ಜಿಮ್ 2010 ನಿಂದ ಕೆಲ್ಸ;ಸಿಎಂ ಪೊಳ್ಳು ಆಶ್ವಾಸನೆ?
ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದು 6 ತಿಂಗಳು ಗತಿಸಿವೆ. ದೇಶ ವಿದೇಶಗಳಿಂದ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಹರಿದು ಬರುತ್ತಿರುವುದಾಗಿ ಈ ಹಿಂದೆ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ.
ಇದರ ನಿಜವಾದ ಬಂಡವಾಳ ಏನೆಂಬುದು ಜನರಿಗೆ ತಿಳಿದಿಲ್ಲ. ರಾಜ್ಯಕ್ಕೆ ಹರಿದು ಬರುವ ಬಂಡವಾಳದಿಂದ ಸುಮಾರು 5 ರಿಂದ 6 ಲಕ್ಷ ಯುವಕರಿಗೆ ಉದ್ಯೋಗ ಲಭಿಸುವ ಅವಕಾಶವಿದೆ ಎಂದು ಮುಖ್ಯಮಂತ್ರಿಗಳು ಹೇಳಿಕೊಂಡಿದ್ದರು. ಆದರೆ ಆ ಬಗೆಗೆ ಇದುವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ.
ಮುಖ್ಯಮಂತ್ರಿಯವರು ತಮ್ಮ ಹಗರಣಗಳ ಹುಳುಕುಗಳನ್ನು ಮುಚ್ಚಿಹಾಕುವುದರಲ್ಲೇ ತೊಡಗಿದಂತೆ ಕಾಣುತ್ತದೆ. ಜನರಿಗೆ ಹೇಳುವುದೊಂದು ಮಾಡುವುದೊಂದು ಮತ್ತು ಸರ್ಕಾರ ಹಗರಣಗಳು ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿ ಹೋದರರೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಒಂದು ಕನಸಾಗಬಹುದಷ್ಟೆ.
ಅಂದಾಜು ಮೂರು ದಶಕಗಳ ಮುನ್ನವೇ ನೇಮಕಗೊಂಡಿದ್ದ ಡಾ. ಸರೋಜಿನಿ ಮಹಿಷಿ ವರದಿಯಂತೆ ನಮ್ಮ ರಾಜ್ಯದಲ್ಲಿನ ಎಲ್ಲ ವಲಯಗಳಲ್ಲಿನ ಹುದ್ದೆಗಳ ಶೇ. 80 ಭಾಗ ಕನ್ನಡಿಗರಿಗೆ ಲಭಿಸುವಂಥ ಕಟ್ಟು ನಿಟ್ಟಿನ ವ್ಯವಸ್ಥಾ ಕ್ರಮಗಳು ಇನ್ನೂ ಅನುಷ್ಠಾನಗೊಂಡಿಲ್ಲ.
ಈಗ ಸ್ಥಾಪನೆಗೊಳ್ಳಲಿರುವ ಎಲ್ಲ ಉದ್ದಿಮೆಗಳಲ್ಲೂ ಶೇ.80 ರಷ್ಟು ಕನ್ನಡ ಮಾತೃ ಭಾಷೆಯವರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕೆಂಬ ಪೂರ್ವಭಾವಿ ನಿಬಂಧನೆಯನ್ನು ರಾಜ್ಯ ಸರ್ಕಾರ ಆಯಾ ಉದ್ದಿಮೆದಾರರಿಗೆ ತಪ್ಪದೆ ವಿಧಿಸುವಲ್ಲಿ ವಿಫಲವಾಗಿದೆ.