ಹಿಂದೂ ದ್ವೇಷಿ ಬುದ್ಧಿಜೀವಿಗಳಿಗೆ ದೇವರು ಬುದ್ಧಿ ನೀಡಲಿ
ಮೊನ್ನೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ರವರ 121ನೆಯ ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ವಿಶ್ವ ವಿಖ್ಯಾತ ವಿಚಾರ(ವಿಲ್ಲದ)ವಾದಿ ಪ್ರೊ. ಜಿ.ಕೆ.ಗೋವಿಂದರಾವ್ ರವರು ರವಿಶಂಕರ್ ಗುರೂಜಿಯವರ ಬಗ್ಗೆ ಸಿಕ್ಕಾಪಟ್ಟೆ ಮಾತಾಡಿ ಸುಸ್ತಾದದ್ದು ಅಂತರ್ಜಾಲದಲ್ಲೂ ಹರಿದಾಡಿತು. ಅವರು ಪ್ರೊಫೆಸರ್ ಅಲ್ವಾ, ತುಂಬಾ ಬುದ್ದಿವಂತರು. ಓದುಗರ ಪ್ರತಿಕ್ರಿಯೆಗಳನ್ನು ನೋಡಲು ಕೂಡ ಹೋಗುವುದಿಲ್ಲ!
ಕಳೆದ ಜನವರಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಬರಗೂರು ರಾಮಚಂದ್ರಪ್ಪನವರು, ಸಾಹಿತಿ ಮರುಳಸಿದ್ದಪ್ಪನವರು, ಭೈರಪ್ಪನವರ ಹಾಗು ಸಂಶೋಧಕ ಚಿದಾನಂದಮೂರ್ತಿಯವರ ವಿರುದ್ಧ ಮಾತಾಡಿದ್ದರು.
ನಮ್ಮ ರಾಜ್ಯದ ಸಾಹಿತಿ ಮರುಳಸಿದ್ದಪ್ಪನವರು, ಪ್ರೊಫೆಸರ್ ಜಿ.ಕೆ.ಗೋವಿಂದರಾವ್, ಡಾ.ಯು.ಆರ್. ಅನಂತಮೂರ್ತಿ, ಡಾ.ಬರಗೂರು ರಾಮಚಂದ್ರಪ್ಪ, ಸಾಹಿತಿ ಚಂದ್ರಶೇಖರ ಪಾಟೀಲರು ಇನ್ನು ಮುಂತಾದ ಅಸಾಧಾರಣ ಪ್ರತಿಭೆಗಳು ಯಾವ ಕಾರ್ಯಕ್ರಮಗಳಲ್ಲಾಗಲಿ, ಯಾವ ವೇದಿಕೆಗಳಲ್ಲಾಗಲಿ ಮಾತನಾಡುವುದು ಮಾತ್ರ ಸಂಘಪರಿವಾರದ ವಿರುದ್ಧ, ಇಲ್ಲವೇ ಮಠಮಂದಿರಗಳ ಬಗ್ಗೆ, ಸಾಧುಸಂತರ ವಿರುದ್ಧ, ಭೈರಪ್ಪನವರ ವಿರುದ್ಧ, ಇಲ್ಲವೇ ಸಂಶೋಧಕ ಚಿದಾನನದಮೂರ್ತಿಯವರ ವಿರುದ್ಧ. ಒಟ್ಟಿನಲ್ಲಿ ಹಿಂದೂಸಮಾಜದ ವಿರುದ್ಧ.
ಯಾವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಶ್ರೋತೃಗಳು ಯಾರು ಎಂಬ ಅರಿವೂ ಇಲ್ಲದೆ ಎಲ್ಲಿ ಹೋದರೂ ತಮ್ಮ ಅಸೂಯೆಯನ್ನು ಹೊರಹಾಕುವ ಈ ವಿಚಾರವಾದಿಗಳಿಗೇ ವಿಚಾರಕ್ಕೆ ಬರ ಬಂದಿದೆ ಎಂದರೆ ಯಾರಿಗೆ ತಾನೇ ಪಾಪ ಎನಿಸುವುದಿಲ್ಲ? ಇದನ್ನೇ ಹೊಟ್ಟೆಪಾಡನ್ನಾಗಿ ಮಾಡಿಕೊಂಡಂತಿರುವ ಇವರ ಮನಸ್ಸಿಗೆ ಕವಿದಿರುವ ದ್ವೇಷದ, ಅಸೂಯೆಯ ಕಾರ್ಮೋಡ ಆದಷ್ಟು ಬೇಗ ಸರಿದು ಪ್ರಾಮಾಣಿಕರಾಗಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ.