ಪಾಲಕರನ್ನು ಸುಲಿಯುತ್ತಿರುವ ಶಿಕ್ಷಣ ಸಂಸ್ಥೆಗಳು
ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಅನ್ನುವುದು ಕೇಂದ್ರ ಸರ್ಕಾರದ ಉದ್ಯೋಗದಲ್ಲಿರುವ, ನಿರಂತರ ವರ್ಗಾವಣೆಗೊಳಪಡುವ ಕೆಲಸದಲ್ಲಿರುವವರ ಮಕ್ಕಳಿಗಾಗಿ ರೂಪಿತಗೊಂಡ ಶಿಕ್ಷಣ ವ್ಯವಸ್ಥೆ, ಆದರೆ ಅದನ್ನು ಹಣ ಮಾಡುವ ಸಾಧನಗಳಾಗಿ ಬದಲಾಯಿಸಿಕೊಂಡು ಪಾಲಕರನ್ನು ಸುಲಿಯುತ್ತಿರುವ ಈ ಸಂಸ್ಥೆಗಳನ್ನು ಹದ್ದುಬಸ್ತಿಗೆ ತರಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಬೇಕು.
ಶಿಕ್ಷಣ ಸಂವಿಧಾನದ ಪ್ರಕಾರ ಕನ್ಕರಂಟ್ ಪಟ್ಟಿಗೆ ಬರುತ್ತೆ. ಅಲ್ಲಿ ಕೇಂದ್ರ, ರಾಜ್ಯ ಎರಡಕ್ಕೂ ಸಮಾನ ಹಕ್ಕಿದೆ. ಆದರೆ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಅನ್ನುವ ಹಾದಿಯ ಮೂಲಕ ಕೇಂದ್ರ ಸರ್ಕಾರ ಶಿಕ್ಷಣವನ್ನು ಪೂರ್ತಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ನ್ಯಾಯವಾಗಿ ಶಿಕ್ಷಣದ ಪೂರ್ತಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಸೇರಬೇಕಾದದ್ದು. ಅದನ್ನು ಅಕ್ರಮ ಮಾರ್ಗ ಬಳಸಿ ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಬಗೆಯುತ್ತಿರುವ ಅಪಚಾರವಾಗಿದೆ.
ಈ ತೀರ್ಪು ಬಂದಿರುವ ಇದೇ ಸಂದರ್ಭದಲ್ಲಿ ಸರ್ಕಾರ ಎಲ್ಲ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಬೇಕು. ಈ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಇಲ್ಲದಿರುವುದರಿಂದ ಅಲ್ಲಿ ಕಲಿಯುವ ಕನ್ನಡದ ಮಕ್ಕಳು, ಕನ್ನಡೇತರರು ಎಂದಿಗೂ ಕನ್ನಡ ಮುಖ್ಯ ವಾಹಿನಿ ಸೇರದಂತೆ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಇದು ನಾಳೆಯ ಕನ್ನಡದ ಭವಿಷ್ಯಕ್ಕೆ ನಿಜಕ್ಕೂ ಮಾರಕ. ಉದಾಹರಣೆಗೆ ಈ ಶಾಲೆಗಳಲ್ಲಿ ಕಲಿಸುವ ಸಮಾಜ ಶಾಸ್ತ್ರದಲ್ಲಿ ಕನ್ನಡ ನಾಡಿನ ಇತಿಹಾಸ, ಸಮಾಜದ ಬಗ್ಗೆ ಯಾವ ಮಾಹಿತಿಯೂ ಇಲ್ಲ.
ಹೀಗಾಗಿ ಕನ್ನಡ ನಾಡಿನ ಅಮೋಘ ಇತಿಹಾಸದ ಜ್ಞಾನದಿಂದ ಮಕ್ಕಳನ್ನು ವಂಚಿತಗೊಳಿಸುತ್ತಿರುವ ಇಂತಹ ಶಾಲೆಗಳ ಪಠ್ಯ ಪುಸ್ತಕವನ್ನು ಬದಲಾಯಿಸಿ ಸರಿಯಾದ ಮಾಹಿತಿ ನೀಡುವಂತಹ ಪಠ್ಯ ರೂಪಿಸುವತ್ತ ಸರ್ಕಾರ ಆದ್ಯ ಗಮನಹರಿಸಬೇಕು. ಆದ್ದರಿಂದ ಈ ಕೂಡಲೇ ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಕೆಲಸ ಸರ್ಕಾರ ಮಾಡಬೇಕು.
ಧನ್ಯವಾದಗಳು...
ಮಹೇಶ
ಎಮ್.
ರುದ್ರಗೌಡರ,
ವಿಜಾಪುರ
[ಶಿಕ್ಷಣ
ವ್ಯವಸ್ಥೆ]