ಕುಮಾರಸ್ವಾಮಿ ಬಣ್ಣ ಬಯಲು : ಬಜೆಟ್ಟಿಗೆ ಶ್ರೀಸಾಮಾನ್ಯರ ಪ್ರತಿಕ್ರಿಯೆ
Recommended Video
ಗುರುವಾರ, ಜುಲೈ 5ರಂದು ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಮತ್ತು ವಿತ್ತ ಸಚಿವರಾಗಿರುವ ಕುಮಾರಸ್ವಾಮಿಯವರು ಮಂಡಿಸಿರುವ ಪೂರ್ಣಪ್ರಮಾಣದ ಬಜೆಟ್ಟಿಗೆ, ರೈತರನ್ನೂ ಸೇರಿಸಿಕೊಂಡು ಕರ್ನಾಟಕದ ಶ್ರೀಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೇಕಾರರು ತಮ್ಮ ಜನಾಂಗವನ್ನು ಕಡೆಗಣಿಸಲಾಗಿದೆ ಎಂದು ಕಿಡಿ ಕಾರುತ್ತಿದ್ದರೆ, ಮುಸ್ಲಿಂರಿಗೆ ಕುಮಾರಸ್ವಾಮಿ ಕಳ್ಳೆಕಾಯನ್ನೂ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಪಕ್ಷದಲ್ಲಿರುವ ಮಂತ್ರಿಗಳೇ ಕೆಂಡಾಮಂಡಲರಾಗಿದ್ದಾರೆ. ಒಂದೆಡೆ ಕರಾವಳಿಗೆ ಏನನ್ನೂ ನೀಡದೆ ಕುಮಾರಸ್ವಾಮಿ ದ್ವೇಷ ಸಾಧಿಸಿದ್ದಾರೆ ಎಂದು ಒಬ್ಬರೆಂದರೆ, ಉತ್ತರ ಕರ್ನಾಟಕದಲ್ಲಿ ಜ್ವಾಲಾಮುಖಿ ಸ್ಫೋಟವಾಗುವುದೊಂದು ಬಾಕಿಯಿದೆ.
ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights
ಒಟ್ಟಿನಲ್ಲಿ ಭಾರೀ ಮಹತ್ವಾಕಾಂಕ್ಷೆಯಿಂದ ಮಂಡಿಸಲಾಗಿರುವ ಬಜೆಟ್, ಕೇವಲ ಮೂರು ಜಿಲ್ಲೆಗಳ ಮತದಾರರನ್ನು ಮಾತ್ರ ಸಂಪ್ರೀತಗೊಳಿಸಲು ಕುಮಾರಸ್ವಾಮಿಯವರು ಮಂಡಿಸಿದ್ದಾರೆ ಎಂಬ ಸಾಮೂಹಿಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ತಮಗೆ ಅತೀಹೆಚ್ಚು ಸೀಟನ್ನು ಗೆಲ್ಲಿಸಿಕೊಟ್ಟ ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಿಗೆ ಕುಮಾರಸ್ವಾಮಿಯವರು ಭರಪೂರ ಬಳುವಳಿ ನೀಡಿರುವುದು ಸುಳ್ಳಲ್ಲ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಾಗ ಇದೆಲ್ಲ ಸಹಜವೆ.
ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?
ಕುಮಾರಸ್ವಾಮಿಯವರ ಬಜೆಟ್ ವಿರುದ್ಧ ಒನ್ಇಂಡಿಯಾ ಓದುಗರು ಕೂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಹೊರಗುತ್ತಿಗೆ ನೌಕರರನ್ನು ಕುಮಾರಸ್ವಾಮಿ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಕುಮಾರಸ್ವಾಮಿಯವರು ಕಾಂಗ್ರೆಸ್ ಕೃಪಾಪೋಷಿತ ಮುಖ್ಯಮಂತ್ರಿ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿಯವರು, ತಕ್ಕ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವುದಾಗಿ ಪ್ರತಿವಾದ ಮಂಡಿಸಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚುನಾವಣೆಗೂ ಮುಂಚೆ ಹೊರಗುತ್ತಿಗೆ ನೌಕರರ ಖಾಯಂ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಕಟಣೆ ಮಾಡಿದ್ದರು. ಆದರೆ ಬಜೆಟ್ ನಲ್ಲಿ ಹೊರಗುತ್ತಿಗೆ ನೌಕರರನ್ನು ಕಡೆಗಣಿಸಿದ್ದಾರೆ. ಹೊರಗುತ್ತಿಗೆ ನೌಕರರು ಕರ್ನಾಟಕದ ಮತದಾರರಲ್ಲವೆ? ನಾನು ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಲಿಮಿಟೆಡ್ KRIDLನಲ್ಲಿ 15 ವರ್ಷದಿಂದ ಹೊರಗುತ್ತಿಗೆ ನೌಕರರಾಗಿ (ಡಾಟಾ ಎಂಟ್ರಿ ಆಪರೇಟರ್) ಕೆಲಸ ನಿರ್ವಹಿಸುತ್ತಿದ್ದೇನೆ. ಮಾಸಿಕ ಸಂಬಳ ಕೇವಲ 7,100 ಮಾತ್ರ ಕೈಗೆ ಸಿಗುತ್ತಿದೆ. ಅದೇ ಖಾಯಂ ನೌಕರರಿಗೆ 40,000 ರೂ. ಸಂಬಳ ಬರುತ್ತಿದೆ. ಏಕೆ ಕರ್ನಾಟಕದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬಾರದು? ಮುಖ್ಯಮಂತ್ರಿಗಳೇ, ಒಬ್ಬ ಗಾರೆ ಕೆಲಸ ಮಾಡುವ ಮೇಷನ್ ಕೆಲಸಗಾರ ತಿಂಗಳಿಗೆ 18,000 ಸಿಗುತ್ತಿದೆ. ನಾವು ಅದಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದೇವೆ.
ಮಹೇಶ್ ಉತ್ತರಹಳ್ಳಿ
ಕೆಲ ರೈತರು ಐಷಾರಾಮಿ ಕಾರು ಬಂಗ್ಲೆ ಕೊಂಡಿದ್ದಾರೆ
ಇಲ್ಲಿ ನಾವು ರೈತರು ಯಾರು ಎಂಬ ಬಗ್ಗೆ ವಿವರ ಬೇಕಿದೆ. ಏಕೆಂದರೆ, ಕೆಲವೊಂದು ರೈತರು ಬೆಳೆಸಾಲ ಪಡೆದು ಇನ್ನೊಂದು ಬ್ಯಾಂಕಿನಲ್ಲಿ ಬಡ್ಡಿ ಆಸೆಗೆ ಠೇವಣಿ ಇಟ್ಟಿರಬಹುದು. ಮತ್ತು ಇನ್ನು ಕೆಲವರು ಸಾಲ ಪಡೆದವರು ಐಷಾರಾಮಿ ಕಾರು, ವಾಹನ, ಬಂಗ್ಲೆ ಕೊಂಡಿರುತ್ತಾರೆ. ಆದುದರಿಂದ ರೈತರೆಂದು, ಅವರ ಸಾಲಮನ್ನಾಕ್ಕಾಗಿ ಇತರರಿಗೆ ತೆರಿಗೆ ರೂಪದಲ್ಲಿ ಏಕೆ ತೊಂದರೆ. ಒಟ್ಟಿಲ್ಲಿ ಸರಕಾರದ ಖಜಾನೆ ಖಾಲಿಯಾದರೂ ಪರವಾಗಿಲ್ಲ ನಾವು ಪುಕ್ಕಟೆ ಜೀವನೇ ಸಾಗಿಸಬೇಕು ಎನ್ನುವವರೂ ಇದ್ದಾರೆಯೇ?
ವಸಂತ್ ಜಿ ಇಜಿಮನ
ಎಲ್ಲಿದೆ ಜಾತ್ಯಾತೀತ, ನಿಷ್ಪಕ್ಷಪಾತ?
ಮುಖ್ಯಮಂತ್ರಿಯವರ ಪಕ್ಷಪಾತ, ಜಾತಿವಾದ, ಪ್ರಾದೇಶಿಕ ಅಸಮತೋಲನೆ ಈ ಬಜೆಟಿನಲ್ಲಿ ಅವರ ಪಕ್ಷ ಆಡಳಿತವಿರುವಲ್ಲಿಗೆ ಮಾತ್ರ ಸೀಮಿತವಾದರೆ, ಇನ್ನುಳಿದ ಪ್ರದೇಶ ಅಭಿವೃದ್ದಿ ಬೇಡವೆ? ಎಲ್ಲಿದೆ ಜಾತ್ಯಾತೀತ, ನಿಷ್ಪಕ್ಷಪಾತ? ಅಂದು ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಮಾಡುವಾಗ ಹೇಗೆ ದೇವರ ಮುಂದೆ ನಾನು..... ಕುಮಾರಸ್ವಾಮಿ ಎಂಬ.. ಆದ... ಎಂದೆಲ್ಲ ಓದಿದ್ದೀರಲ್ಲ. ಈಗೆಲ್ಲಿ ಹೋಯಿತು? ನಿಮ್ಮ ಜಾತ್ಯತೀತ ಬಣ್ಣ ಬಯಲಾಯಿತಲ್ಲ. ಸಮಿಶ್ರ ಸರಕಾರ ಬರಿ ಒಂದು ವರ್ಗ ಅಥವಾ ಒಂದು ನಗರಕ್ಕೆ ಸೀಮಿತವಲ್ಲ. ಈಗಿನ ಮುಖ್ಯಮಂತ್ರಿ ಕಾಂಗ್ರೆಸ್ ಕೃಪಾ ಪೋಷಿತ ಮುಖ್ಯಮಂತ್ರಿ ಅನ್ನುವುದರಲ್ಲಿ ಅನುಮಾನವೇ ಇಲ್ಲ.
ವಲ್ಲಭ
ಪ್ರತ್ಯೇಕ ರಾಜ್ಯದ ಕೂಗು ಇನ್ನಷ್ಟು ಜೋರು
ಇಂತಹ ಕೆಲಸ ಮಾಡುತ್ತಾ ಹೋಗಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಇನ್ನಷ್ಟು ನೀರು ಎರೆದಂತೆ. ಕರ್ನಾಟಕದ 60 ಪ್ರತಿಶತಕ್ಕಿಂತ ಹೆಚ್ಚಿನ ಭೂವ್ಯಾಪ್ತಿ ಇರುವ ಉತ್ತರ ಕರ್ನಾಟಕ ಹಾಗು ಕರಾವಳಿ ಭಾಗವನ್ನು ಪೂರ್ತಿ ಕಡೆಗಣಿಸಿದ್ದಾರೆ. ಪ್ರತ್ಯೇಕ ರಾಜ್ಯದ ಕೂಗು ಇನ್ನಷ್ಟು ಜೋರಾಗುತ್ತೆ ಇನ್ನು ಮುಂದೆ.
ಸಂದೀಪ್
ಬಾಗಲ್ಕೋಟೆಗೆ ಚಂಬು ನೀಡಿದ ಸ್ವಾಮಿ
ಏನು ಮಾಡೋದು ನಮ್ಮ ಕರ್ಮ ಅನುಭವಿಸಬೇಕಷ್ಟೆ. ನಮ್ಮ ಬಾಗಲ್ಕೋಟ್ ಗೆ at least ಮೂಲಭೂತ ಸೌಕರ್ಯಗಳನ್ನ ಕಲ್ಪಿಸಬೇಕು. ನಮ್ಮ ಬಾಗಲ್ಕೋಟ್ ಇಂದ revenue ಎಷ್ಟು ಕಲೆಕ್ಟ್ ಮಾಡ್ಕೋತಾರೆ. ಆದ್ರೆ ಬಾಗಲ್ಕೋಟ್ ಗೆ ಕೊಡೋದು ಮಾತ್ರ ಬರಿ ಚಂಬು. ಈ ಸಮ್ಮಿಶ್ರ ಸರ್ಕಾರ ಬೀಳೋದನ್ನ ನಾನು ಎದುರು ನೋಡತಾ ಇದ್ದೀನಿ. ಇಂತಿ ನಿಮ್ ಬಾಗಲ್ಕೋಟ್ ಹುಡುಗ.
ಸಂತು ಮಹಾರಾಜ್, ಬಾಗಲಕೋಟೆ
ಸಿದ್ರಾಮನ ಮುಂದೆ ತೊಡೆ ತಟ್ಟಿದ್ದೇ ವಿಶೇಷ
ಈ ಬಜೆಟ್ ಯಾರಿಗೆ ಎಷ್ಟು ಅನುಕೂಲ ಅಗಿದೆಯೋ ಇಲ್ಲವೋ ಗೊತ್ತಿಲ್ಲ.... ಆದರೆ ಖಂಡಿತವಾಗಲೂ ಮಾಧ್ಯಮ ವರ್ಗದವರಿಗೆ ಹೊರೆ ಬಿದ್ದಿರೋದಂತೂ ಗ್ಯಾರಂಟಿ. ರೈತರಿಗೆ/ ಬಡವರಿಗೆ ಸಾಲದಿಂದ ಮುಕ್ತಿ ಸಿಕ್ಕಿದರೆ, ಸಿರಿವಂತರಿಗೆ ಇರುವೆ ಕಾಡಿದ ಹಾಗೆ ಆಗಬಹುದು ಅಷ್ಟೇ... so rich people don't care. ಅದರಲ್ಲೂ ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದರಿಂದ, ಸಿದ್ರಾಮಯ್ಯನ ಮುಂದೆ ತೊಡೆ ತಟ್ಟಿದಂತೂ ವಿಶೇಷ ಅಂತಾನೆ ಹೇಳಬೇಕು ಅಷ್ಟೇ...
ರಾಜ್ ಯುಡಿ
ತುಳುನಾಡಿಗೆ ಏನು ಕೊಟ್ಟಿದ್ದಾರೆ ಕುಮಾರಸ್ವಾಮಿ
ತುಳುನಾಡಿನ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಎತ್ತಿನಹೊಳೆ ಯೋಜನೆ ಇರುವುದು ಕನ್ನಡಿಗರಿಗೆ! ತುಳುನಾಡಿಗೆ ಏನು ಕೊಟ್ಟಿದೆ ಈ ಹಾಗು ಹಿಂದಿನ ಸರಕಾರ? ಆ ಭಾಗ ಕರ್ನಾಟಕದ ಭಾಗ ವಾಗಿ ಉಳಿದಿಲ್ಲ ಅನಿಸುತ್ತದೆ.
ಯತೀಶ್ ಮುಂಡೋಡಿ
ವಾಟ್ ಈಸ್ ದಿಸ್ ಬಜೆಟ್ ಸರ್
ವಾಟ್ ಈಸ್ ದಿಸ್ ಬಜೆಟ್ ಸರ್. ನಾವು ನಿಮ್ಮಿಂದ ತುಂಬಾ ನಿರೀಕ್ಷೆ ಮಾಡಿದ್ದೆವು. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸಿದ್ದರಿಂದ ಸಹಜವಾಗಿ ಪ್ರಯಾಣದ ದರವೂ ಹೆಚ್ಚಾಗುತ್ತದೆ. ಇತರೆ ದರಗಳೂ ಹೆಚ್ಚಾಗಿ, ಪರೋಕ್ಷವಾಗಿ ಸಾರ್ವಜನಿಕರ ಮೇಲೆ ಭಾರೀ ಹೊರೆ ಬೀಳುತ್ತದೆ.
ರಮೇಶ್ ಬಾಬು