ಸರ್ಕಾರದ ಪ್ರತಿಷ್ಠೆಯ ಅಧಿವೇಶನಕ್ಕೆ ದಿನಕ್ಕೆ 1 ಕೋಟಿ ಪೋಲು
ಬೆಂಗಳೂರು, ಏ. 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಬೇಕು ಎಂದು ಹಠ ಹಿಡಿದಿರುವ ಸರ್ಕಾರ ಎರಡು ದಿನಗಳ ವಿಶೇಷ ಅಧಿವೇಶನ ನಡೆಸಿದೆ. ಸೋಮವಾರ ಪುನಃ ಅಧಿವೇಶನ ನಡೆಯಲಿದೆ. ಒಂದು ವಿಧೇಯಕದ ಒಪ್ಪಿಗಾಗಿ ದಿನಕ್ಕೆ ಸುಮಾರು 1 ಕೋಟಿ ರೂ.ಗಳ ಜನರ ತೆರಿಗೆ ಹಣವನ್ನು ಖರ್ಚು ಮಾಡಿ ಅಧಿವೇಶನ ನಡೆಸಲಾಗುತ್ತಿದೆ.
'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲು ಈ ಅಧಿವೇಶನ ನಡೆಸಲಾಗುತ್ತಿದೆ. ಸೋಮವಾರ ನಡೆದ ಮೊದಲ ದಿನದ ಅಧಿವೇಶನದಲ್ಲಿ ವಿಧಾಸಭೆಯಲ್ಲಿ ವಿಧೇಯಕ ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಗಿದೆ. [ಬಿಬಿಎಂಪಿ ವಿಭಜನೆ : ವಿಶೇಷ ಅಧಿವೇಶನದಲ್ಲಿ ಕೋಲಾಹಲ]
ಆದರೆ, ವಿಧಾನಪರಿಷತ್ತಿನಲ್ಲಿ ಸಂಖ್ಯಾಬಲದ ಕೊರತೆ ಎದುರಿಸುತ್ತಿರುವ ಸರ್ಕಾರ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಪ್ರಯತ್ನ ನಡೆಸುತ್ತಿದೆ. ಎರಡು ದಿನಗಳ ಅಧಿವೇಶನ ನಡೆದರೂ ಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಗೊಂಡಿಲ್ಲ. ಸೋಮವಾರ ಪುನಃ ಉಭಯ ಸದನಗಳ ಕಲಾಪ ನಡೆಯಲಿದೆ. [ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ]
ಶಾಸಕರ ಭತ್ಯೆ, ಸಿಬ್ಬಂದಿ ವೇತನ, ಸರ್ಕಾರಿ ಅಧಿಕಾರಿಗಳ ಭತ್ಯೆ, ಭದ್ರತೆಗಾಗಿ ಮಾಡುವ ವೆಚ್ಚ, ವಿದ್ಯುತ್ ಬಿಲ್ ಸೇರಿದಂತೆ ಸರ್ಕಾರ ಪ್ರತಿದಿನದ ಅಧಿವೇಶನಕ್ಕೆ ಸುಮಾರು 1 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ, ಈ ವಿಶೇಷ ಅಧಿವೇಶನದಲ್ಲಿ ಪಾಲಿಕೆ ವಿಭಜನೆ ಬಿಟ್ಟು ಬೇರೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿಲ್ಲ, ಜನರ ತೆರಿಗೆ ಹಣ ಮಾತ್ರ ಖಾಲಿಯಾಗುತ್ತಿದೆ.
ವಿಶೇಷ ಅಧಿವೇಶನಕ್ಕೆ ಜನರ ಹಣ ಪೋಲು
'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ಕ್ಕೆ ಒಪ್ಪಿಗೆ ಪಡೆಯಲು ಸರ್ಕಾರ ವಿಶೇಷ ವಿಧಾನಸಭೆ ಅಧಿವೇಶನವನ್ನು ನಡೆಸುತ್ತಿದೆ. ಪ್ರತಿದಿನದ ಅಧಿವೇಶನಕ್ಕೆ ಸುಮಾರು 1 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ಚರ್ಚೆ ನಡೆಯುತ್ತಿರುವುದು ಮಾತ್ರ ಒಂದೇ ವಿಷಯದ ಕುರಿತು.
ಎರಡು ದಿನದ ಅಧಿವೇಶನ ಮುಕ್ತಾಯ
ಏ.20ರ ಸೋಮವಾರ ಮತ್ತು ಏ.23ರ ಗುರುವಾರ ಎರಡು ದಿನಗಳ ಕಲಾಪ ನಡೆದಿದೆ. ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಮೊದಲ ದಿನ ವಿಧೇಯಕಕ್ಕೆ ಒಪ್ಪಿಗೆ ಪಡೆದಿದೆ. ಆದರೆ, ಪರಿಷತ್ತಿನಲ್ಲಿ ವಿಧೇಯಕದ ಕುರಿತು ಚರ್ಚೆ ನಡೆಯುತ್ತಿದ್ದು ಎರಡು ದಿನದ ಕಲಾಪ ಮುಕ್ತಾಯಗೊಂಡಿದ್ದು ಏ.27ಕ್ಕೆ ಕಲಾಪವನ್ನು ಮುಂದೂಡಲಾಗಿದೆ.
ಪ್ರತಿಷ್ಠೆಗಾಗಿ ತೆರಿಗೆ ಹಣ ಪೋಲು
ಸದನಕ್ಕೆ ಹಾಜರಾಗುವ 225 ಶಾಸಕರು, 75 ವಿಧಾನಪರಿಷತ್ ಸದಸ್ಯರಿಗೆ ಈ ಹಿಂದೆ ಪ್ರತಿನಿತ್ಯದ ಭತ್ಯೆ ರೂಪದಲ್ಲಿ 1000 ರೂ. ನೀಡಲಾಗುತ್ತಿತ್ತು. ಇತ್ತೀಚೆಗೆ ಶಾಸಕರ ಸಂಬಳ ಏರಿಕೆಯಾಗಿದ್ದು ಈ ಮೊತ್ತ 2 ಸಾವಿರ ರೂ.ಗೆ ಏರಿಕೆಯಾಗಿದೆ. ಆದ್ದರಿಂದ ನಿತ್ಯ ಭತ್ಯೆಗೆ 6 ಲಕ್ಷ ರೂ. ವ್ಯಯವಾಗುತ್ತದೆ. ಶಾಸಕರು ತಮ್ಮ ಕ್ಷೇತ್ರದಿಂದ ಆಗಮಿಸಲು ಕಿ.ಮೀ.ಗೆ 30 ರೂ.ನಂತೆ ಭತ್ಯೆ ಪಾವತಿ ಮಾಡಬೇಕಾಗುತ್ತದೆ.
ಅಧಿಕಾರಿಗಳು, ಸಿಬ್ಬಂದಿ, ಪೊಲೀಸರ ವೆಚ್ಚ
ಇನ್ನು ಅಧಿವೇಶನಕ್ಕಾಗಿ ಆಗಮಿಸುವ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ವಿಧಾನಸೌಧದ ಸಿಬ್ಬಂದಿ, ವಿದ್ಯುತ್ ಬಿಲ್ ಸೇರಿದಂತೆ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತದೆ. ಅಧಿವೇಶನ ನಡೆಯುತ್ತಿದೆ ಎಂದರೆ ಸರ್ಕಾರಿ ಕಚೇರಿಗಳಲ್ಲಿಯೂ ಕೆಲಸಗಳು ಆಗುವುದಿಲ್ಲ. ಆದರೆ, ಜನರ ಹಣ ಮಾತ್ರ ಪೋಲಾಗುತ್ತಿರುತ್ತದೆ.
ಸರ್ಕಾರದ ಪ್ರತಿಷ್ಠೆ ಪ್ರಶ್ನೆ
ಬಿಬಿಎಂಪಿ ಬಿಭಜನೆಗೆ ಸುಗ್ರೀವಾಜ್ಞೆ ತಯಾರಿಸಿ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟಿತ್ತು. ಆದರೆ, ಅದಕ್ಕೆ ಒಪ್ಪಿಗೆ ಸಿಗದ ಹಿನ್ನಲೆಯಲ್ಲಿ ಉಭಯ ಸದನಗಳ ಒಪ್ಪಿಗೆ ಪಡೆಯಲು ಈ ವಿಶೇಷ ಅಧಿವೇಶನ ಕರೆಯಲಾಗಿದೆ. ವಿಧೇಯಕಕ್ಕೆ ಒಪ್ಪಿಗೆ ಪಡೆಯುವುದನ್ನು ಪ್ರತಿಷ್ಠೆಯಾಗಿ ಸರ್ಕಾರ ಪರಿಗಣಿಸಿದೆ, ಅದಕ್ಕಾಗಿ ತೆರಿಗೆ ಹಣವನ್ನು ಖರ್ಚು ಮಾಡುತ್ತಿದೆ.