’ಸತ್ಯ’ ಸಾಯಿಬಾಬಾಗೆ ಆ ಧೈರ್ಯ ಇದ್ಯಾ?
ಮುಗ್ಧ ಜನರ ಆತಂಕಕಾರಿ ರೋಗಗಳನ್ನು ಉಲ್ಭಣಿಸಿ, ಮಾನಸಿಕ ಅಸ್ಥಿರತೆಗೆ ಕೈಯಿಂದ ಮುಟ್ಟಿ ಗುಣಪಡಿಸಿದ ಜೀವಮಾನವನಿಗೆ, ತನ್ನೊಳಗಿನ ಅಂತಃಕರಣದ ರೋಗ ಅರಿವಾಗದೇ ಹೋಯಿತೇ ? ತನ್ನ ಪಾದದ ಧೂಳಿನಿಂದ ಪುಟ್ಟಪರ್ತಿಯ ಮಣ್ಣು ಪಾವನಗೊಳಿಸಿದ ಈ ದೇವಮಾನವನಿಗೆ ಗಾಲಿ ಕುರ್ಚಿಯ ಸಾಂಗತ್ಯ ಬೇಕಾಯಿತೇ ? ಪ್ರಕೃತಿಯ ಪ್ರಾಣಾವಾಯುವಿನ ಕಾಣದ ಶಕ್ತಿಯನ್ನು ಅರಿಯದ ಈ ದೇವಮಾನವನಿಗೆ ಕೃತಕ ವಾಯು (ಆಕ್ಸಿಜನ್ ಮಾಸ್ಕ್ ) ಬೇಕಾಯಿತೇ ? ಇದು ಯಾವ ಲೀಲೆ ? ಯಾವ ಪವಾಡ ?
ಕೋಟ್ಯಂತರ ಮುಗ್ಧ ಭಕ್ತ ಜನರ ಮೌಢ್ಯತೆಯನ್ನು ಬಲಿಪಡಿಸಿಕೊಂಡು ಮೂರು ಬಿಲಿಯನ್ ಅಮೆರಿಕನ್ ಡಾಲರ್ನಷ್ಟು ಆಸ್ತಿ-ಪಾಸ್ತಿ ಸಂಪಾದಿಸಿಕೊಂಡ, ಈ ಆಧುನಿಕ ಯುಗದ ದೇವಮಾನವನಿಗೆ ಇದ್ಯಾವ ಪರಿ ?. ಒಂದು ಪಕ್ಷ ಸಾಯಿಬಾಬಾರಿಗೆ ಈಗಲಾದರೂ ಜ್ಞಾನೋದಯ ಉಂಟಾಗಿ, "ನಾನು ದೇವಮಾನವನಲ್ಲ, ಅತೀಂದ್ರೀಯ ಶಕ್ತಿಗಳಿಲ್ಲ. ಎಲ್ಲರಂತೆ ನಾನು ಸಾಮಾನ್ಯ ಮನುಷ್ಯ ನನಗೂ ಕಾಯಿಲೆ ಕಸಾಲೆಗಳು ಬರುತ್ತವೆ ಇದುವರೆವಿಗೂ ನಾನು ತೋರಿದ ಪವಾಡವೆಲ್ಲ ಜನರನ್ನು ಸೆಳೆಯಲು ಮಾತ್ರ" ಎಂಬ ಸತ್ಯವನ್ನು ಸಾಯುವ ಮುನ್ನವಾದರೂ ಒಪ್ಪಿಕೊಳ್ಳಲಿ.
ಸಾಯಿಬಾಬಾ ಒಬ್ಬ ವ್ಯಕ್ತಿಯಾಗಿ ಮಾಡಿರುವ ಸಾಧನೆ ಅನುಕರಣೀಯ ಹಾಗೂ ಆದರಣೀಯ. ಬರದ ನಾಡಿಗೆ ನೀರುಣಿಸಿದ್ದು, ಅಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ದಾರಿ ತೋರಿದ್ದು, ಬಡಬಗ್ಗರಿಗೆ ಉಚಿತ ಆಸ್ಪತ್ರೆ, ಎಲ್ಲ ವರ್ಗ, ಎಲ್ಲ ಸ್ತರದ, ಎಲ್ಲಾ ಜಾತಿ ಮತ ಪಂಥಗಳಿಗೂ ಒಂದೆ ಬಗೆಯ ಆತಿಥ್ಯ ನೀಡಲಾಗುತ್ತದೆ, ಈ ರೀತಿ ವ್ಯವಸ್ಥೆ ರೂಪಿಸಿರುವುದು ಸಾಮಾನ್ಯ ಸಾಧನೆಯೇನಲ್ಲ. ಇಂದಿನ ರಾಜಕೀಯ ವ್ಯವಸ್ಥೆ ಕಟ್ಟಲಾಗದ ಬೃಹತ್ ಸೌಕರ್ಯಗಳನ್ನು ಸಾಯಿಬಾಬಾ ಅವರು ನಿರ್ಮಿಸಿದ್ದಾರೆ. ಇದಕ್ಕೆ ಅವರಿಗೆ ವಂದನೆಗಳು ಆದರೆ, ಅವರನ್ನು ದೇವಮಾನವನಂತೆ ಬಿಂಬಿಸಿ ಕಾಣುವುದು ಮೌಢ್ಯತೆಯ ಪರಮಾವಧಿ.