ಕಾರವಾರವನ್ನು ಗೋವಾಗೆ ಸೇರಿಸಬೇಕಂತೆ!
ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗು ಈಗಿನ ಲೋಕೋಪಯೋಗಿ ಮಂತ್ರಿಗಳಾದ ಅಲೆಮವೋ ಚರ್ಚಿಲ್ ಮೊನ್ನೆಯ ದಿನ ಕಾರವಾರ ಜಿಲ್ಲೆಯನ್ನು ಮತ್ತು ಜೋಯಿಡಾ ತಾಲೂಕನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕು ಅಂತ ಒತಾಯಿಸಿದ್ದಾರೆ. ಕನ್ನಡಿಗರ ಹಾಗು ಕೊಂಕಣಿ ಭಾಷಿಕರ ನಡುವೆ ವೈಷಮ್ಯ ಬೆಳೆಸುವಂತ ಗೋವಾ ಪ್ರಯತ್ನಗಳಿಗೆ ನಾವು ತೀವ್ರವಾಗಿ ಖಂಡಿಸಬೇಕಿದೆ.
ಕೊಂಕಣಿ ಭಾಷೆ ಕರ್ನಾಟಕದ ರಾಜ್ಯದ ಪ್ರಮುಖ ಭಾಷೆಗಳಲ್ಲಿ ಒಂದು ಎನ್ನುವ ಸಂಗತಿ ಬಹುಶ ಚರ್ಚಿಲ್ ಸಾಹೇಬರಿಗೆ ತಿಳಿದಂತಿಲ್ಲ. ಕನ್ನಡಿಗರಿಗೆ ಸಿಗುವ ಎಲ್ಲ ಸವಲತ್ತುಗಳು ಕೊಂಕಣಿ ಭಾಷಿಕರಿಗೂ ಸಿಗುತ್ತಿರುವುದು ಕರ್ನಾಟಕದ ಸಾಮರಸ್ಯ ವೈಶಿಷ್ಯತೆಯನ್ನು ಸಾರುವಂತದ್ದು.
ಇದೆಲ್ಲದಕ್ಕೂ ಮೇಲಾಗಿ ನೂರಾರು ವರ್ಷಗಳಿಂದ ಕೊಂಕಣಿ ಭಾಷಿಕರು ಕರ್ನಾಟಕದ ಮುಖ್ಯವಾಹಿನಿಯಲ್ಲಿ ಬೆರೆತು ಕರ್ನಾಟಕದ ಶಿಕ್ಷಣ, ಕಲೆ, ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡಕ್ಕೆ ಸಿಕ್ಕಿರುವ 7 ಜ್ಞಾನಪೀಠ ಪ್ರಶಸ್ತಿಗಳಲ್ಲಿ ಕೊಂಕಣಿ ಭಾಷೆ ಮನೆಮಾತಾಗಿದ್ದ ಶಿವರಾಮ ಕಾರಂತರು ಹಾಗು ಗಿರೀಶ್ ಕಾರ್ನಾಡರಿಗೆ ಬಂದಿರುವುದು ಗಮನಾರ್ಹ ವಿಷಯ.
ಗಡಿ ಸಮಸ್ಯೆಯ ನಿವಾರಣೆಗೆ ನಿರ್ಮಿಸಿದ "ಮಹಾಜನ್ ವರದಿ"ಯಲ್ಲಿ ಗಡಿ ಜಿಲ್ಲೆಗಳಾದ ಕಾರವಾರ ಹಾಗು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗಗಳು ಎಂದು ಸ್ಪಷ್ಟವಾಗಿದೆ. ಈ ವರದಿಯನ್ನು ಎಲ್ಲ ರಾಜ್ಯಗಳು ಗೌರವಿಸಬೇಕಿದೆ.
ಕರ್ನಾಟಕದಲ್ಲಿನ ರಾಜಕೀಯ ಪಕ್ಷಗಳಾಗಲೀ, ಸ್ವಯಂ ಘೋಷಿತ ಕನ್ನಡ ಸಂಘಟನೆಗಲಾಗಲೀ ಚರ್ಚಿಲ್ ಹೇಳಿಕೆಯ ವಿರುದ್ಧ ದನಿ ಎತ್ತದಿರುವುದು ನಮ್ಮ ರಾಜ್ಯದ ಪರವಾದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸಿದೆ. ಇನ್ನು ಮುಂದಕ್ಕಾದರೂ ಕರ್ನಾಟಕದ ರಾಜಕೀಯ ಪಕ್ಷಗಳು ಕರ್ನಾಟಕದ ಏಕತೆಯ ಪರವಾಗಿ ಮಾತನಾಡಿ ದೇಶದಲ್ಲಿನ ಶಾಂತಿ ಹಾಗು ಸೌಹಾರ್ದತೆಯನ್ನು ಕಾಪಾಡುವಲ್ಲಿ ತೊಡಗಿಕೊಳ್ಳಲಿ ಅನ್ನುವುದು ನನ್ನ ಆಶಯ. [ಗಡಿ ವಿವಾದ]
* ಅಮರನಾಥ ಶಿವಶಂಕರ್, ಬೆಂಗಳೂರು