ಟಿವಿ9 ಅಪರ ಕರ್ಮ ಕಾರ್ಯಕ್ರಮ ನಡೆಸಿಕೊಡುವುದೇ?
ಒಂದೊಂದು ಧರ್ಮದಲ್ಲೂ ಮೃತ ವ್ಯಕ್ತಿಗೆ ಮೋಕ್ಷ ಕಲ್ಪಿಸಲು ಅದರದೇ ಆದ ವಿಧಿವಿಧಾನಗಳು ಇವೆಯಾದರೂ ಹಿಂದೂ ಧರ್ಮದಲ್ಲಿ ತುಸು ಹೆಚ್ಚೇ ಅನ್ನಬಹುದು. ಆದರೆ ಖಂಡಿತ ಇದು ಕಾಟಾಚಾರಕ್ಕೆ ನಡೆಯುವ ಸಂಪ್ರದಾಯ ಇದಲ್ಲ.
ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆ ಅಂದರೆ ಮೊನ್ನೆ ಟಿವಿ9 ಮತ್ತು ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ನಾಡು ಕಂಡ ಅಪರೂಪದ ರಾಜಕಾರಣಿ ಬಂಗಾರಪ್ಪ ಅವರ ಅಪರ ಕರ್ಮಗಳ ಬಗ್ಗೆ ಅವರ ಪುತ್ರರ ನಡುವೆ ಎದ್ದಿರುವ ವಿವಾದ, ವೈಮನಸ್ಯದ ಹೊಗೆ ಕಂಡಾಗ... ಹೌದಲ್ವಾ ಮೋಕ್ಷ ಸಾಧನೆಗಾಗಿ ಪೂರ್ವಜರು ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿಯ ಬಗ್ಗೆ ಹೀಗೆಲ್ಲ ಬೀದಿರಂಪಾಟ ನಡೆಯುತ್ತಿದೆಯಲ್ಲ ಎಂದು ದುಃಖದ ಕಟ್ಟೆಯೊಡೆದಿತ್ತು.
ಟಿವಿ9 ವಾಹಿನಿಯ ಹಸೀಬುರ್ ರೆಹಮಾನ್ ಹಾಸನ ಅವರು ನಡೆಸಿಕೊಟ್ಟ ಎಲ್ಲೂ ತೂಕ ತಪ್ಪದ, ವಿವೇಕ, ವಿವೇಚನೆಯ ನೇರ ಕಾರ್ಯಕ್ರಮ ನೋಡಿದಾಗ 'ಹೌದಲ್ವಾ! ಟಿವಿ9 ಅದರಲ್ಲೂ ನಿರೂಪಕ ರೆಹಮಾನ್ ಅವರು ಅಪರ ಕರ್ಮದ ಬಗ್ಗೆ ಕಾರ್ಯಕ್ರಮ ನಡೆಸಿಕೊಡಬಹುದಲ್ವಾ' ಎನ್ನಿಸಿತು. ಇದನ್ನು ಕೇಳಿ ಗಹಗಹಿಸಿ ನಗಬೇಡಿ. 'ಟಿವಿ9 ನಲ್ಲಿ ಹೊಗೆ ಕಾರ್ಯಕ್ರಮ' ಎಂದು ಕೊಂಕು ತೆಗೆಯಬೇಡಿ. 'ದಟ್ಸ್ ಕನ್ನಡ'ದ ಸಾಮಾನ್ಯ ಓದುಗನಾಗಿ, ಟಿವಿ9 ನ ರೆಗ್ಯುಲರ್ ವೀಕ್ಷಕನಾಗಿ, ಸೀರಿಯಸ್ ಆಗಿಯೇ ಈ ಮಾತನ್ನು ಹೇಳುತ್ತಿದ್ದೇನೆ.
ಟಿಆರ್ ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಲಂಗುಲಗಾಮಿಲ್ಲದೆ ಭವಿಷ್ಯವಾಣಿಗಳ ಬಗ್ಗೆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ಸುಮ್ಮನೆ ಜನರ ಕಾಲಹರಣ ಮಾಡುವ ಬದಲು ಇಂತಹ ಅರ್ಥವತ್ತಾದ ವಿಷಯದ ಬಗ್ಗೆ ತಿಳಿಯ ಹೇಳಬಹುದಲ್ಲಾ! ಹಾಗಂತ ಇದೂ ಮೂಢ ನಂಬಿಕೆಯನ್ನು ಪ್ರೋತ್ಸಾಹಿಸಿದಂತಾಗೊಲ್ವೇ ಎಂದು ಮೂಗುಮುರಿಯಬೇಡಿ.
ಮೊನ್ನೆ ಟಿವಿ9 ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಸ್ವಲ್ಪ ಮುನಿಸು ತೋರುತ್ತಾ 'ಹೇಳಿ ರೆಹಮಾನ್, ಮುಸ್ಲಿಮರಾಗಿ ನಿಮ್ಮಲೂ ಇಂತಹ ಪದ್ಧತಿ ಇದ್ದರೆ ಏನು ಮಾಡುತ್ತೀರಿ' ಎಂದು ನಿರೂಪಕರನ್ನು ಕೆಣಿಕಿದರು. ಆದರೆ ಮಧು ಬಂಗಾರಪ್ಪನವರ ಭಾವೋದ್ವೇಗವನ್ನು ಸರಿಯಾಗಿ ಅರ್ಥ ಮಾಡಿಕೊಂಡ ರೆಹಮಾನ್, ತೂಕದ ಮಾತನ್ನೇ ಹೇಳಿದರು. ಆಗ ಅನಿಸಿದ್ದು. ಹೌದಲ್ವಾ ಅಪರ ಕರ್ಮಗಳ ಬಗ್ಗೆಯೇ ರೆಹಮಾನ್ ಕಾರ್ಯಕ್ರಮ ನಡೆಸಿಕೊಡಬಹುದಲ್ವಾ ಎನಿಸಿತು. please Rahman...