ಮನಸೋ ಇಚ್ಛೆ ಓಡಾಡೋರಿಗೆ ಮನೆಯಲ್ಲಿರುವವರ ಸ್ಥಿತಿ ಯಾಕೆ ಅರ್ಥವಾಗಲ್ಲ?
ಇಡೀ ಭಾರತ ಇಪ್ಪತ್ತೊಂದು ದಿನ ಲಾಕ್ ಡೌನ್. ನನಗೆ ತಿಳಿದಂತೆ ಇಷ್ಟು ದೀರ್ಘ ಕಾಲದ ಲಾಕ್ ಡೌನ್ ಕಂಡಿರಲಿಲ್ಲ, ಕೇಳಿರಲಿಲ್ಲ. ಎಪ್ಪತ್ತೈದು ವರ್ಷ ದಾಟಿದೆ ನನಗೆ. ಹೆಂಡತಿ, ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು... ಎಲ್ಲ ಇರುವ ತುಂಬು ಕುಟುಂಬ ನಮ್ಮದು. ಯಾವಾಗ ಪ್ರಧಾನಿಗಳು, ಯಾರೂ ಮನೆ ಬಿಟ್ಟು ಕೂಡ ಬರಬಾರದು ಎಂಬ ಆದೇಶ ಕೊಟ್ಟರೋ ಆಗಿನಿಂದ ನಾವ್ಯಾರೂ ಮನೆಯ ಕಾಂಪೌಂಡ್ ಕೂಡ ದಾಟಿಲ್ಲ.
ಮೊಮ್ಮಗಳು ಇನ್ನೂ ಬಹಳ ಸಣ್ಣವಳು. ದಿನವೂ ನಾನೇ ಅವಳನ್ನು ಹೊರಗೆ ವಾಕಿಂಗ್ ಕರೆದುಕೊಂಡು ಹೋಗ್ತಿದ್ದೆ. ಈಗಲೂ ಅವಳದು ಒಂದೇ ಹಠ. ನನ್ನ ಮಕ್ಕಳು, ಗಾಡಿಯಲ್ಲಾದರೂ ಬನ್ನಿ, ಹೊರಗೆ ಹೋಗಿ ಬಂದುಬಿಡೋಣ ಅಂತಾರೆ. ಆದರೆ ನಾನು ಅದಕ್ಕೆ ಸುತಾರಾಂ ಒಪ್ಪಲ್ಲ.
ಕೊರೊನಾ ಲಾಕ್ ಡೌನ್ ಗೆ ಸಿಟ್ಟು ಮಾಡುವ ಮುನ್ನ ಈ ಜನರ ಬಗ್ಗೆ ತಿಳಿಯಿರಿ...
ಈಗ ನನ್ನ ಬಗ್ಗೆ ಹೇಳಿಕೊಂಡಿದ್ದಾಯಿತು. ಆದರೆ ಮನೆ ಎದುರು ಸ್ಕೂಟರ್, ಬೈಕ್, ಕಾರುಗಳು ಓಡಾಡುತ್ತಲೇ ಇವೆ. ಕೆಲವರಂತೂ ಜೋರಾಗಿ ಹಾರ್ನ್ ಮಾಡುತ್ತಾ, ಕೂಗಾಡುತ್ತಾ ಹೋಗುತ್ತಾರೆ. ಕೆಲವರಿಗೆ ಮನೆಗೆ ಏನಾದರೂ ತೆಗೆದುಕೊಂಡು ಬರುವ ಅನಿವಾರ್ಯ ಇರಬಹುದು. ಆದರೆ ಬಹುತೇಕರನ್ನು ನೋಡಿದರೆ ಹಾಗೆ ಅನಿಸಲ್ಲ.
ವಯಸ್ಸಾದವನು, ಬರೀ ದೂರುಗಳನ್ನೇ ಹೇಳ್ತಾನೆ ಅಂದುಕೊಳ್ಳಬೇಡಿ. ಈಗಿನ ಪರಿಸ್ಥಿತಿಯ ತೀವ್ರತೆ ತಿಳಿದುಕೊಂಡು ತಾನೇ ಇಪ್ಪತ್ತೊಂದು ದಿನ ಲಾಕ್ ಡೌನ್ ಮಾಡಿರೋದು. ಹಾಗಿಲ್ಲದಿದ್ದಲ್ಲಿ ಆರಾಮಾಗಿ ಓಡಾಡಿಕೊಂಡು ಇರೋದಕ್ಕೆ ಬಿಡಬಹುದಿತ್ತು. ಈ ಗಾಡಿಗಳಲ್ಲಿ ಆರಾಮವಾಗಿ ಓಡಾಡುವವರಿಗೆ ಪೆಟ್ರೋಲ್ ಬಂಕ್ ತೆಗೆದಿದೆ ಅನ್ನೋದು ತಾನೇ ಧೈರ್ಯ?
ಪೆಟ್ರೋಲ್ ಬಂಕ್ ತೆಗೆಯುವುದಕ್ಕೆ ಆಕ್ಷೇಪ ಇಲ್ಲ. ಆದರೆ ಅದಕ್ಕೆ ಸಮಯ ನಿಗದಿ ಆಗಬೇಕು. ಪೆಟ್ರೋಲ್ ಭರ್ತಿ ಮಾಡುವ ಮುನ್ನ ಅವರ ಕಾಂಟ್ಯಾಕ್ಟ್ ನಂಬರ್, ವಾಹನದ ನೋಂದಣಿ ಸಂಖ್ಯೆ ತೆಗೆದುಕೊಳ್ಳಬೇಕು. ಒಂದು ವೇಳೆ ಮನಸೋ ಇಚ್ಛೆ ಓಡಾಡಿದರೆ ಇಂಥವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಅನ್ನೋದು ನನ್ನ ಒತ್ತಾಯ.
ಎಲ್ಲೋ ಬೆಂಗಳೂರಿನ ಒಂದು ಮೂಲೆಯಲ್ಲಿ ಕೂತ ವಯಸ್ಸಾದ ವ್ಯಕ್ತಿಯ ಮಾತು ಯಾರು ಕೇಳ್ತಾರೆ ಅಂತಲೇ ಮೊದಲಿಗೆ ಅಂದುಕೊಂಡೆ. ಆದರೆ ಯಾವಾಗೆಲ್ಲ ವಾಹನದ ಶಬ್ದ ಕೇಳುತ್ತೋ ಆಗೆಲ್ಲ ನನ್ನ ಮೊಮ್ಮಗಳ ಅಮಾಯಕ ಮುಖ ಕಣ್ಣೆದುರು ಬರುತ್ತದೆ. ಜತೆಗೆ ನನ್ನ ಕೈಲಾಗದತನ ಕೂಡ ನೆನಪಾಗುತ್ತದೆ.
ನಾನೇನೋ ಹೀಗೆ ಮಾಡಿ, ಹಾಗೆ ಮಾಡಿ ಎಂದು ಯಾವುದೋ ಭಾವುಕತೆಯಿಂದ ಹೇಳಿಬಿಟ್ಟೆ. ಉಹುಂ, ಬೇಡ. ಸಂಬಂಧಪಟ್ಟವರು ಚೆನ್ನಾಗಿ ಆಲೋಚಿಸಿಯೇ ನಿರ್ಧಾರ ಮಾಡಲಿ. ಮನೆಯೊಳಗೆ ಹಲ್ಲು ಕಚ್ಚಿಕೊಂಡು ಕೂತವರ ಪರಿಸ್ಥಿತಿಯನ್ನು ರಸ್ತೆಯಲ್ಲಿ ಮನಸೋ ಇಚ್ಛೆ ಓಡಾಡುವವರು ಅರ್ಥ ಮಾಡಿಕೊಳ್ಳಲಿಲ್ಲ ಅಂದರೆ, ಯಾವ ಲಾಕ್ ಡೌನ್ ಏನು ಮಾಡುತ್ತೆ?