ಚೀನಾಗೆ ಪಾಠ ಕಲಿಸಲು ಓದುಗರೇ ನೀಡಿದ ಸಲಹೆಗಳು ಹೇಗಿವೆ?
ನವದೆಹಲಿ, ಜೂನ್.23: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದ ಗಾಲ್ವಾನ್ ನದಿ ಕಣಿವೆ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ಅಂತಾರಾಷ್ಟ್ರೀಯ ಗಡಿ ರೇಖೆಯ ಉದ್ದಕ್ಕೂ ಬೂದಿಮುಚ್ಚಿದ ಕೆಂಡದಂತಾ ವಾತಾವರಣ ಸೃಷ್ಟಿಯಾಗಿದೆ.
Recommended Video
ಕಳೆದ ಮೇ.5ರಂದು ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳು ಲಡಾಖ್ ಗಡಿ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದವು. ನಂತರ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿದ್ದರು. ಇದೊಂದು ಘಟನೆಯಿಂದ ಲಡಾಖ್ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.
ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!
ಉಭಯ ರಾಷ್ಟ್ರಗಳ ಗಡಿಯಲ್ಲಿ ಚೀನೀ ಯೋಧರು ತೋರಿದ ಕ್ರೌರ್ಯಕ್ಕೆ ಜಾಗತಿಕ ಮಟ್ಟವಲ್ಲದೇ ದೇಶದೊಳಗೂ ತೀವ್ರ ವಿರೋಧ ವ್ಯಕ್ತವಾಗಿದೆ. ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಭಾರತೀಯರು ಕೆರಳಿ ಕೆಂಡವಾಗಿದ್ದಾರೆ. ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನೀಗಳಿಗೆ ತಕ್ಕ ಪಾಠ ಕಲಿಸಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಭಾರತ-ಚೀನಾ ಗಡಿಯಲ್ಲಿ ನಡೆದ ಯೋಧರ ಸಂಘರ್ಷ, ಸೇನಾ ಮುಖ್ಯಸ್ಥರ ನಡುವಿನ ಶಾಂತಿ-ಮಾತುಕತೆ, ಚೀನೀಯರ ವರ್ತನೆ ಕುರಿತು ಜಾಗತಿಕ ಮಟ್ಟದಲ್ಲಿ ಕೇಳಿ ಬಂದ ಪ್ರತಿಕ್ರಿಯೆಗಳು, ಹೀಗೆ ಸಾಲು ಸಾಲು ವರದಿಗಳನ್ನು ಸವಿಸ್ತಾರವಾಗಿ Oneindia Kannada ವರದಿ ಮಾಡಿತು. ಅದಕ್ಕೆ ಓದುಗರು ಕೂಡಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹೀಗೆ ನಮಗೆ ಬಂದಿರುವ ಕಾಮೆಂಟ್ಸ್ ಗಳಲ್ಲಿ ಆಯ್ದ ಮತ್ತು ಉತ್ತಮ ಪ್ರತಿಕ್ರಿಯೆಗಳನ್ನು ಶೇಖರಿಸಿದ ವಿಶೇಷ ವರದಿ ಇಲ್ಲಿದೆ.
'ಮೇಡ್ ಇನ್ ಚೀನಾ' ಗೇಟ್ ಪಾಸ್ ಗೆ ಸಂಜಯ್ ಗೌಡ ಆಗ್ರಹ
"ಭಾರತದಲ್ಲಿ 'MADE IN CHINA' ವಸ್ತುಗಳನ್ನು ಬಹಿಷ್ಕಾರ ಮಾಡಿ, ಸ್ವದೇಶೀ ನಿರ್ಮಿತ ವಸ್ತುಗಳನ್ನು ಬಳಸೋಣ. ಸರ್ಕಾರ ಕೂಡಾ ಚೀನಾ ಉತ್ಪನ್ನಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿ, ಸ್ವದೇಶೀ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಿ" ಎಂದು ಸಂಜಯ್ ಗೌಡ ಅವರು ಆಗ್ರಹಿಸಿದ್ದಾರೆ.
ಸ್ವದೇಶೀ ವಸ್ತುಗಳ ಮೌಲ್ಯದ ಪಟ್ಟಿ ಓದುಗರಿಂದಲೇ ಸಿದ್ಧ
ಭಾರತದಲ್ಲಿ Made in china ವಸ್ತುಗಳನ್ನ ಬಹಿಷ್ಕಾರಗೊಳ್ಳುವದರಿಂದ ನಮಗೇನು ಅಷ್ಟೊಂದು ದೊಡ್ಡ ಮಟ್ಟದ ನಷ್ಟ, ಸಮಸ್ಯೆ ಅಂತ ಏನು ಆಗಲ್ಲ. ಬದಲಿಗೆ ಚೀನೀಯರಿಗೆ ಹೆಚ್ಚು ಹೊಡೆತ ಬೀಳಲಿದೆ ಎಂದು ಮುತ್ತು ಚಳಗೇರಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಚೀನೀ ವಸ್ತುಗಳನ್ನು ಬಹಿಷ್ಕರಿಸುವುದರಿಂದ ಭಾರತಕ್ಕೆ ಏನೆಲ್ಲಾ ಲಾಭಗಳು ಆಗುತ್ತವೆ. ಚೀನಾಗೆ ಎಷ್ಟೆಲ್ಲ ನಷ್ಟ ಸಂಭವಿಸುತ್ತೆ ಎನ್ನುವುದನ್ನೂ ಅವರು ಪಟ್ಟಿ ಮಾಡಿದ್ದಾರೆ.
1. ಚೀನಾದ ಉತ್ಪನ್ನಗಳ ಆಮದು ಮಾಡಿಕೊಳ್ಳುವ ದೊಡ್ಡ ಮಾರುಕಟ್ಟೆ ಎಂದರೆ ಅದು ನಮ್ಮ ಭಾರತ ದೇಶ.
2. ಚೀನಾ ದೇಶಕ್ಕೆ ಉತ್ಪಾದನೆಯಲ್ಲಿ ದೊಡ್ಡ ಹೊಡೆತ ಬಿಳುತ್ತೆ.
3. ಭಾರತೀಯ ಪ್ರತಿ ಒಬ್ಬ ವ್ಯಕ್ತಿಯು ಸ್ವದೇಶಿ ನಿರ್ಮಿತ ವಸ್ತುಗಳ ಮೇಲೆ ಜಾಸ್ತಿ ವ್ಯಾಮೋಹ ಹೊಂದಬೇಕು.
4. ಜಾಗತಿಕ ಮಟ್ಟದಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯವೂ ಬಹಿರಂಗ ಪಡಿಸಬೇಕು.
5. ಚೀನಾ ದೇಶದ ಪ್ರತಿ ಒಂದು ವಸ್ತುವನ್ನು ಕೂಡ ಸಂಪೂರ್ಣ ನಿಷೇಧ ಮಾಡಬೇಕು.
Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?
ಡ್ರ್ಯಾಗನ್ ರಾಷ್ಟ್ರಕ್ಕೆ ಬುದ್ಧಿ ಕಲಿಸಲು ಸಂಪಾದಕರ 'ದಿಕ್ಸೂಚಿ'
ಲಡಾಖ್ ಪೂರ್ವ ಗಡಿಯಲ್ಲಿ ಕಾಲ್ಕೆರೆದು ನಿಂತಿರುವ ಚೀನಾಗೆ ಪಾಠ ಕಲಿಸುವುದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಭಾರತವು ಹಾಗೂ ಭಾರತೀಯರು ಅನುಸರಿಸಬೇಕಾಗಿದೆ. ಈ ಕುರಿತು ದಿಕ್ಸೂಚಿ ಮಾಸ ಪತ್ರಿಕೆಯ ಸಂಪಾದಕರಾದ ಎ.ಟಿ.ಪಾಟೀಲ್ ಅವರು ಮಾಡಿರುವ ಅಂಶಗಳ ಪಟ್ಟಿ ಇಲ್ಲಿದೆ.
1. ಮಹತ್ವಾಕಾಂಕ್ಷಿ ಚೀನಾ ಎಂದಿಗೂ ಭಾರತದ ಏಳ್ಗೆಯನ್ನು ಸಹಿಸಲಾರದು. ಹಾಗೊಂದು ವೇಳೆ ಸಹಿಸಿದರೂ ತನ್ನ ಸ್ವಾಮ್ಯವನ್ನು ಎಂದಿಗೂ ಬಿಟ್ಟುಕೊಡದು. ಭಾರತದ ವಿರೋಧದಲ್ಲಿಯೇ ಅದರ ಉನ್ನತಿ ಇರುವ ಕಾರಣ ಅದರೊಂದಿಗಿನ ಆಪ್ತತೆ ಎಂದಿಗೂ ಸರಿ ಹೋಗದು. ಹಾಗಾಗಿ ಸಾಧ್ಯವಾದಷ್ಟು ತಕರಾರು ರಹಿತ ದೂರದ ಸಂಬಂಧವೇ ನಮಗೆ ಸಮರ್ಪಕ.
2. ಇದನ್ನು ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಎಂದರೂ ಪರವಾಗಿಲ್ಲ.
3. ಭಾರತದ ಹಿತಾಸಕ್ತಿಗಳಿಗೆ ಭಂಗ ಬಾರದಂತೆ, ಚೀನಾದ ವಿರುದ್ಧ ಮನೋಭಾವದ ಮೂರನೇ ರಾಷ್ಟ್ರದ ಕಿಚ್ಚಿಗೆ ನಾವು ಬಲಿಪಶುವಾಗದಂತೆ ರಷ್ಯಾ, ಅಮೆರಿಕಾ ಸಹಿತ ಬಲಾಢ್ಯ ರಾಷ್ಟ್ರಗಳ ಉತ್ತಮ ಸ್ನೇಹ ಸಂಬಂಧ ಇಂದಿನ ಅಗತ್ಯ. ಇಂತಹ ಸಂಬಂಧಗಳನ್ನು ಬೆಳೆಸಲು ಆರ್ಥಿಕ ವಿಚಾರಗಳನ್ನು ಕೊಂಚ ಸಡಿಲಿಸಿ ಮಾನವೀಯತೆ ಹಿನ್ನೆಲೆಯ ದೃಷ್ಟಿಕೋನ ಅಗತ್ಯ. ಅನ್ಯದೇಶಗಳ ನಾಗರಿಕರ ಮನ ಗೆಲ್ಲಲು ಸಾಧ್ಯ. ವಿಶ್ವ ಮಾನವ ಕಲ್ಪನೆಯತ್ತ ಒಂದು ನಡೆ.
4. ಚೀನಾದ ಮೇರೆ ಮೀರಿದ ಭೂ ದಾಹಕ್ಕೆ ಅದರ ಬೆದರಿಕೆಗೆ ಬಗ್ಗದೇ ಸೂಕ್ತ ಉತ್ತರ ನೀಡಲೇಬೇಕು. ಹೆದರಿಸುವವ ಯಾವಾಗಲೂ ಅಧೈರ್ಯವಂತ.
5. ಪ್ರಪಂಚದ ಶಕ್ತ ರಾಷ್ಟ್ರಗಳ ಭೂದಾಹವನ್ನು ನಿಯಂತ್ರಿಸಲು ಅಂತಾರಾಷ್ಟ್ರೀಯ ಸ್ವತಂತ್ರ ವಿಶ್ವ ಗಡಿ ರಕ್ಷಣಾ ಸಂಸ್ಥೆಯೊಂದನ್ನು ಹುಟ್ಟು ಹಾಕಬೇಕು. ಆ ಮೂಲಕ ಇನ್ನು ಮುಂದೆ ಯಾವ ರಾಷ್ಟ್ರಗಳು ಅನ್ಯ ರಾಷ್ಟ್ರಗಳ ಭೂ ಆಕ್ರಮಿಸದಂತೆ ತಡೆಯಬೇಕು.
6. ಭಾರತ ಹೆದರುವ ಬೆದರುವ ನೀತಿಗಳನ್ನು ತೊರೆಯಬೇಕು. ಚೀನಾವನ್ನು ಮೆಚ್ಚಿಸುವ ನೀತಿಗಳನ್ನು ಬದಿಗಿಡಲೇಬೇಕು. ಭಾರತದ ಮೆಚ್ಚುಗೆಯ ನೀತಿ ಚೀನಾದ ಭಾರತ ನೀತಿಯಲ್ಲಿ ಎಂದಿಗೂ ಬದಲಾವಣೆ ತರದು.
7. ಪ್ರಸ್ತುತ ಚೀನಾ ಪ್ರಾಬಲ್ಯಕ್ಕೆ ಆರ್ಥಿಕ ಕಡಿವಾಣ ಅತಿಸೂಕ್ತ ಮಾರ್ಗ. ಚೀನಾದ ಉತ್ಪನ್ನಗಳನ್ನು ತೊರೆಯಲೇಬೇಕು.
8. ಯುದ್ಧ ಸರಿಯಾದ ಆಯ್ಕೆಯೆಂದು ಕಾಣುವುದಿಲ್ಲ. ಆದರೆ ಅನಿವಾರ್ಯ ಸನ್ನದ್ಧತೆ ನಮಗೆ ಬೇಕು.
9. ಇನ್ನಾದರೂ ದೇಶದ ರಾಜಕೀಯ ರಂಗ, ಅಧಿಕಾರ ವರ್ಗ ಭ್ರಷ್ಟಾಚಾರ ಬದಿಗಿಟ್ಟು, ಸ್ವಜನ ಪಕ್ಷಪಾತ ಮಾಡದೇ ನೈಜ ಪ್ರತಿಭೆಗಳಿಗೆ ಮಣೆ ಹಾಕಿ ವಿಜ್ಞಾನ ತಂತ್ರಜ್ಞಾನ ಸಹಿತ ಅನೇಕ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು. ಅದು ಭಾರತವನ್ನು ಸದಾ ಮುಂದೆ ಇರುವಂತೆ ನೋಡಿಕೊಳ್ಳುತ್ತದೆ.
ಪಾಕಿಸ್ತಾನ, ಚೀನಾ ಜೊತೆಗಿನ ವ್ಯವಹಾರಕ್ಕೆ ಕಡಿವಾಣ ಹಾಕಿ
ಭಾರತ ಮತ್ತು ಪಾಕಿಸ್ತಾನದ ಜೊತೆಗಿನ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಸಿಆರ್ ಪಿಎಫ್ ಕೊಬ್ರಾ ಕಮಾಂಡೋ ಆಗಿರುವ ನವೀನ್ ಕುಮಾರ್ ನಾಯ್ಕ್.ಜಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದೇಶಕ್ಕಾಗಿ ಪಣ ತೊಟ್ಟು ದುಡಿಯುತ್ತಿರುವ ಸಿಆರ್ ಪಿಎಫ್ ಕಮಾಂಡರ್ ಮಾಡಿರುವ ಕಾಮೆಂಟ್ಸ್ ಇಲ್ಲಿದೆ.
"ಭಾರತ ಮತ್ತು ಚೀನಾ ನಡುವೆ ತುಂಬಾ ಸಂಬಂಧ ಇತ್ತು. ಆದರೆ ಚೀನಾ ನೀಚತನ ತೋರಿಸಿದೆ.1962 ಇಂಡಿಯಾ ಮತ್ತು ಚೀನಾ ನಡುವೆ ವಾರ್ ಆಗಿತ್ತು. ಅದರಲ್ಲೂ ಸಾವು ನೋವು ತುಂಬನಾ ಅಗಿತ್ತು. ಚೀನಾ ಮತ್ತು ಪಾಕಿಸ್ತಾನ ನಮ್ಮ ವಿರುದ್ದ ಎದ್ದು ನಿಂತಿದೆ. ಈ ಎರಡೂ ದೇಶಗಳ ವ್ಯವಹಾರವನ್ನು ನಿಲ್ಲಸಬೆಕು ಎಂದು ಕೇಳಿಕೊಳ್ಳುತ್ತೇನೆ. ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದು ಮತ್ತು ವ್ಯವಹರವನ್ನು ಮಾಡಬಾರದು. ಎನ್ನುವುದು ನನ್ನ ಅಭಿಪ್ರಾಯ. ನಮ್ಮ ವೀರಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದಾರೆ. ಯುದ್ಧಕ್ಕೆ ಯೊಧರು ರೆಡಿ ಆಗಿದ್ದಾರೆ. ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಪ್ರಧಾನಮಂತ್ರಿಗಳಿಗೆ ತಿಳಿಯಬೇಕು ಎಂದು ಕೇಳಿಕೊಳ್ಳುತ್ತಿದ್ದೆ. ಜೈ ಹಿಂದ್."
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದರೆ ಸಹಿಸಲಾಗದು
ಭಾರತವು ಮೂಲತಃ ಒಂದು ಶಾಂತಿಪ್ರಿಯ ರಾಷ್ಟ್ರವಾಗಿದೆ. ಆದರೆ ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದರೆ ಖಡಾಖಂಡಿತವಾಗಿ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಈಗಾಗಲೇ ನಮ್ಮ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ ಎಂದು ಪರಮೇಶ್ ಹೆಚ್.ಸಿ. ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ. ಇದರ ಜೊತೆಗೆ ಚೀನಾಗೆ ಪಾಠ ಕಲಿಸಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಪಟ್ಟಿಯನ್ನೂ ಕೂಡಾ ಮಾಡಿದ್ದಾರೆ.
1. ಭಾರತಕ್ಕೆ ಈಗ ಸಿಕ್ಕ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಚೀನಾ ಮಾಡುತ್ತಿರುವ ಕುತಂತ್ರ ಪ್ರಪಂಚಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಬೇಕು.
2. ಭಾರತ ಸರ್ಕಾರ ಚೀನಾ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಬಿಡಬಾರದು ಮತ್ತು ಚೀನಾ ಸಾಮಗ್ರಿಗಳ ಮೇಲೆ ಹೆಚ್ಚು ಸುಂಕ ವಿಧಿಸಬೇಕು.
3. ಭಾರತದಲ್ಲಿ ತಯಾರಾಗುವ ವಸ್ತುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.
4. ಚೀನಾ ರಾಯಭಾರಿಯನ್ನು ಕರೆದು ಪ್ರತಿಭಟನೆ ವ್ಯಕ್ತಪಡಿಸಬೇಕು.