ನಾವು ಮಾಡಿದ ಪಾಪ ನಮ್ಮನ್ನು ಕಾಡುತ್ತಿದೆ: ಕರ್ಮ ಬಿಡುವುದೇ ನಮ್ಮನ್ನು?
ಒಂದೆಡೆ ರಚ್ಚೆ ಹಿಡಿದಂತೆ ಮಳೆ ಸುರಿಯುತ್ತಿದೆ. ಇನ್ನೊಂದೆಡೆ ಹನಿ ಮಳೆಯೂ ಇಲ್ಲ. ಪ್ರಕೃತಿ ಹೀಗೆಯೇ, ತನ್ನ ಕೋಪವನ್ನು ನಾನಾ ರೀತಿಗಳಲ್ಲಿ ತೋರಿಸಿಕೊಳ್ಳುತ್ತಿದೆ. ಅಷ್ಟಕ್ಕೂ ಪ್ರಕೃತಿಗೆ ನಮ್ಮ ಮೇಲೆ ಮುನಿಸೇಕೆ? ಮನಬಂದಂತೆ ಮರಗಳನ್ನು ಕಡಿದು, ಕಂಡಕಂಡಲ್ಲಿ ಕಟ್ಟಡಗಳನ್ನು ಕಟ್ಟಿ, ಎಲ್ಲವನ್ನೂ ಕಲುಷಿತಗೊಳಿಸಿ ನಿಸರ್ಗ ಕೊಟ್ಟ ಕೊಡುಗೆಯನ್ನು ಕೊಲ್ಲುತ್ತಿರುವ ಮನುಷ್ಯನ ಮೇಲೆ ಸಿಟ್ಟು ಬಾರದೆಯೇ ಇರುತ್ತದೆಯೇ?
ಇದು ನಮ್ಮನ್ನು ನಾವೇ ಶಪಿಸಿಕೊಳ್ಳುವ ಸಮಯ. ತಪ್ಪುಗಳ ಕುರಿತು ಆತ್ಮಾವಲೋಕನ ಮಾಡಕೊಳ್ಳುವ, ಪಶ್ಚಾತ್ತಾಪಪಟ್ಟುಕೊಳ್ಳುವ ಮತ್ತು ತಿದ್ದಿಕೊಳ್ಳುವ ಹೊತ್ತು. ಈಗಲಾದರೂ ನಾವು ಮಾಡಿರುವ ಅನಾಹುತಗಳನ್ನು ಸರಿಪಡಿಸಲು ಅವಕಾಶ ಇದೆ.
ಇಷ್ಟೆಲ್ಲ ಸಂಕಷ್ಟಗಳಿಗೆ ಮನುಷ್ಯನೇ ಕಾರಣ ಎನ್ನುವುದು ಎಲ್ಲರ ಅಭಿಪ್ರಾಯ. ಮನುಷ್ಯ ಮಾಡಿದ ತಪ್ಪುಗಳೇನು? ಅದು ಹೇಗೆ ನಮ್ಮನ್ನು ಹಿಂಬಾಲಿಸುತ್ತಿದೆ ಎಂಬ ಬಗ್ಗೆ 'ಒನ್ ಇಂಡಿಯಾ'ದ ಓದುಗರಾದ ನರಸಾಪುರದ ರೂಪಾ ಮಂಜಪ್ಪ ಅವರ ಅಭಿಪ್ರಾಯ ಇಲ್ಲಿದೆ...
ಕಾವೇರಿ ಹೊರ ಹರಿವು ಹೆಚ್ಚಳ: ಹೊಗೆನಕಲ್ ಜಲಪಾತ ಪ್ರವೇಶ ನಿರ್ಬಂಧ
ನಾವು ಏನು ಕೆಲಸ ಮಾಡುತ್ತೀವೋ ಅದರ ಫಲ ನಾವೇ ಅನುಭವಿಸುತ್ತೇವೆ. ಬೇವಿನ ಬೀಜವನ್ನು ಬಿತ್ತಿ ಸಿಹಿಯಾಗಿ ಹಣ್ಣು ಬಿಡುವ ಮಾವಿನ ಮರ ಬೇಕೆಂದರೆ ಹೇಗೆ ಸಾಧ್ಯ? ಕರ್ಮ ಬಿಡುವುದೇ ನಮ್ಮನ್ನು? ಪ್ರಕೃತಿ ನಾಶ ಮಾಡಿದ ನಾವುಗಳೇ ನಮಗೇನು ಕಷ್ಟ ಬರಬಾರದು ಎಂದರೆ ಕರ್ಮ ಬಿಡುವುದೇ ನಮ್ಮನ್ನು? ಪರಿಸರ ನಾಶಕ್ಕೆ ಕಾರಣರಾಗಿರುವ ನಮ್ಮ ಮೇಲೆ ಅದು ನಾನಾರೀತಿಯಲ್ಲಿ ಸರಿಯಾಗಿಯೇ ಸೇಡು ತೀರಿಸಿಕೊಳ್ಳುತ್ತಿದೆ.
ಬಾಲ್ಯದಲ್ಲಿದ್ದ ಆ ಸಾಲುಮರಗಳು ಇಂದು ಬದುಕಿಲ್ಲ. ಆಟ ಆಡಿದ ಅದೆಷ್ಟೋ ಕೆರೆಗಳು ಇಂದು ಬದುಕುಳಿದಿಲ್ಲ. ಸೂರ್ಯನ ಕಿರಣ ಭೂಮಿ ಸೋಕದಂತೆ ಇದ್ದ ದಟ್ಟ ಅರಣ್ಯಗಳಿಂದು ಬೋಳು ಬೋಳಾಗಿ ಕಾಣುವುದರ ಜೊತೆಗೆ, ಉರಿಬಿಸಿಲಿಗೆ ನಲುಗುತ್ತಿವೆ. ಈಗ ನೋಡಿ ಒಂದು ಕಡೆ ಬಿಟ್ಟೂ ಬಿಡದೆ ಮಳೆ ಹೊಡೆದರೆ, ಮತ್ತೊಂದು ಕಡೆ ಭೀಕರ ಬರಗಾಲ. ರೈತರ ಸ್ಥಿತಿಗತಿಯ ದೃಶ್ಯ ಮಾತ್ರ ಬದಲಾಗಿಲ್ಲ. ಅಲ್ಲಿಯೂ ತಲೆ ಮೇಲೆ ಕೈ ಹೊತ್ತಿದ್ದ, ಇಲ್ಲಿಯೂ ತಲೆ ಮೇಲೆ ಕೈಯಿಟ್ಟು ಆಕಾಶ ನೋಡುತ್ತಾ ಕುಳಿತ್ತಿದ್ದಾನೆ. ಇದಕ್ಕೆಲ್ಲಾ ಯಾರು ಕಾರಣ? ನಾವೇ ತಾನೇ? ನಿನ್ನೆ ಅದು ನನ್ನ ಜಾಗ, ಇದು ನಿನ್ನ ಜಾಗ ಎಂದು ಹೊಡೆದಾಡುತ್ತಿದ್ದವರು ಇಂದು ಒಂದೇ ಸೂರಿನಡಿಯಲ್ಲಿದ್ದಾರೆ.
ಕರ್ಮ ಯಾರನ್ನೂ ಬಿಡುವುದಿಲ್ಲ. ನನ್ನನ್ನು ಕೂಡ, ನಿಮ್ಮನ್ನು ಕೂಡ. ಯಾವಾಗ ಯಾವ ಪಾಠ ಹೇಳಿಕೊಡಬೇಕೆಂದು ಪ್ರಕೃತಿ ಮಾತೆಗೂ ಚೆನ್ನಾಗಿ ಗೊತ್ತಿದೆ. ಆದರೆ ಈ ಬಾರಿ ತುಸು ಕಠೋರವಾಗಿಯೇ ಬುದ್ದಿ ಕಲಿಸುತ್ತಿದ್ದಾಳೆ.
"ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೊ, ಅದು ನಿನ್ನದಲ್ಲ" ಎಂದು ಭಗವಾನ್ ಶ್ರೀ ಕೃಷ್ಣ ಗೀತೆಯಲ್ಲಿಸ ನುಡಿದಿದ್ದಾನೆ, ಆದರೆ ಮಾನವರಾದ ನಾವು ನಮ್ಮ ನಮ್ಮ ಕ್ಷಣಿಕ ಸುಖಗಳಿಗಾಗಿ ಎಂದಿಗೂ ನಮ್ಮದಾಗದೆ ಇರುವ ಪ್ರಕೃತಿ ಮಾತೆಯ ಮೇಲೆ ಕೆಟ್ಟ ಆಸೆಯ ಕಣ್ಣಿಟ್ಟು, ಆಕೆಗೆ ಹಾನಿ ಮಾಡುತ್ತಿದ್ದೇವೆ.
ಇಳಿದ ಮಲಪ್ರಭಾ ಮುನಿಸು, ಮಹಾರಾಷ್ಟ್ರದ ಜಲಾಶಯಗಳ ಹರಿವು ಹೇಗಿದೆ?
ಮಾನವ ತನ್ನವರ ಮೇಲೆ ಅಧಿಕಾರ ಚಲಾಯಿಸುವಂತೆ ಭೂ ಮಾತೆಗೂ ಬೇಲಿ ಹಾಕಿ ನೀನು ನನ್ನವಳು ನನ್ನವಳಾಗಿ ಮಾತ್ರ ಇರಬೇಕು ಎಂದು ಸಿಕ್ಕ ಸಿಕ್ಕ ಕಡೆ ಮುಗಿಲೆತ್ತರದ ಕಟ್ಟಡಗಳ ಕಟ್ಟಿ ಅಧಿಕಾರ ಚಲಾಯಿಸಿದರೆ ಸುಮ್ಮನಿರುವಳೆ ತಾಯಿ. ಯಾವುದು ಎಲ್ಲಿರಬೇಕೋ ಅಲ್ಲಿದ್ದರೆ 'ಚೆನ್ನ' ಎನ್ನುವುದಕ್ಕಿಂತ, 'ಒಳಿತು' ಅಂದರೆ ತಪ್ಪಿಲ್ಲ. ಕಾಡು ಕಾಡಾಗಿಯೇ ಇರಬೇಕು, ಕೆರೆಗಳು ನದಿಗಳು ಅವುಗಳಾಗಿಯೇ ಖುಷಿಯಿಂದ ಹರಿಯುತ್ತಿರಬೇಕು.
ಮಾನವನ ದುರಾಸೆಗೆ ಕಾಡು, ಕೆರೆ, ನದಿಗಳು ಎಲ್ಲವೂ ಈಗ ನಾಡಾಗಿ ಬದಲಾಗಿವೆ. ತಾಯಿ ಜಾಗದಲ್ಲಿರುವ ಪ್ರಕೃತಿ ಮಾತೆ ಇಲ್ಲಿಯವರೆಗೂ ನಮಗೆ ಏನು ಬೇಕೋ ಎಲ್ಲವನ್ನು ಕೊಡುತ್ತಲೇ ಬಂದಿದ್ದಾಳೆ. ಆದರೆ ನಾವು ಆಕೆಗೆ ಮಾಡುತ್ತಿರುವುದಾದರೂ ಏನು? ಬರೀ ನೋವು. ನಾವು ಸತ್ತಾಗ ನಮ್ಮ ದೇಹವನ್ನೇ ಒಯ್ಯುವ ಅಧಿಕಾರವನ್ನು ಆ ದೇವರು ನಮಗೆ ನೀಡಿಲ್ಲ ಅಂದಮೇಲೆ ಭೂಮಿಯನ್ನು ಒಯ್ಯೋಕೆ ಆಗುತ್ತದೆಯೇ?!. ಮೇಲಿರುವ ಪರಮಾತ್ಮನಿಗೂ ಗೊತ್ತಿದೆ, ಎಲ್ಲವನ್ನು ಒಯ್ಯುವ ಅಧಿಕಾರ ಕೊಟ್ಟಿದ್ದರೆ ಇದಕ್ಕೆ ಭೂಮಿ ಬದಲಿಗೆ ರಣರಂಗ ಎಂದು ಹೆಸರಿಡಬೇಕಿತ್ತು ಎಂದು. ಈಗ ನಾವೆಲ್ಲಾ ಅನುಭವಿಸುತ್ತಿರುವುದು ಇದೆ. ಮಾಡಿದ ತಪ್ಪಿಗೆ ಅನುಭವಿಸಲೇಬೇಕಿದೆ. ಜೊತೆಗೆ ಇನ್ನಾದರೂ ಒಂಚೂರು ಬುದ್ಧಿ ಕಲಿತು ಬಾಳಬೇಕಿದೆ.