ವಾಮಾಚಾರ ಹೆಸರಿನಲ್ಲಿ ಭಯ ಹುಟ್ಟಿಸುವ ಸಿಎಂ
ಸಿಎಂ ಅವರ ವೈಯಕ್ತಿಕ ನಂಬಿಕೆಗಳು, ಭಯ ಆತಂಕಗಳು ಏನಾದರೂ ಇರಲಿ, ಹೀಗೆ ಬಹಿರಂಗವಾಗಿ ಹೇಳಿಕೆ ನೀಡುವುದು ನಿಜಕ್ಕೂ ಸರಿಯಲ್ಲ.ಇಡೀ ರಾಜ್ಯದ ವೈಚಾರಿಕ ಜಾಗೃತಿಗೆ ಪ್ರಯತ್ನಿಸುವ ಕಾಳಜಿಯುಳ್ಳವರ ಪರವಾಗಿ ನಾನು ಅವರಿಗೆ ಏನೂ ಆಗುವುದಿಲ್ಲ ಎಂದು ಅಭಯ ನೀಡುತ್ತಿದ್ದೇನೆ.
ಮುಖ್ಯಮಂತ್ರಿಗಳು ಸ್ವಲ್ಪ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಲಿ. ಇಲ್ಲಿಯವರೆಗೂ ಜನಸಾಮಾನ್ಯರ ಮನೆಯ ಅಂಗಳದಲ್ಲಿ ಮಾತ್ರ ಇದ್ದ ವಾಮಾಚಾರ ಇದೀಗ ವಿಧಾನಸೌಧದಿಂದ ಆರಂಭಗೊಂಡು ಪಂಚಾಯತಿ, ಶಾಲೆಗಳಿಗೂ ವಿಸ್ತರಿಸಿದೆ. ವಿರೋಧ ಪಕ್ಷದವರಿಂದ ಆಗಲಿ, ಜನಸಾಮಾನ್ಯರಿಂದ ಆಗಲಿ ನಿಮ್ಮ ಜೀವಕ್ಕೆ ಯಾವುದೇ ಅಪಾಯ ತರಲು ಸಾಧ್ಯವಿಲ್ಲ .
ಸಿಎಂಗೆ ಭಯ ಏಕೆ?: ನೀವೇ ಹೇಳಿರುವಂತೆ ವಾಮಾಚಾರದಿಂದ ಏನೂ ಸಾಧ್ಯವಿಲ್ಲ. ಆದರೂ ಈ ಭಯ ಏಕೆ ? ರಾಜ್ಯದ ವಿಜ್ಞಾನಿಗಳು, ವೈಚಾರಿಕ ಪ್ರಜ್ಞೆಯುಳ್ಳವರನ್ನು ವಿಧಾನಸೌಧಕ್ಕೆ ಕರೆಸಿ ಮೌಢ್ಯದ ವಿರುದ್ಧ ಸಮರ ಸಾರಲಿ. ಇದು ಮುಖ್ಯಮಂತ್ರಿಗಳಿಗೂ ಘನತೆ ಹೆಚ್ಚಿಸುತ್ತದೆ. ಅದಕ್ಕೆ ಬದಲಾಗಿ ತಾವೂ ಹೆದರಿ ಎಲ್ಲಿ ಹೋದರಲ್ಲೆಲ್ಲಾ ವಾಮಾವಾರ, ಬೆದರಿಕೆ ಕರೆ ಬಂದಿದೆ ಎಂದು ಜನತೆಯಲ್ಲೂ ಭಯ ಹುಟ್ಟಿಸುವ ಪ್ರಯತ್ನ ಬೇಡ.
ವಾಮಾಚಾರದಿಂದ ವ್ಯಕ್ತಿಯೊಬ್ಬನನ್ನು ಕೊಲ್ಲಲು ಸಾಧ್ಯವಾದರೆ ವಿಐಪಿಗಳಿಗೆ ನೀಡಲಾಗುವ ಝಡ್ ಸ್ಪಷ್ಟೀಕರಣ ಭದ್ರತೆ ಪ್ರಯೋಜನವಿಲ್ಲ ಅಲ್ಲವೇ ? ಇಷ್ಟು ಕಾಮನ್ಸೆನ್ಸ್ನಿಂದ ಯೋಚಿಸಿದರೆ ಸಾಕು.
ಅಷ್ಟಕ್ಕೂ ಅದು ಪವರ್ಫುಲ್ ವಾಮಾಚಾರವಾಗಿದ್ದರೆ ಅದನ್ನು ನಮ್ಮ ಕಡೆಗೆ ತಿರುಗಿಸಿಕೊಳ್ಳುತ್ತೇವೆ. ಏಕೆಂದರೆ ಇಂತಹ ಎಷ್ಟೋ ವಾಮಾಚಾರ ಪ್ರಕರಣಗಳ ವೈಜ್ಞಾನಿಕ ಹಿನ್ನೆಲೆಯನ್ನು ರಾಜ್ಯಾದ್ಯಂತ ವಿವರಿಸುತ್ತಾ ಬಂದಿದ್ದೇವೆ. ಎಷ್ಟೋ ವಾಮಾಚಾರ ಪ್ರಕರಣಗಳ ವೈಜ್ಞಾನಿಕ ಹಿನ್ನೆಲೆಯನ್ನು ರಾಜ್ಯದ್ಯಂತ ವಿವರಿಸುತ್ತಾ ಬಂದಿದ್ದೇವೆ. ಎಷ್ಟೋ ಮಾಟ ಮಂತಗಳ ನಿಂಬೆಹಣ್ಣು ಮತ್ತು ಕುಡಿಕೆಗಳನ್ನು ನೆಲದಿಂದ ಬರಿಗೈಯಲ್ಲಿ ಕಿತ್ತೆಸೆದು, ರುದ್ರಭೂಮಿಯಲ್ಲಿ ರಾತ್ರಿ ಕಳೆದ ಉದಾಹರಣೆಗಳಿವೆ. ಅಷ್ಟಾದರೂ ಯಾವುದೇ ದೆವ್ವ, ಭೂತ, ಪ್ರೇತ ಇತ್ಯಾದಿಗಳು ನನ್ನನ್ನು ಕಾಡಿಲ್ಲ. ವಾಮಾಚಾರದ ಸವಾಲು ಸ್ವೀಕರಿಸಲು ಸಿದ್ಧನಿದ್ದೇನೆ.