ಯುಪಿಸಿಎಲ್ ವಿವಾದ: ಪೇಜಾವರ ಶ್ರೀಗಳ ನಿಂದಿಸಬೇಡಿ
ಸರ್ವಪಕ್ಷಗಳ, ಸರ್ವಸಂಘಟನೆಗಳ, ಸರ್ವಧಾರ್ಮಿಕ ಮುಖ್ಯಸ್ಥರನ್ನೊಳಗೊಂಡ ಯುಪಿಸಿಎಲ್ ಹಠಾವೋ ಆಂದೋಲನ ಸಮಿತಿಗೆ ಈ ದೃಷ್ಟಿಯಿಂದಲೇ ನಾವು ಬೆಂಬಲಿಸುತ್ತಿದ್ದೇವೆ ಮತ್ತು ಅದರಲ್ಲಿ ಸಹಭಾಗಿಗಳಾಗಿದ್ದೇವೆ. ಪೇಜಾವರ ಶ್ರೀಗಳು ಎಂಎಸ್ಇಝಡ್ ಮತ್ತು ಉಷ್ಣ ವಿದುತ್ ಸ್ಥಾವರ ವಿರುದ್ಧ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ.
ಅವರ ಈ ಕಾಳಜಿಯನ್ನು ನಾವು ಅರ್ಥಮಾಡಿಕೊಂಡು ಗೌರವಿಸಬೇಕು. ಕಾರ್ಯಸಾಧನೆಯಲ್ಲಿ ಅವರ ದಾರಿ ನಮಗೆ ಹಿತವಾಗುವುದಿಲ್ಲ ಮತ್ತು ಒಪ್ಪಿಗೆ ಇಲ್ಲ ಎಂದಾದಲ್ಲಿ ಅದನ್ನು ವಿನಯಪೂರ್ವಕವಾಗಿ ಅವರಿಗೆ ತಿಳಿಸಬಹುದು. ಇಂತಹ ಸಂದರ್ಭ ನಮಗೆ ಈ ಹಿಂದೆ ಬಂದಿತ್ತು. ಚಳವಳಿಗಳ ನೇತೃತ್ವವನ್ನು ಸ್ವಾಮೀಜಿಯವರಿಗೆ ನಾವು ಒಪ್ಪಿಸಿಲ್ಲ. ನಮ್ಮ ದಾರಿಯನ್ನು ಅವರ ಮೇಲೆ ನಾವು ಹೇರುವುದು ಸರಿಯಲ್ಲ.
ಕರ್ನಾಟಕ ರಾಜ್ಯ ರೈತ ಸಂಘಕ್ಕೆ ರೈತಪರ ಹೋರಾಟದ ಖ್ಯಾತಿ ಇದೆ. ಈ ಜಿಲ್ಲೆಯಲ್ಲಿ ಅದನ್ನು ಉಳಿಸಿ ಬೆಳೆಸಬೇಕೆಂದೂ ಆದರೆ ಹಿಂಸಾತ್ಮಕ ದಾರಿ ಬೇಡವೆಂದೂ ನಾವು ವಿನಂತಿಸುತ್ತೇವೆ. ಸುಧಾರಣಾ ಸಾಮರ್ಥ್ಯ ಅಧ್ಯಯನ ಪೂರ್ಣಗೊಳ್ಳುವ ತನಕ ಈ ವಿದ್ಯುತ್ ಸ್ಥಾವರ ಬಂದ್ ಮಾಡಬೇಕೆಂದು ನಾವು ಒತ್ತಾಸುತ್ತಾ ಬಂದಿದ್ದೇವೆ ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡುವುದಕ್ಕಿಂತ ಜಿಲ್ಲೆಯ ನೆಲ, ಜಲ, ಕಾಡು, ಕಡಲು ಹಾಗೂ ಕೃಷಿಕರ, ಮೀನುಗಾರರ ಹಿತರಕ್ಷಣೆಗೆ ಒಂದಾಗಬೇಕೆಂದೂ ಈ ಪರಿಸರ ಸೂಕ್ಷ ಪ್ರದೇ ಶವನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂದೂ ಆಗ್ರಹಿಸುತ್ತೇವೆ.