ಡಾ.ಬಿನಾಯಕ್ ಗೆ ನ್ಯಾಯ ಕೋರಿ ಮುಕ್ತ ಪತ್ರ
ರಾಷ್ಟ್ರಪತಿ ಭವನ
ನವದೆಹಲಿ
ವಿಷಯ : ಬಿನಾಯಕ್ ಸೇನ್ ಗೆ ನ್ಯಾಯ ಒದಗಿಸಲು ಭಾರತದ ನ್ಯಾಯಾಂಗ ವಿಫಲವಾಗಿದೆ.
ಪ್ರಸಿದ್ಧ ಸಾರ್ವಜನಿಕ ವೈದ್ಯರೂ, ಮಾನವ ಹಕ್ಕುಗಳ ಹೋರಾಟಗಾರರೂ ಆದ ಡಾ. ಬಿನಾಯಕ್ ಸೇನ್ ಅವರನ್ನು ದೋಷಿ ಎಂದು ತೀರ್ಮಾನಿಸಿ ಶಿಕ್ಷೆಗೆ ಒಳಪಪಡಿಸಿರುವುದು ನಮಗೆಲ್ಲರಿಗೂ ಆಘಾತಕಾರಿಯಾಗಿದೆ. ರಾಯ್ಪುರದ ವಿಚಾರಣಾ ನ್ಯಾಯಾಲಯವು ಸೆನ್ ಅವರನ್ನು ರಾಜದ್ರೋಹ ಮತ್ತು ಪ್ರಭುತ್ವದ ವಿರುದ್ಧ ಸಮರ ಸಾರುವ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಪಡಿಸಿರುವುದು ಆತಂಕಕಾರಿ ಸಂಗತಿಯಾಗಿದೆ.
ಭಾರತದ ಪ್ರಬುದ್ಧ ಮಾನವ ಹಕ್ಕುಗಳ ಹೋರಾಟಗಾರನಿಗೆ ಈ ಶಿಕ್ಷೆ ನೀಡಿರುವುದು ನ್ಯಾಯದ ವಿಡಂಬನೆಯೇ ಆಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಗಿರುವ ಕಾನೂನು, ನ್ಯಾಯ ಮತ್ತು ಹಕ್ಕುಗಳ ಮೂಲ ತತ್ವಗಳನ್ನು ಎತ್ತಿಹಿಡಿದು, ಈ ನ್ಯಾಯಾಲಯದ ತೀರ್ಪಿನ ಮೂಲಕ ಭಾರತದ ನ್ಯಾಯಾಂಗಕ್ಕೆ ಉಂಟಾಗಿರುವ ಧಕ್ಕೆಯನ್ನು ಸರಿಪಡಿಸಲು ಭಾರತದ ಉನ್ನತ ನ್ಯಾಯ ವ್ಯವಸ್ಥೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.
ಛತ್ತಿಸ್ ಘಡದ ಮಾವೋವಾದಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಡಾ. ಸೆನ್ ಅವರ ಮೇಲಿನ ಆರೋಪ ನಿರಾಧಾರವಾಗಿದ್ದು, ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲೂ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸೊರಗಿದೆ. ಸರ್ಕಾರಿ ವಕೀಲರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಕಪೋಲ ಕಲ್ಪಿತ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಸರ್ಕಾರಿ ವಕೀಲರು ಒದಗಿಸಿರುವ ಸಾಕ್ಷ್ಯಾಧಾರಗಳೂ ವಿರೋಧಾಭಾಸಗಳಿಂದ ಕೂಡಿರುವುದು ಸ್ಪಷ್ಟವಾಗಿದೆ.
ಕರಾಳ ಭಯೋತ್ಪಾದಕ ವಿರೋಧಿ ಕಾಯ್ದೆಗಳಡಿ ಡಾ.ಸೆನ್ ಅವರ ವಿರುದ್ಧ ಮಾಡಲಾಗಿರುವ ಆರೋಪಗಳೆಲ್ಲ ಸೃಷ್ಟಿಸಲ್ಪಟಿದ್ದು, ಆದಿವಾಸಿಗಳ ವಿರುದ್ಧ ಛತ್ತಿಸ್ ಘಡ ಸರ್ಕಾರ ನಡೆಸುತ್ತಿರುವ ಆಕ್ರಮಣಗಳನ್ನು ಕಟುವಾಗಿ ಟೀಕಿಸಿದ ಕಾರಣಕ್ಕಾಗಿ ಸೆನ್ ಅವರನ್ನು ಆರೋಪಗಳಿಗೆ ಗುರಿಮಾಡಲಾಗಿದೆ. ಹೃದೋಗಿಯಾದ ಡಾ. ಸೆನ್ ಈಗಾಗಲೇ ಮೇ 2007 ರಿಂದ ಮೇ 2009ರವರೆಗೆ ಎರಡು ವರ್ಷಗಳ ಜೈಲು ವಾಸ ಅನುಭವಿಸಿದ್ದು ಸರ್ವೋಚ್ಚ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಪ್ರಜಾತಂತ್ರಕ್ಕೇ ಮಾರಕ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ರ್ಟವಾಗಿ ಭಾರತ ಸರ್ಕಾರವು ಟೀಕೆಗಳನ್ನು ಮತ್ತು ಅಹಿಂಸಾತ್ಮಕ ಮಾನವ ಹಕ್ಕುಗಳ ಹೋರಾಟವನ್ನು ಸಹಿಸಿಕೊಳ್ಳದಿರುವುದು ನಿಜಕ್ಕೂ ಭಾರತೀಯ ಜನತೆಗೆ ಅಪಮಾನ ಮಾಡಿದಂತಾಗುತ್ತದೆ. ಈ ಅಸಹಿಷ್ಣುತೆಯ ಪ್ರವೃತ್ತಿ ಖಂಡಿಸಬೇಕಾಗುತ್ತದೆ. ನ್ಯಾಯಾಲಯಗಳಲ್ಲಿ ನೀಡಲಾಗುವ ಈ ರೀತಿಯ ತೀರ್ಪುಗಳು ಭಾರತದ ಪ್ರಜಾತಂತ್ರಕ್ಕೇ ಮಾರಕವಾಗಿರುತ್ತದೆ.
ಸೆನ್ ಅವರನ್ನುತಕಣವೇ ಬಿಡುಗಡೆ ಮಾಡುವುದೇ ಅಲ್ಲದೆ ಅವರ ವಿರುದ್ಧ ಹೂಡಲಾಗಿರುವ ಆರೋಪಗಳನ್ನೂ ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಡಾ. ಸೆನ್ ಅವರನ್ನು ಈ ಆರೋಪಕ್ಕೆ ಸಿಲುಕಿಸಿರುವ ಎಲ್ಲರನ್ನೂ ತನಿಖೆಗೆ ಒಳಪಡಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ. ಹಾಗೆಯೇ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿರುವ ಡಾ. ಸೆನ್ ಅವರಿಗೆ ಅವರ ಕುಟುಂಬವನ್ನು ಅನಗತ್ಯ ಮಾನಸಿಕ ಕ್ಷೋಭೆಗೊಳಪಡಿಸಿ ಶೋಷಣೆ ಮಾಡುತ್ತಿರುವುದನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡುವಂತೆ ನಾವು ಆಗ್ರಹಿಸುತ್ತೇವೆ.
ಮಾನವ ಹಕ್ಕುಗಳ ಕಾನೂನು ಜಾಲ(Human Rights Legal Network), ನವದೆಹಲಿ. [ಮಾವೋವಾದಿ]