ಕರವೇ ಗೌಡ, ಪ್ರಸನ್ನರ ಆಸ್ತಿ ವಿವರ ಬಹಿರಂಗವಾಗಲಿ
ಕನ್ನಡಕ್ಕಾಗಿ ಸದಾ ಹೋರಾಟಕ್ಕೆ ಸಿದ್ಧವಾಗಿರುವ ಟಿಎ ನಾರಾಯಣಗೌಡರನ್ನು ವೇದಿಕೆಯಿಂದ ಉಚ್ಚಾಟನೆ ಮಾಡಿದ ಮೇಲೆ ಕರವೇಯ ಹುಳುಕುಗಳು ಒಂದೊಂದಾಗಿ ಹೊರ ಬೀಳುತ್ತಿದೆ.
ಒಂದಾನೊಂದು ಕಾಲದಲ್ಲಿ ರಸಮಂಜರಿ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಬದಲಿಗೆ ಬೇರೆ ಭಾಷೆ ಹಾಡಿದರು ಎಂಬ ಕಾರಣಕ್ಕೆ ಸಿಟ್ಟಾಗಿ, ರೊಚ್ಚಿಗೊದ್ದಿದ್ದ ತರುಣ ಈಗ ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಸ್ಥಾನ ಮಾನದಲ್ಲಿ ಮೆರೆಯುತ್ತಿದ್ದಾನೆ.
ಎಲ್ಲರೂ ನೋಡು ನೋಡುತ್ತಿದ್ದಂತೆ ನಾರಾಯಣ ಗೌಡರು ಬೆಳೆದ ಪರಿ ಹಲವರಿಗೆ ಹೊಟ್ಟೆಕಿಚ್ಚು ತರಿಸಿದ್ದು ಸಹಜ. ಇದರ ಜೊತೆಗೆ ಕನ್ನಡ ಸಂಘಟನೆಯಲ್ಲಿ ಜಾತಿ ವಿಷಬೀಜ ಕೂಡಾ ಮೊಳಕೆಯೊಡೆದು ಈಗ ಹೆಮ್ಮರವಾಗಿದೆ.
ಕನ್ನಡ ಸಂಘಟನೆಗಳು ರೋಲ್ ಕಾಲ್ ಮಾಡುವ ಮಟ್ಟಕ್ಕೆ ಇಳಿದಿದೆ ಎಂಬುದು ಹಳೆ ಮಾತಾದರೂ, ಇಂದು ದೊಡ್ಡ ದೊಡ್ಡ ಡೀಲ್ ಮಾಡಲು ಕರವೇ ಬಳಕೆ ಯಾಗುತ್ತಿದೆ ಎಂಬ ಸುದ್ದಿಯಿದೆ.
ಜಯದೇವ ಪ್ರಸನ್ನ ಹಾಗೂ ನಾರಾಯಣಗೌಡರು ಪರಸ್ಪರ ಉಚ್ಚಾಟನೆ ಮಾಡಿಕೊಂಡು ತಮ್ಮ ಸಚ್ಚಾರಿತ್ರ್ಯದ ಪ್ರಮಾಣಪತ್ರ ನೀಡುವುದರ ಬದಲಿಗೆ ಮುಖ್ಯವಾಗಿ ನಾರಾಯಣ ಗೌಡರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗ(ಅದರ ಸತ್ಯಾಸತ್ಯತೆ ಮಾತು ಆಮೇಲೆ)ಪಡಿಸಲಿ.
ಜಾಣಗೆರೆ ವೆಂಕಟರಾಮಯ್ಯ, ಪ್ರವೀಣ್ ಶೆಟ್ಟಿ ನಂತರ ಜಯದೇವ ಪ್ರಸನ್ನ ಹೊರಬೀಳುತ್ತಿದ್ದಾರೆ. ಕನ್ನಡ ಸಂಘಟನೆ ಎಂದರೆ ಗೂಂಡಾಗಿರಿ, ರೋಲ್ ಕಾಲ್ ಸಂಘ ಎಂಬ ಅಪಖ್ಯಾತಿ ನಿಜವಾಗುವ ಮುನ್ನ ಎಚ್ಚೆತ್ತುಕೊಂಡರೆ ಒಳಿತು. ಇಲ್ಲದಿದ್ದರೆ ನಾಳೆ ನಿಮ್ಮನ್ನು ಯಾರೂ ನಂಬುವುದಿಲ್ಲ. ಎಚ್ಚರ!