ಅಲ್ಲೊಬ್ಬರು ಹರಿಪ್ರಸಾದ್ ಇಲ್ಲೊಬ್ಬರು ಪರಮೇಶ್ವರ್
ಕೆಲ ದಿನಗಳ ಹಿಂದೆಯಷ್ಟೇ ಅಡ್ವಾಣಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ತಮ್ಮ ಯೋಗ್ಯತೆ ಏನು ಎಂಬುದನ್ನು ತೋರಿಸಿದ್ದ ಪರಮೇಶ್ವರ್, ಆ ನಂತರ ಅವರ ಹೆಸರಿನ ಜೊತೆ ಡಾಕ್ಟರ್ ಎಂದು ಸೇರಿಸಬೇಕೋ ಸೇರಿಸಬಾರದೋ ಎಂದು ಯೋಚನೆ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಸಮಯದಲ್ಲಿ ತಮ್ಮ ಬಾಯಿಗೆ ಇಂಟರ್ವಲ್ ಸಹ ಕೊಡದೆ ಪರಮೆಶವರ್ ರವರು ಮತ್ತೊಮ್ಮೆ ಸುದ್ದಿಯಾಗಿ, ಸಣ್ಣವರಾಗಿದ್ದಾರೆ.
ಇಡೀ ದೇಶದಲ್ಲಿ ಎಲ್ಲೇ ಅವಘಡ ಸಂಭವಿಸಿದರೂ ಮೊದಲು ಅಲ್ಲಿಗೆ ಹೋಗುವುದು ಆರೆಸ್ಸಸ್ ನ ಕಾರ್ಯಕರ್ತರು. ಇದನ್ನು ಪ್ರತ್ಯಕ್ಷ ನೋಡಿದವರಿಗೋ ಅಥವಾ ಪ್ರತ್ಯಕ್ಷ ಅನುಭವಿಸಿದವರಿಗೋ ಗೊತ್ತು. ಯಾಕೆಂದರೆ ಆರೆಸ್ಸಸ್ ಮಾಡುವ ಯಾವ ಕೆಲಸಗಳೂ ನಮ್ಮ ಮಾಧ್ಯಮದವರಿಗೆ ವಿಶೇಷವೂ ಅಲ್ಲ ಸುದ್ದಿಯೂ ಅಲ್ಲ. ಬಹುಶಃ ಅದು ಆರೆಸ್ಸೆಸ್ಸಿನವರ ಕರ್ತವ್ಯ ಎಂದೇ ಅವರು ಭಾವಿಸಿ ಸುಮ್ಮನಿರುತ್ತಾರೆ. ಅದು ನಿಜವೂ ಹೌದು. ಇಲ್ಲಿ ಆದದ್ದೂ ಅದೇ.
ಸದ್ಯದ ರಾಜ್ಯದ ಬ್ರೇಕಿಂಗ್ ನ್ಯೂಸ್ ಆದ ಅಸ್ಸಾಮೀಯರ ವಲಸೆಯನ್ನು ನಿಯಂತ್ರಿಸಲು ಮತ್ತು ಅವರಿಗೆ ಧೈರ್ಯ ತುಂಬಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಅತ್ಯಂತ ಸಹಜವಾಗಿಯೇ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಈ ಕೆಲಸವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರದ 'ಪೋಲೀಸ್ ವ್ಯವಸ್ಥೆಯ ವೈಫಲ್ಯ' ಎಂದು ನಾಮಕರಣ ಮಾಡಿ ಪುರೋಹಿತರಾಗಹೊರಟಿದ್ದಾರೆ ಪರಮೇಶ್ವರ್. ಇಂತಹ ಕೆಲಸದ ಬಗ್ಗೆಯೂ ತಮ್ಮ ಸಣ್ಣ ಸಣ್ಣ ಮಾತುಗಳನ್ನು ಹರಿಬಿಟ್ಟಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಯೋಗ್ಯ ನಾಯಕರ ಕೊರತೆಯನ್ನು ಎತ್ತಿ ಹಿಡಿದಿದೆ.
ಪ್ರತಿಯೊಂದಕ್ಕೂ ರಾಜ್ಯ ಸರ್ಕಾರವನ್ನು ತೆಗಳುವ ಚಟದಲ್ಲಿ ಮಗ್ನರಾಗಿರುವ ಹಲವಾರು ತಲೆಲೆಕ್ಕಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಮಾತಾಡುವ ಮುಂಚೆ ಪರಮೇಶ್ವರರ ಮೆದುಳು ಕೆಲಸ ಮಾಡಲೆಂದು ಅವರವರ ದೇವರಲ್ಲಿ ಪ್ರಾರ್ಥಿಸುವುದು ರಾಜ್ಯ ಕಾಂಗ್ರೆಸ್ ನ ಹಿತದೃಷ್ಟಿಯಿಂದ ಹಾಗು ಅವರ ಹಿತದೃಷ್ಟಿಯಿಂದ ಒಳ್ಳೆಯದು ಎನ್ನುವುದು ಒಳ್ಳೆಯ ಸಲಹೆಯಾಗುವುದರಲ್ಲಿ ಸಂಶಯವಿಲ್ಲ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಕೆ. ಹರಿಪ್ರಸಾದ್ ಅವರು ಕೂಡ "ಖಾಕಿ ಚಡ್ಡಿ ಹಾಕಿಕೊಂಡು ತಲೆ ಮೇಲೆ ಕಪ್ಪು ಟೋಪಿ ಹೇರಿಕೊಂಡವರು ಅಲ್ಲದೇ ನಾಥೂರಾಮ್ ಘೋಡ್ಸೆ ಅಂಥವರು ಈ ಭಾರತ ದೇಶದ ಮೊದಲ ಭಯೋತ್ಪಾದಕರು" ಎಂದು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಹೇಳಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಸ್ಸಾಮೀಯರು ಗುಳೆ ಹೋಗುವಂತೆ ಮಾಡಿದ ಎಸ್ಎಮ್ಎಸ್ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎಂದೇ ಹೇಳುತ್ತ ಬಂದಿದ್ದ ಕಾಂಗ್ರೆಸ್ಸಿಗೆ, ಈ ಹುನ್ನಾರದ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡವಿದೆಯೆಂಬ ಸತ್ಯಸಂಗತಿ ಬೀಗ ಜಡಿದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿ ಕ್ರಮ ತೆಗೆದುಕೊಳ್ಳಬೇಕೆಂದು ಭಾರತ ಸರಕಾರವೇ ಪಾಕಿಸ್ತಾನಕ್ಕೆ ಕೇಳಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವಾರು ಜನರನ್ನೂ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆದರೆ, ಈ ಕಾಂಗ್ರೆಸ್ ನಾಯಕರ ಬಾಯಿಚಪಲ ಇನ್ನೂ ಕಡಿಮೆಯಾಗಿಲ್ಲ.