ರಾಜ್ಯಸಭೆಗೆ ಕನ್ನಡಿಗರ ಬದಲು ಕನಸಿನ ಕನ್ಯೆ ಏಕೆ?
ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ನೂರಾರು ಶಾಸಕರನ್ನೂ, ಹತ್ತಾರು ಸಂಸದರನ್ನೂ, ಲಕ್ಷಾಂತರ ಕಾರ್ಯಕರ್ತರನ್ನೂ ಹೊಂದಿದ್ದೂ ... ಪಾಪಾ, ರಾಜ್ಯಸಭೆಗೆ ಕಳಿಸೋಕೆ ಒಬ್ಬ ಯೋಗ್ಯ ಅಭ್ಯರ್ಥೀನಾ ಹೊಂದಿಲ್ಲಾ ಅಂತಾ ಇವತ್ತಿನ ಸುದ್ದಿ ನೋಡುದ್ರೆ ಗೊತ್ತಾಗುತ್ತೆ.
ರಾಜ್ಯಸಭೆಗೆ ಹೊರಗಿನವರನ್ನು ಆರಿಸೋ ಕೆಟ್ಟಚಾಳಿ
ಯಾಕ್ರೀ ಹೀಗ್ಮಾಡ್ತಾ ಇದೀರಾ ಅಂತಾ ಯಾರಾದ್ರೂ ಬಿಜೆಪಿಯೋರುನ್ನಾ ಕೇಳುದ್ರೆ.... ಕಾಂಗ್ರೆಸ್ ಅವ್ರು ಮಾಡಿಲ್ವಾ? ದಳದೋರು ಮಾಡಿಲ್ವಾ? ಅನ್ನೋದ್ರಲ್ಲಿ ಅನುಮಾನಾನೇ ಇಲ್ಲಾ ಬಿಡಿ. ಈ ವ್ಯಾಧಿ ನಮ್ಮ ನಾಡಲ್ಲಿರೋ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇರೋದೆ. ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳಿಸೋವಾಗ ನಮ್ಮ ರಾಜಕೀಯ ಪಕ್ಷಗಳು ಇಲ್ಲಿ ಚುನಾವಣೆ ಎದುರಿಸಿ ಗೆಲ್ಲೋಕೆ ಆಗದೇ ಇರೋ ಹೊರ ರಾಜ್ಯದವರನ್ನೇ ಕಳಿಸೋ ಪರಿಪಾಠಾನ ಇಟ್ಕೊಂಡಿದೆ. ಕರ್ನಾಟಕದ ಹಿತ ಕಾಪಾಡೋಕ್ಕೆ ಅಂತಾನೆ ಸಂಸದರನ್ನು ರಾಜ್ಯಸಭೆಗೆ ಆರಿಸಿಕಳಿಸೋದಲ್ವಾ? ಅದುನ್ನೇ ಮರೆತು ಕನ್ನಡ ಕನ್ನಡಿಗ ಕರ್ನಾಟಕ ಅಂದ್ರೇನು ಅಂತಾನೇ ಅರಿಯದೋರುನ್ನಾ, ಅರಿತರೂ ನಮಗಾಗಿ ಮಿಡಿಯದೋರುನ್ನ ಕಣಕ್ಕಿಳಿಸಿ, ಗೆಲ್ಲಿಸೋ ಈ ಘನಂದಾರಿ ಕೆಲಸಾನಾ ಕಾಂಗ್ರೆಸ್ಸು, ಜನತಾದಳ ಮತ್ತು ಭಾರತೀಯ ಜನತಾಪಕ್ಷಗಳೆಲ್ಲಾ ಮಾಡ್ತಾನೆ ಬಂದಿವೆ.
ಕರ್ನಾಟಕದಿಂದ ಸರಿಯಾದ ಪ್ರಾತಿನಿಧ್ಯ ಹೋಗಬೇಕು!
ಕರ್ನಾಟಕದಿಂದ ರಾಜ್ಯಸಭೆಗೆ ನಿಜವಾಗಿ ಕರ್ನಾಟಕವನ್ನು ಪ್ರತಿನಿಧಿಸಬಲ್ಲವರನ್ನು ಕಳಿಸೋಕೆ ನಮ್ಮ ರಾಜಕೀಯ ಪಕ್ಷಗಳು ಮುಂದಾಗಬೇಕು. ಅಲ್ಲೀ ತನಕ ನಮ್ಮ ರಾಜಕೀಯ ಪಕ್ಷಗಳು ರಾಷ್ಟ್ರೀಯ ನಾಯಕರನ್ನು ರಾಜ್ಯಸಭೆಗೆ ಕಳಿಸೋದು, ಆ ಮಹಾನ್ ನಾಯಕರುಗಳು ಎರಡೂ ಮೂರೂ ಸಾರಿ ಇಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದಮೇಲೂ ಕನ್ನಡದ ಅ, ಆ, ಇ, ಈ ಕಲೀದೆ ಇರೋದು, ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲಕ್ಕೂ ಕಮಕ್ ಕಿಮಕ್ ಅನ್ನದೇ ಇರೋದು, ಸಂಸತ್ತಿನಲ್ಲಿ ಚಿಲ್ಲರೆ ರಾಜ್ಯಗಳ ವಿಷಯ ಮಾತಾಡಕ್ಕೆ ನಾವು ಬಂದಿಲ್ಲಾ, ನಮ್ದೇನಿದ್ರೂ ನ್ಯಾಸನಲ್ಲು, ಇಂಟರ್ ನ್ಯಾಸನಲ್ಲು ಲೆವೆಲ್ಲಿನ ಸಮಸ್ಯೆಗಳ ಬಗ್ಗೆ ದನಿ ಎತ್ತೋ ಕೆಲಸಾ ಅನ್ನೋದೂ... ಇವನ್ನೆಲ್ಲಾ ಕನ್ನಡಿಗರು ನೋಡಿ, ಅನುಭವಿಸಿ, ಆನಂದಿಸೋದೂ... ತಪ್ಪೋ ಹಂಗಿಲ್ಲಾ ಗುರೂ!