ಟೈಮ್ಸ್ ಅಫ್ ಇಂಡಿಯಾದಲ್ಲಿ ಮ್ಯೂಸಿಕ್ ಬಾಂಬ್!
ಇವತ್ತು ಬೆಳಿಗ್ಗೆ ನಮ್ಮ ದಿನಪತ್ರಿಕೆ ವಿತರಣೆಯಲ್ಲಿ ಇದೇ ಸುದ್ದಿ. ನೀವು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯನ್ನು ಕೊಳ್ಳುವವರಾಗಿದ್ದಲ್ಲಿ ನಿಮಗೆ ಇವತ್ತು ಅದರ ಸಪ್ಲಿಮೆಂಟರಿಯಲ್ಲಿ ಒಂದು ಕಾರು ಜಾಹೀರಾತಿನ ಜೊತೆಗೆ ಪೇಪರಿಗೆ ಅಂಟಿಸಿದ್ದ ಒಂದು ಸ್ಲಿಮ್ ಮೊಬೈಲ್ ಗಾತ್ರದ ವಸ್ತುವೊಂದು ಸಿಕ್ಕಿರಬೇಕು. ನೀವು ಪೇಪರ್ ಬಿಡಿಸಿದ ತಕ್ಷಣ ಅದೇನೋ ಇಂಗ್ಲಿಷಿನಲ್ಲಿ ಸಣ್ಣಗೆ ಕೀರಲಾರಂಬಿಸುತ್ತದೆ. ಇದು ಹಲವರನ್ನು ದಿಗಿಲು ಬೀಳಿಸಿದ್ದರಲ್ಲಿ ಸಂದೇಹವಿಲ್ಲ. ಈಗಿನ ಅಧುನಿಕ ಕಾಲದಲ್ಲಿ ಒಳ್ಳೆಯ ತಂತ್ರಜ್ಞಾನ ಬೆಳೆದಂತೆ ಕೆಟ್ಟ ಜಾಹೀರಾತುಗಳು ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ.
ನೀವು ರಾತ್ರಿ ಸುಖ ನಿದ್ರೆಯನ್ನು ಮಾಡಿ ಮುಂಜಾನೆ ಖುಶಿಯಿಂದ ಎದ್ದು ಇವತ್ತಿನ ದಿನಕ್ಕೆ ಕಣ್ಣುಬಿಡುತ್ತಿದ್ದಂತೆ ಬಾಗಿಲಲ್ಲಿ ಬಿದ್ದ ಪತ್ರಿಕೆಗಳ ಪುಟಗಳನ್ನು ಬಿಡಿಸುತ್ತೀರಿ, ಕೆಟ್ಟ ಸುದ್ಧಿಗಳ ಜೊತೆಗೆ ಒಂದಷ್ಟು ಒಳ್ಳೆಯ ಸುದ್ಧಿ ಓದುವ ಆಸೆಯಿಂದ. ಇಂಥ ಮನಸ್ಥಿತಿಯಲ್ಲಿ ಇದ್ದಕ್ಕಿದ್ದಂತೆ ಪತ್ರಿಕೆಗೆ ಅಂಟಿಸಿದ ಒಂದು ಪುಟ್ಟ ಲೋಹದ ವಸ್ತುವಿನಿಂದ ಕೀರಲು ದ್ವನಿ ಬಂದರೆ ಹೇಗಾಗಬೇಡ? ಆಗಲೇ ಶುರುವಾಗುತ್ತದೆ ದಿಗಿಲು. ಮನಸ್ಥಿತಿಯೆಲ್ಲಾ ಅಲ್ಲೋಲಕಲ್ಲೋಲವಾಗಿಬಿಡುತ್ತದೆ. ಇದೇನಾದ್ರು ಬಾಂಬ್ ಇರಬಹುದಾ! ಅನ್ನಿಸಿ ಪತ್ರಿಕೆಯನ್ನು ಮುಚ್ಚಿಬಿಡುತ್ತೀರಿ. ಆ ಪತ್ರಿಕೆಯನ್ನು ಬಿಟ್ಟು ಒಳಗೋಡಿ ಮೊಬೈಲ್ ಕೈಗೆತ್ತಿಕೊಂಡು ಪಕ್ಕದ ಮನೆಯವರಿಗೋ, ಹತ್ತಿರದ ಅಥವ ದೂರದ ಗೆಳೆಯರಿಗೋ ಸಂಬಂಧಿಕರಿಗೋ ಫೋನಾಯಿಸಿ ತಾವು ದಿಗಿಲು ಪಟ್ಟ ವಿಚಾರ ತಿಳಿಸಿ ಅವರನ್ನು ಎದುರಿಸಿಬಿಡುತ್ತೀರಿ. ಎದ್ದ ತಕ್ಷಣ ಫೋನಿನಲ್ಲಿ ಇಂಥ ವಿಚಾರವನ್ನು ಕೇಳಿದ ನಿಮ್ಮ ಗೆಳೆಯರು, ಸಂಬಂಧಿಕರು ಹಾಸಿಗೆಯಲ್ಲೇ ಬೆವರಲು ಪ್ರಾರಂಭಿಸುತ್ತಾರೆ... ಬಾಗಿಲು ತೆಗೆದು ಪೇಪರ್ ಎತ್ತಿಕೊಳ್ಳಲು ಭಯಪಡುತ್ತಾರೆ...
ಏನ್ರಿ ಇವತ್ತಿನ ಪತ್ರಿಕೆಗೆ ಏನೋ ಅಂಟಿಸಿಲಾಗಿದೆಯಂತೆ. ನಮ್ಮ ಗೆಳೆಯ, ಸಂಬಂಧಿಕ ಫೋನ್ ಮಾಡಿ ಹೇಳಿದ. ಹೀಗೆ ನನಗೆ ಮತ್ತು ನನ್ನಂಥ ಅನೇಕ ವೃತ್ತಿಬಾಂಧವರಿಗೆ ಫೋನ್ ಮೇಲೆ ಫೋನು... ಅವರಿಗೆಲ್ಲಾ ಉತ್ತರಿಸಿ ನನಗಂತೂ ತಲೆಕೆಟ್ಟುಹೋಗಿದೆ. ನಮ್ಮ ವೆಂಡರುಗಳು ಈ ವಿಚಾರವಾಗಿ ಟೈಮ್ಸ್ ಅಪ್ ಇಂಡಿಯ ದಿನಪತ್ರಿಕೆಯನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದಾರೆ.
ಮತ್ತೆ ಇವತ್ತು ಅಂತ ಜಾಹಿರಾತಿನ ವಸ್ತು ಆ ಪತ್ರಿಕೆಯಲ್ಲಿ ಬಂದಿದ್ದರಿಂದ ನಮ್ಮ ದಿನಪತ್ರಿಕೆ ವಿತರಕರು ಮತ್ತು ಮನೆಮನೆಗೆ ತಲುಪಿಸುವ ಬೀಟ್ ಹುಡುಗರ ಕತೆಯಂತೂ ಕೇಳುವುದೇ ಬೇಡ. ಆ ರೀತಿ ಬಂದ ಬೆಂಗಳೂರು ಟೈಮ್ಸನ್ನು ಮುಖ್ಯ ಪತ್ರಿಕೆಗೆ ಸೇರಿಸಿದರೆ ಒಂದುಕಡೆ ಜೋಡಿಸಿಡಲಾಗದೇ ಫಜೀತಿ ಪಟ್ಟವರು ವೆಂಡರುಗಳಾದರೆ ಅದನ್ನು ಸೈಕಲ್ ಕ್ಯಾರಿಯರುಗಳಲ್ಲಿ ಜೋಡಿಸಿಕೊಳ್ಳಲು ಸರ್ಕಸ್ ಮಾಡುತ್ತಾ ನಾಲ್ಕಾರು ಸಲ ನೆಲಕ್ಕೆ ಬೀಳಿಸುತ್ತಾ, ಮತ್ತೆ ಒದ್ದೆಯಾದ[ನಿನ್ನೆ ರಾತ್ರಿ ಮಳೆಬಂದು, ಫುಟ್ಪಾತ್ಗಳೆಲ್ಲಾ ನೀರು] ಅದೇಪೇಪರುಗಳನ್ನು ಜೋಡಿಸಿಕೊಳ್ಳುತ್ತಾ... ಇವತ್ತು ಅದನ್ನೆಲ್ಲಾ ಸಹಿಸಿಕೊಂಡ ನಮಗೆ ಮತ್ತು ನಮ್ಮ ಹುಡುಗರಿಗೆ ಗೊತ್ತು.
ಇದಿಷ್ಟು ಇವತ್ತು ನಡೆದ ಘಟನೆಗಳು. ನನ್ನ ಅನೇಕ ದಿನಪತ್ರಿಕೆ ಗ್ರಾಹಕರು ಫೋನ್ ಮಾಡಿ ಈ ವಿಚಾರವನ್ನು ತಿಳಿಸುತ್ತಿದ್ದಾರೆ. ಅವರಿಗೆ ಇದುವರೆಗೆ ಉತ್ತರಿಸಿ ನನಗಂತೂ ತಲೆಕೆಟ್ಟುಹೋಗಿದೆ.
ಗೆಳೆಯರೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಶಿವು ಕೆ., ದಿನಪತ್ರಿಕೆ ವಿತರಕ, ಛಾಯಾಗ್ರಾಹಕ