ಪತ್ರ : ಗಡ್ಡವಿಲ್ಲದ ಹೆಂಗಸರೂ ಚೆನ್ನಾಗಿ ಕಾಣಿಸ್ತಾರೆ!
ಕುರುಚಲು ಗಡ್ಡ, ಹುರಿಗಟ್ಟಿದ ಮೀಸೆಯನ್ನು ಮಾಧ್ಯಮದವರ ಗಮನಕ್ಕೆ ತರುತ್ತಲೇ, ಬ್ಯಾಟಿಂಗ್ ನಲ್ಲಿ ತಾನು ಅನುಭವಿಸುತ್ತಿರುವ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿರುವ ರವೀಂದ್ರ ಜಡೇಜಾಗೆ ನಾಯಕ ಮಹೇಂದ್ರ ಸಿಂಗ್ ಧೋನಿಯೇ ತಪರಾಕಿ ಕೊಟ್ಟಿದ್ದಾರೆ. ಹಾಗೆಯೆ, ನಮ್ಮ ಓದುಗರು ಕೂಡ ಜಡೇಜಾನ ಕಿವಿ ಹಿಂಡಿದ್ದಾರೆ. [ಧೋನಿ ಅಸಮಾಧಾನಕ್ಕೆ ಗುರಿಯಾಗಿರುವ ಆಟಗಾರ ಯಾರು?]
ನಿನ್ನ ಮೀಸೆ, ಗಡ್ಡ, ಅದೃಷ್ಟ ಒತ್ತಟ್ಟಿಗಿರಲಿ, ವಿಶ್ವಕಪ್ ನಲ್ಲಿ ಮೊದಲು ಸರಿಯಾಗಿ ಆಡುವುದನ್ನು ಕಲಿ ಎಂದು ಮಾತಿನ ಚಾಟಿ ಬೀಸಿದ್ದಾರೆ. ಕರ್ನಾಟಕದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಾವ ಪ್ರದೇಶದಲ್ಲಿರಬೇಕು ಎಂಬ ಪ್ರಶ್ನೆಗೂ ಉತ್ತರಗಳ ಸುನಾಮಿ ಹರಿದುಬಂದಿದೆ. ಒಬ್ಬೊಬ್ಬರದು ಒಂದೊಂದು ಉತ್ತರ. ಈ ಬಗೆಯ ಪ್ರತಿಕ್ರಿಯೆ ಬರುತ್ತದೆಂದು ನಾವು ಕೂಡ ನಿರೀಕ್ಷಿಸಿರಲಿಲ್ಲ. [ಐಐಟಿ ಎಲ್ಲಿ ಸ್ಥಾಪನೆ ಆಗಬೇಕು? ಉತ್ತರ ಸಿಕ್ಕಿದೆ!]
ಮತ್ತೊಂದು ಸಂಗತಿಯೆಂದರೆ, ವಾರ ಭವಿಷ್ಯ ಮತ್ತು ತಿಂಗಳ ಭವಿಷ್ಯಕ್ಕೆ ಇರುವ ಬೇಡಿಕೆ. ಅನೇಕರು ತಮ್ಮ ಸಮಸ್ಯೆಗಳನ್ನು ಕಾಮೆಂಟ್ ಬಾಕ್ಸಲ್ಲಿ ಹಾಕಿರುತ್ತಾರೆ. ಇನ್ನು ಮುಂದೆ ವಾರ ಭವಿಷ್ಯ ಅಂಕಣದಲ್ಲಿ ಜ್ಯೋತಿಷಿಯ ಫೋನ್ ನಂಬರ್ ನೀಡಲಾಗುವುದು. ಓದುಗರು ನೇರವಾಗಿ ಅವರನ್ನೇ ಸಮಸ್ಯೆಗೆ ಪರಿಹಾರ ಕೇಳಬಹುದು.
ಈ ಎಲ್ಲ ಪ್ರತಿಕ್ರಿಯೆಗಳಿಗೆ, ಪತ್ರ ಬರೆದಿದ್ದಕ್ಕಾಗಿ ಓದುಗರಿಗೆ ಧನ್ಯವಾದಗಳು. ವೈವಿಧ್ಯಮಯ ಲೇಖನಗಳಿಗೆ ಬಂದ ಕೆಲ ಪತ್ರಗಳನ್ನು ಇಲ್ಲಿ ಹೆಕ್ಕಿ ನೀಡಿದ್ದೇವೆ. ಪ್ರೀತಿಯ ಓದುಗರಿಗೆ ನಾವು ಮತ್ತೊಮ್ಮೆ ಕೇಳುವುದೇನೆಂದರೆ, ದಯವಿಟ್ಟು ಪತ್ರಗಳನ್ನು ಕನ್ನಡದಲ್ಲಿಯೇ ಬರೆಯಿರಿ.
ಗಡ್ಡವಿಲ್ಲದ ಹೆಂಗಸರೂ ಚೆನ್ನಾಗಿ ಕಾಣಿಸ್ತಾರೆ!
ಗಡ್ಡದಿಂದ ಯಾವುದೇ ಆಟವನ್ನಾಗಲಿ ಗೆಲ್ಲಲು ಸಾಧ್ಯವೇ ಇಲ್ಲ. ಗಡ್ಡಕ್ಕೂ ಅದೃಷ್ಟಕ್ಕೂ ಯಾವುದೇ ಸಂಬಂಧವಿಲ್ಲ. ಎಷ್ಟೋ ಮಂದಿ ಗಂಡಸರು ತಮ್ಮ ಸೋಮಾರಿತನದಿಂದ ಗಡ್ಡ ಬೋಳಿಸುವುದಿಲ್ಲವೆನ್ನುವುದು ಸತ್ಯ ಸಂಗತಿ. ಯಾವುದೇ ವಿಷಯದಲ್ಲಾದರೂ ತನ್ಮಯತೆ ಮಾತ್ರ ಕೆಲಸಕ್ಕೆ ಬರುತ್ತದೆ. ತನ್ನ ಗಡ್ಡದ ಅದೃಷ್ಟವನ್ನು ಹೊಗಳಿಕೊಳ್ಳುವುದನ್ನು ಆತ ಬಿಟ್ಟುಬಿಟ್ಟರೆ ಒಳ್ಳೆಯದು. ಗಡ್ಡವಿಲ್ಲದ ಹೆಂಗಸರೂ ಚೆನ್ನಾಗಿ ಕಾಣಿಸುತ್ತಾರೆನ್ನುವುದನ್ನು ಆತ ಮರೆತಂತಿದೆ.
ಸತ್ಯವಾದಿ
ಭವಿಷ್ಯದಲ್ಲಿ ಒಳ್ಳೆ ದಿನ ನೋಡಬಹುದಾ?
ನಾವು 2015ಕ್ಕೆ ಮನೆ ಕಟ್ಟುವ ಪ್ಲಾನ್ ಮಾಡಿದ್ದೇವೆ. ನನ್ನ ಗಂಡನ ಹುಟ್ಟಿದ ದಿನಾಂಕ 10-07-1970. ಟೈಮ್ 10ರಿಂದ 12ರ ಒಳಗೆ. ನಮಗೆ ಮನೆ ಕಟ್ಟಿದ ಮೇಲೆ ಒಳ್ಳೆಯದಾಗಲಿದೆಯೆ? ಮತ್ತು ಅದಕ್ಕೋಸ್ಕರ ಏನು ಮಾಡಬೇಕು? ನಾವಿಬ್ಬರು ಭವಿಷ್ಯದಲ್ಲಿ ಒಳ್ಳೆ ದಿನ ನೋಡಬಹುದಾ? ದಯವಿಟ್ಟು ತಿಳಿಸಿ.
ಮಾಲತಿ
ಇವರಿಗೆ ಗೊತ್ತಿರೋದು ಬರೀ ದಿವಾಳಿ ಶಾಸ್ತ್ರ ಅಷ್ಟೇ
ಇದೊಂದು ಅನ್ನಭಾಗ್ಯ ಅಲ್ಲ. ಜನಗಳನ್ನು ಸೋಮಾರಿ ಕಟ್ಟೆಮೇಲೆ ಕೂರಿಸಿ, ಜನಗಳಿಗೆ "ಕುಡಿಯೋ ಭಾಗ್ಯ" ಅಂತ ಮಾಡಿ ಸರಕಾರ ಸಾಲ ತಂದು, ಇವರಿಂದ ದೇಶದ ಆರ್ಥಿಕತೆ ಹರಾಜು ಹಾಕಿ, ಮಂತ್ರಿಗಳು, ಅಧಿಕಾರಿಗಳು, ಕಾರ್ಯಕರ್ತರು ಬಡವರ ಹೆಸರಲ್ಲಿ ತಿಂದು ತೇಗಿ, ರಾಜ್ಯವನ್ನು ದಿವಾಳಿ ಮಾಡಿ ಹೋಗೋದು ಇವರ ಭಾಗ್ಯ. ದುಡಿಯೋ ಕೈಗೆ ಒಂದು ಕೆಲಸ ಕೊಡಿಸಿ ಅನ್ನ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಅಂದ್ರೆ, ಇವರಿಗೆಲ್ಲಿ ಗೊತ್ತು ಅರ್ಥಶಾಸ್ತ್ರ? ಬರೀ ದಿವಾಳಿ ಶಾಸ್ತ್ರ ಗೊತ್ತು ಅಷ್ಟೆ. ಕಷ್ಟಪಟ್ಟು ದುಡಿದ ಜನಗಳ ತೆರಿಗೆ ಹಣ ತಗೊಂಡು ಇವರಪ್ಪನ ಹಣ ಅನ್ನೋ ಹಾಗೆ ಬಾಯಿಗೆ ಬಂದ ಕಾರ್ಯಕ್ರಮಗಳು ಮಾಡ್ತಾರೆ.
ಬಸವರಾಜ
ಐಐಟಿ ಉತ್ತರ ಕರ್ನಾಟಕ ಅಥವಾ ಮಲೆನಾಡಿಗೆ ಬರಲಿ
ಅಯ್ಯೋ, ಬೆಂಗಳೂರು ಈಗಾಗಲೇ ಹಾಳಾಗಿ ಹೋಗಿದೆ. ಭೂಮಿಯ ಬೆಲೆ ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಬರಿ ಅನ್ಯ ಭಾಷಿಕರೇ ತುಂಬಿದ್ದಾರೆ. ಹಾಗಾಗಿ ಐಐಟಿ ಉತ್ತರ ಕರ್ನಾಟಕ ಅಥವಾ ಮಲೆನಾಡಿಗೆ ಬರಲಿ.
ಶೇಖರ್ ತುಮಕೂರು
ಪಾರ್ಕ್ ಗಳನ್ನು ಇದೇ ರೀತಿ ಸ್ವಚ್ಛ ಮಾಡಬೇಕು
ನಾವು ಕೂಡ ನಮ್ಮ ಮನೆಗಳ ಬಳಿ ಇರುವ ಪಾರ್ಕ್ ಗಳನ್ನು ಇದೇ ರೀತಿ ಸ್ವಚ್ಛ ಮಾಡಬೇಕು. ಎಲ್ಲ ಬಡಾವಣೆಗಳಲ್ಲಿ ಈ ರೀತಿಯ ಟೀಂ ಇರಬೇಕು. ಬೆಂಗಳೂರು ಟ್ರೆಕ್ಕಿಂಗ್ ಕ್ಲಬ್ ಸದಸ್ಯರಿಗೆ ನನ್ನ ಅಭಿನಂದನೆಗಳು.
ನಂದು