ಕರ್ನಾಟಕ ಒಡೆದು ಮೂರು ಭಾಗ ಮಾಡಿದ್ರೆ ಉದ್ಧಾರ ಸಾಧ್ಯನಾ?
ಅಷ್ಟೇ ಅಲ್ಲ, ದೇಶದ ಹಲವೆಡೆ, ಬೇರೆ ಬೇರೆ ದೊಡ್ಡ ರಾಜ್ಯದ ನಾಯಕರುಗಳು, ಚಿಕ್ಕ ರಾಜ್ಯಗಳು ಅಭಿವೃದ್ಧಿಗೆ sure shot ಹಾದಿ, ಜನರ ಅನುಕೂಲ(?)ಕ್ಕಾಗಿ ಇನ್ನಷ್ಟು ಚಿಕ್ಕ ರಾಜ್ಯಗಳಾಗಬೇಕು ಅಂತ ಹೇಳಿಕೆ ಕೊಡ್ತಾ ಇದ್ದಿದ್ದನ್ನು ಕಂಡೆ.
ಯು.ಪಿ/ಬಿಹಾರ್ ದಂತಹ ನೈಸರ್ಗಿಕ ಸಂಪನ್ಮೂಲದಿಂದ ತುಂಬಿರುವ ರಾಜ್ಯಗಳನ್ನು ಅಭಿವೃದ್ಧಿಯಲ್ಲಿ ಶಿಲಾಯುಗಕ್ಕೆ ತಳ್ಳಿದ, ಕೊಲೆ, ಸುಲಿಗೆ, ಭ್ರಷ್ಟಾಚಾರದಲ್ಲಿ ಮಂಚೂಣಿಗೆ ತಂದು ನಿಲ್ಲಿಸಿದ ಕೆಲವು ನಾಯಕರು ಚಿಕ್ಕ ರಾಜ್ಯಗಳ ಬಗ್ಗೆ, ಅದರಿಂದ ಆಗೋ ಲಾಭ(?)ದ ಬಗ್ಗೆ, ಒಟ್ಟಾರೆ, Small is beautiful ಅಂತ ಮಾತಾಡುವುದನ್ನು ನೋಡಿದಾಗ ನಗು ಬರ್ತಾ ಇತ್ತು.
ಹೋಗಲಿ, ಈಗ ಕರ್ನಾಟಕಕ್ಕೆ ಹಿಂತಿರುಗೋಣ. ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದರೆ ನಿಜಕ್ಕೂ ಎಲ್ಲ ಭಾಗಗಳು ಅಭಿವೃದ್ಧಿ ಹೊಂದುತ್ತಾ? ಎಂಬ ಪ್ರಶ್ನೆ ಇಟ್ಟುಕೊಂಡು ನೋಡಿದ್ರೆ, ಖಂಡಿತವಾಗಿಯೂ ಆಗಲ್ಲ ಅನ್ನೋದೇ ನನ್ನ ಅಭಿಪ್ರಾಯ. ಹೇಗೆ ಅಂತೀರಾ?
ಕಲ್ಯಾಣ ಕರ್ನಾಟಕ ಹೇಗಿದೆ?:ಹತ್ತತ್ತು ಬಾರಿ ಆಯ್ಕೆಯಾಗಿ ಬಂದರೂ ಹೈದ್ರಾಬಾದ್ ಕರ್ನಾಟಕಕ್ಕೆ ನಯಾ ಪೈಸೆ ಕೆಲಸ ಮಾಡದ, ಆ ಭಾಗದ ಜನರ ಕುಂದು ಕೊರತೆಗೆ ಸ್ಪಂದಿಸದ ಅಲ್ಲಿನ ಜನ ನಾಯಕರ ಕೈಗೆ ಹೈದ್ರಾಬಾದ್ ಕರ್ನಾಟಕವೆಂಬ ಹೊಸ ರಾಜ್ಯ ಮಾಡಿ ಕೊಟ್ಟರೆ ಏನಾದೀತು? ನಮ್ಮ ಧಾರವಾಡದ ಕಡೆ ಹೇಳುವಂತೆ "ಊದುದ್ ಕೊಟ್ಟು, ಬಾರ್ಸುದ್ ತಗೊಂಡಂತೆ" ಆಗುತ್ತೆ ಅಷ್ಟೇ.
ಅಸ್ಸಾಂ, ಮಣಿಪುರ, ಮೀಜೊರಾಮ್, ನಾಗಾಲ್ಯಾಂಡ್ ನಂತಹ ಚಿಕ್ಕ ಚಿಕ್ಕ ರಾಜ್ಯಗಳಿಗೆ ದೆಹಲಿಯಲ್ಲಿ ಯಾವ ಅಸ್ತಿತ್ವವೂ ಇಲ್ಲ. ದೆಹಲಿಯಲ್ಲಿ ಏನಿದ್ರೂ ದೊಡ್ಡ ರಾಜ್ಯಗಳ ಮಾತೇ ನಡೆಯೋದು. ನಿಮ್ಮ ಬಳಿ 1,2,5 ಇಲ್ಲ 10 ಎಮ್.ಪಿಗಳಿದ್ದರೆ, ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ನೀವು ನಗಣ್ಯ. ಅಂತಾದ್ರಲ್ಲಿ, ಕೊಡಗಿನ ಒಬ್ಬ ಎಮ್.ಪಿ, ಹೈದ್ರಾಬಾದ್ ಕರ್ನಾಟಕದ 5 ಎಮ್.ಪಿಗಳ ಕೂಗು ದೆಹಲಿಯಲ್ಲಿರುವ ದೊರೆಯ ಕಿವಿಗೆ ಎಂದಿಗಾದರೂ ಬಿದ್ದಿತಾ?
28 ಲೋಕಸಭೆ ಸದಸ್ಯರನ್ನಿಟ್ಟುಕೊಂಡೇ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ, ಯೋಜನೆಗಳನ್ನು ತಂದುಕೊಳ್ಳಲು ನಾವು ಒದ್ದಾಡುತ್ತಿರುವಾಗ, ಇನ್ನೂ ಈ ಚುಲ್ಟು ರಾಜ್ಯಗಳ ಕಥೆ ಏನಾದೀತು ಅನ್ನುವುದನ್ನು ಊಹಿಸಲು ಅಸಾಧ್ಯವೇ?
ಕಾವೇರಿ ನೀರಿಗಾಗಿ, ಕೊಡಗು-ಕರ್ನಾಟಕ, ಕೃಷ್ಣಾ ನದಿ ನೀರಿಗಾಗಿ ಹೈ.ಕ - ಕರ್ನಾಟಕದ ನಡುವೆ ವಿವಾದಗಳು,ಕಿತ್ತಾಟಗಳು, ಕೋರ್ಟ್ ಮೆಟ್ಟಿಲು ಏರೋ ಪ್ರಸಂಗಗಳು ಬರಲ್ವಾ? ಈಗಲೇ ಇರೋ ವಿವಾದಗಳು ಸಾಕಾಗಿಲ್ವಾ?
ಒಂದು ಭಾಷೆ ಮಾತನಾಡುವ ಜನರ ನಡುವೆ ಒಗ್ಗಟ್ಟಿನ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಮುಂದೆ, ಇವತ್ತಿಗೂ ನಮ್ಮ ಭಾಷೆಗಳು ಎರಡನೆ ದರ್ಜೆಯ ಪ್ರಜೆಗಳಂತೆ ನಲುಗುತ್ತಿವೆ.
ಅದು ಅಲ್ಲದೇ, ಕಲಿಕೆಯ ಎಲ್ಲ ಹಂತದಲ್ಲೂ ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯೊಂದೇ ಜಾಗತಿಕ ಮಟ್ಟದಲ್ಲಿ ಭಾರತವನ್ನು ಸ್ಪರ್ಧೆಗೆ ಸಜ್ಜುಗೊಳಿಸಲು ಸಾಧ್ಯವಾಗಿಸೋದು. ಕನ್ನಡಿಗರ ಒಗ್ಗಟ್ಟು, ಕನ್ನಡಿಗರ ಒಂದು ರಾಜ್ಯವಿಲ್ಲದೇ, ಭಾಷೆಯ ಮೇಲೆ, ಅದರಿಂದ ಉದ್ಧಾರ ಆಗೋ ಬಗ್ಗೆ ಗಮನ ಕೇಂದ್ರಿಕರಿಸುವುದು ಸಾಧ್ಯವೇ?
ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರ ಅಷ್ಟೇ ಅಲ್ಲ, ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಬಲು ಮುಖ್ಯ. ಇಲ್ಲಿ ನಾನೇನು, ಅಮೇರಿಕದಂತಹ ವಲಸಿಗರಿಂದ ಕಟ್ಟಿದ, ಚೌಕಾಕಾರದಲ್ಲಿ ಕತ್ತರಿಸಿ, ಇಂಗ್ಲಿಷ್ ಹೇರಿ ಕಟ್ಟಿದ ದೇಶದ ಬಗ್ಗೆ ಮಾತನಾಡುತ್ತಿಲ್ಲ.
ನಾನು ಹೇಳುತ್ತಿರುವುದು, ಅನಾದಿ ಕಾಲದಿಂದಲೂ ಇಲ್ಲೇ ನೆಲೆಸಿ, ಇಲ್ಲಿನ ನುಡಿಯಾಡುತ್ತಿರುವ ಕನ್ನಡಿಗರ ಬಗ್ಗೆ, ಅವರ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಿದ್ದೇನೆ. ಒಡೆದು ಚೂರು ಮಾಡಿದ ಕರ್ನಾಟಕದಲ್ಲಿ ಈ ಅಭಿವೃದ್ಧಿ ಎಂದಿಗೂ ಸಾದ್ಯವಿಲ್ಲ.
ಜಗತ್ತಿನ ಒಂದು ಭಾಷೆಯಾಡುತ್ತಿದ್ದ, ಆದರೆ ಕಿತ್ತಾಡಿ ಬೇರೆಯಾಗಿದ್ದ ಜರ್ಮನ್ನರು ಬರ್ಲಿನ್ ಗೋಡೆಯನ್ನು ಒಡೆದು ಮತ್ತೆ ಒಂದಾಗಿ ಮುಂದೆ ಸಾಗುತ್ತಿರುವುದನ್ನು ನಾವು ಒಂದೆಡೆ ನೋಡುತ್ತಿದ್ದರೆ, ಇಲ್ಲಿ, ಕೆಲವು ಭ್ರಷ್ಟ ರಾಜಕಾರಣಿಗಳ ಸಿ.ಎಮ್ ಆಗುವ ಆಸೆಗೆ, ಅವರ ಉಪವಾಸಕ್ಕೆ ಬೆದರಿ ಒಂದು ಭಾಷೆಯಾಡುವ ಜನರನ್ನು ಒಡೆಯಲು ಹೊರಡುವವರ ಕಣ್ಣಿಗೆ, ಭಾಷೆ ಅನ್ನುವುದು ಏಳಿಗೆಯ ನಿಜವಾದ ಸಾಧನ ಅನ್ನುವುದನ್ನು ಗುರುತಿಸಲು ಆಗದ ಭೌದ್ದಿಕ ದಾರಿದ್ರ್ಯ ತೋರಿಸುತ್ತೆ.
ಕೊನೆಗೆ, The quality of life of Kannadigas who are having to contend with underdevelopment in Karnataka – whether north or south – can improve only at the dawn of appreciation for the pressing need for the unity of Kannadigas in every walk of life including politics. Any thought process which divides them makes them that much weaker.