ಚಂಪಾ ಅವರೇ ಇದಕ್ಕಿಂತ ಸಂಕ್ರಮಣ ಕಾಲ ಇನ್ನಿದೆಯೇ?
ಮೈಸೂರಿನಲ್ಲಿ ನವೆಂಬರ್ ನಲ್ಲಿ ನಿಗದಿಯಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಚಂದ್ರಶೇಖರ ಪಾಟೀಲ ಆಯ್ಕೆಯಾಗಿದ್ದಾರೆ. ಸದ್ಯದ ಸನ್ನಿವೇಶದ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡದ ಓದುಗರೊಬ್ಬರು ಚಂಪಾಗೆ ಪತ್ರ ಬರೆದಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ. -ಸಂಪಾದಕ
ಮಾನ್ಯ ಚಂಪಾ ಅವರಲ್ಲೊಂದು ವಿನಂತಿ.
ಪ್ರೊ. ಕಲಬುರ್ಗಿಯವರ ಕೊಲೆಗಾರರನ್ನು ಈ ಸರಕಾರ ಇದುವರೆಗೂ ಬಂಧಿಸಿಲ್ಲ.
ಗೌರಿ ಲಂಕೇಶರ ಹತ್ಯೆಗೈದವರನ್ನೂ ಬಂಧಿಸಿಲ್ಲ.
ರಸ್ತೆಯಲ್ಲಿ ಅಪಘಾತ ಮಾಡಿದ ಆರೋಪಿ ಆಸ್ಪತ್ರೆಯಿಂದ ಪರಾರಿಯಾಗಲು ಸರಕಾರದ ಸಿಬ್ಬಂದಿಯೇ ಸಹಕರಿಸಿದ್ದಾರೆ.
ಇನ್ನು ಕೊಲೆಗೀಡಾಗಿರುವ ಹಿಂದೂ ಬಲಪಂಥೀಯರ ಬಗ್ಗೆ ತಮಗೆ ಚಿಂತೆ ಬೇಡ ಬಿಡಿ.
ಅದರ ಪಟ್ಟಿ ಉದ್ದ ಇದೆ.
ಹೀಗಿರುವಾಗ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಈ ರಾಜ್ಯದಲ್ಲಿ ತಾವು ಸರಕಾರದ ಕೃಪಾಪೋಷಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನವನ್ನು ಒಪ್ಪಿಕೊಂಡಿದ್ದಾದರೂ ಹೇಗೆ?
ಪ್ರಶಸ್ತಿ ವಾಪಸಿ ಮಾಡುತ್ತಿದ್ದವರಲ್ಲವೇ ತಾವೆಲ್ಲಾ?
ಈ ಅಧ್ಯಕ್ಷಗಿರಿಯ ಸಮ್ಮಾನವನ್ನಾದರೂ ತಿರಸ್ಕರಿಸಿ, ಈ ಸರಕಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಬಾರದೇಕೆ?
ಇದಕ್ಕಿಂತ ಉತ್ತಮ "ಸಂಕ್ರಮಣ" ಕಾಲ ಇನ್ನಿದೆಯೇ?
ಸಾಹಿತ್ಯ ಸಮ್ಮೇಳನಗಳೇ ದೊಂಬರಾಟಗಳಾಗಿರುವಾಗ, ಅದಕ್ಕೆ ಯಾರು ಅಧ್ಯಕ್ಷರಾದರೇನು, ಎಂದು ಅನ್ನುತ್ತಿದ್ದವನು ನಾನು.
ಆದರೂ ಹೀಗೊಂದು ವಿನಂತಿ ಮಾಡಿಕೊಳ್ಳುವ ಮನಸ್ಸಾಯ್ತು.