇರಿ ಕಣಿವೆಯ ಜಲಾಶಯಗಳು ತುಂಬದೆ ಜಲಾಶಯಗಳಲ್ಲಿ ಅತ್ಯಂತ ಕಡಿಮೆ ನೀರು ಸಂಗ್ರಹವಾಗಿ, ನಮ್ಮ ನಾಡಿನ ರೈತರಿಗೆ ಅವರ ಮೊದಲ ಬೆಳೆಗೆ ನೀರು ಪೂರೈಸಲು ಸಾದ್ಯವಾಗಿಲ್ಲ. ನೀರಾವರಿ ಬಿಡಿ ಕುಡಿಯುವ ನೀರಿಗೆ ಈಗ ಸಂಗ್ರಹವಾಗಿರುವ ನೀರು ಮುಂದಿನ ಬೇಸಿಗೆವರೆಗೆ ಸಾಲುವುದಿಲ್ಲ.
ಹೀಗಿರುವಾಗ ತಮಿಳುನಾಡಿನ ಎರಡನೆಯ ಸಾಂಬಾ ಬೆಳೆಗೆ ನೀರು ಬಿಡಿ ಎಂದು ಅಲ್ಲಿನ ಮುಖ್ಯಮಂತ್ರಿ ತಗಾದೆ ತೆಗೆದು ಕೋರ್ಟಿನ ಮೆಟ್ಟಿಲೇರಿರುವುದು ಎಷ್ಟು ಸರಿ? ಕರ್ನಾಟಕದ ಈ ಸಂಕಷ್ಟ ಪರಿಸ್ಥಿತಿ ನಿಮಗೆ ಗೊತ್ತಿಲ್ಲವೇ? ಕರ್ನಾಟಕದಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಿ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಸಾಕಷ್ಟು ನೀರು ಶೇಖರಣೆಯಾದಾಗ ತಮಿಳುನಾಡಿಗೆ ನೀರು ಹರಿಸಿಲ್ಲವೇ?
ನಮ್ಮ ಜಲಾಶಯದಲ್ಲಿ ಸಾಕಷ್ಟು ನೀರಿಲ್ಲದಿರುವಾಗಲೂ ಅಷ್ಟೇ ನೀರು ಬಿಡಿ ಎಂದರೆ ಹೇಗೆ? ತಮಿಳುನಾಡು ಕರ್ನಾಟಕದ ಸಂಕಷ್ಟ ಹಂಚಿಕೊಳ್ಳುವ ದೊಡ್ಡತನ ತೋರಬೇಕಲ್ಲವೇ? ಕಾವೇರಿ ನ್ಯಾಯಮಂಡಲಿ ಮಳೆ ಅಭಾವದ ವರ್ಷದಲ್ಲಿ ಲಭ್ಯವಿರುವ ನೀರು ಎಲ್ಲ ನಾಲ್ಕು ರಾಜ್ಯಗಳಿಗೆ ಸಂಕಷ್ಟ ಸೂತ್ರದನ್ವಯ ಹಂಚಲು ವಿಫಲವಾಗಿದೆ.
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಹೀಗಿರುವಾಗ ಕರ್ನಾಟಕಕ್ಕೆ ಇಷ್ಟೇ ಪ್ರಮಾಣದಲ್ಲಿ ನೀರು ಬಿಡಿ ಎಂದು ಸರ್ವೋಚ್ಚ ನ್ಯಾಯಾಲಯವು ಯಾವ ಆಧಾರದಲ್ಲಿ ಆದೇಶಿಸಿದೆ. ಇದು ಕರ್ನಾಟಕದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ? ಕರ್ನಾಟಕದಿಂದ ಆಯ್ಕೆಯಾದ ನಿಮಗೆ ಈ ಬಗ್ಗೆ ಕೇಂದ್ರದಲ್ಲಿ ಹಾಗೂ ಮಾಧ್ಯಮಗಳಲ್ಲಿ ತಿಳಿಹೇಳಬೇಕಾದುದು ನಿಮ್ಮ ಕರ್ತವ್ಯವಲ್ಲವೇ? ನಿಮಗೆ ಆತ್ಮಸಾಕ್ಷಿ ಇದ್ರೆ, ಮಾನ ಮರ್ಯಾದೆ ಇದ್ದರೆ ದಯವಿಟ್ಟು ಎಚ್ಚೆತ್ತು ಕರ್ನಾಟಕದ ಪರವಾಗಿ ಬಾಯಿ ಬಿಡಿ ಅಥವಾ ನಿಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ....
ಇನ್ನು ನಮ್ಮದೇ ನೆಲದಲ್ಲಿ ಹುಟ್ಟಿದ ಜಯಲಲಿತಾ ಅಧಿಕಾರಕ್ಕೆ ಬಂದಾಗಲೆಲ್ಲ ಕರ್ನಾಟಕದ ಜನರಿಗೆ ದ್ರೊಹವೆಸಗುತ್ತಿದ್ದಾರೆ. ಇವರಿಗೆ ಕರ್ನಾಟಕದ ಮೈಸೂರಿನ ಚಾಮುಂಡಿಯ ಆಶೀರ್ವಾದ ಬೇಕು, ಆದರೆ ಕನ್ನಡಿಗರ ಮೇಲೆ ಸದಾ ದ್ವೇಷದಿಂದ ಕಾವೇರಿ ವಿಷಯದಲ್ಲಿ ಅನ್ಯಾಯವೆಸಗುತ್ತಿದ್ದಾರೆ. ಇವರಿಗೆ ಧಿಕ್ಕಾರವಿರಲಿ.
ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದಾರೆ ಎಂಬ ಒಂದೇ ಕಾರಣಕ್ಕೆ ತಮಿಳು ನಟ ರಜನೀಕಾಂತರನ್ನು ಕನ್ನಡಿಗರು ನಮ್ಮವರೇ ಎಂದು ಹೆಮ್ಮೆಯಿಂದ ತಲೆ ಮೇಲೆ ಹೊತ್ತು ಕುಣಿದರು. ಕಾವೇರಿ ವಿಷಯದಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಸ್ವಲ್ಪವಾದರೂ ಅವರ ಹೃದಯ ಮಿಡಿದಿದೆಯೆ? ಕನ್ನಡಿಗರ ಸಂಕಷ್ಟಕ್ಕೆ ಮರುಗದ ಅವರನ್ನು ಅವರ ಚಿತ್ರಗಳನ್ನು ಕನ್ನಡಿಗರು ಬಹಿಷ್ಕರಿಸಿ ಬುದ್ಧಿ ಕಲಿಸಬೇಕಾಗಿದೆ.
ಬೆಂಗಳೂರಿನಲ್ಲಿ ನೆಲೆಸಿ ಕಾವೇರಿ ನೀರು ಕುಡಿದು ಬದುಕುತ್ತಿರುವ ತಮಿಳರು, ತೆಲುಗರು, ಮಲಯಾಳಿಗರು, ಉತ್ತರ ಭಾರತೀಯರು ಕನ್ನಡಿಗರಿಗೆ ಒದಗಿರುವ ಸಂಕಷ್ಟದ ಸಮಯದಲ್ಲಿ ಅವರಿಗೆ ನೈತಿಕ ಬೆಂಬಲ ನೀಡಬೇಕಾಗಿರುವುದು ಅವರ ಕರ್ತವ್ಯ ಹಾಗೂ ಸೌಜನ್ಯ. ಇಲ್ಲದಿದ್ದರೆ ಅವರು ನೆಲೆಸಿರುವ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಸುವುದನ್ನು ಬೆಂಗಳೂರು ಜಲಮಂಡಲಿ ನಿಲ್ಲಿಸಬೇಕು. ಇಲ್ಲದಿದ್ದರೆ ಕನ್ನಡಿಗರೇ ಆ ಕೆಲಸ ಮಾಡಬೇಕಾಗುತ್ತದೆ.
ಒಟ್ಟಿನಲ್ಲಿ ಕಾವೇರಿ ವಿಷಯದಲ್ಲಿ ಕನ್ನಡಿಗರಿಗೆ ಒದಗಿರುವ ಸಂಕಷ್ಟವನ್ನು ಸಮಸ್ತ ಕನ್ನಡಿಗರು ಒಗ್ಗಟ್ಟಿನಿಂದ ಎದುರಿಸಬೇಕಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ವಾದಿಸಲು ವಿಫಲವಾಗಿ, ಕನ್ನಡಿಗರಿಗೆ ದ್ರೋಹವೆಸಗಿರುವ ರಾಜ್ಯ ಸರಕಾರಕ್ಕೂ ಮುಂದಿನ ಚುಣಾವಣೆಯಲ್ಲಿ ಜನ ಬುದ್ಧಿ ಕಲಿಸಬೇಕಿದೆ....