ಲೋಕಾಯುಕ್ತ ರಾಜೀನಾಮೆ ವಾಪಸು ಬೇಡ: ಚಂಪಾ
ರಾಜೀನಾಮೆ ವಾಪಸು ಪಡೆಯಬೇಕೆಂದು ಒತ್ತಾಯಿಸುತ್ತಿರುವವರಲ್ಲಿ ಎರಡು ಬಗೆ: (1) ಹೋರಾಟದ ಒಂದು ಶಕ್ತಿಯೇ ಇಲ್ಲವಾದರೆ ಇನ್ನಾರು ಗತಿ? ಎಂಬ ಆತಂಕ ಹಾಗೂ ನೋವಿನಲ್ಲಿರುವ ಸಾಮಾನ್ಯ ಜನತೆ ಮತ್ತು ಜನಪರ ಚಳವಳಿಗಾರರು.
2) ಹೆಗಡೆಯವರು ಹೇಗಾದರೂ ಆ ಸ್ಥಾನಕ್ಕೆ ಮರಳಿ ಬರುವಂತಾಗಿ, ಯಥಾ ಸ್ಥಿತಿ (ಸ್ಟೇಟಸ್) ಹಾಗೆಯೇ ಮುಂದುವರಿಯಲಿ ಎಂದು ಒಳಗೊಳಗೇ ಹಾರೈಸುತ್ತಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಾಯಕರು.
ನನ್ನ ವೈಯಕ್ತಿಕ ಅಭಿಪ್ರಾಯ: ಎಂಥದ್ದೇ ಒತ್ತಡ ಬಂದರೂ ಸಂತೋಷ ಹೆಗಡೆಯವರು ರಾಜೀನಾಮೆ ವಾಪಸು ಪಡೆಯಬಾರದು ಮತ್ತು ಒಂದು ದಿಟ್ಟ ಹೆಜ್ಜೆಯನ್ನಿಟ್ಟ ಅವರು, ಅಲ್ಲಿಗೇ ನಿಲ್ಲದೆ, ಮುಂದಿನ ದಿಟ್ಟ ಹೆಜ್ಜೆ ಇಡಲು ಮುಂದಾಗಬೇಕು.
ಈ ಮಾತು ಬರೆಯುವಾಗ ಮೂವತ್ತೈದು ವರ್ಷಗಳ ಹಿಂದಿನ, ತುರ್ತು ಪರಿಸ್ಥಿತಿಯ (ಎಮರ್ಜೆನ್ಸಿ) ಆ ಕರಾಳ ದಿನಗಳ ನೆನಪು ನನಗೆ. ಜೇಪಿ ನೇತೃತ್ವದ ಆಂದೋಲನ ಒಂದು ನೆಲೆಯಲ್ಲಿ ಯಶಸ್ವಿಯಾಗಿ ಈ ದೇಶದಲ್ಲಿ ಮಹತ್ವದ ರಾಜಕೀಯ ಪಲ್ಲಟವನ್ನುಂಟು ಮಾಡಿದ್ದೇನೋ ನಿಜ.
ಆದರೆ, ಈ ಮೂರುವರೆ ದಶಕಗಳಲ್ಲಿ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅನೇಕ ಸ್ತರಗಳಲ್ಲಿ ಚಳವಳಿಗಳು (ರೈತ, ಕಾರ್ಮಿಕ, ದಲಿತ, ಕನ್ನಡ, ಮಹಿಳೆ, ಪರಿಸರ, ಕೋಮುವಾದ ವಿರೋಧಿ ಹೀಗೆ.) ನಡೆದಿವೆ.
ಆದರೆ, ನಾಯಕರ ಬಗ್ಗೆ ಜನ ವಿಶ್ವಾಸ ಕಳಕೊಂಡಿದಾಟಛಿರೆ. ಈ ಎಲ್ಲ ಚಳವಳಿಗಳ ಎಳೆಗಳನ್ನು ಜೋಡಿಸುತ್ತಲೇ ಸಮಗ್ರ ಆಂದೋಲನವೊಂದನ್ನು ರೂಪಿಸ ಬಲ್ಲ ಒಟ್ಟು ಪ್ರಾಮಾಣಿಕ ಜನ ನಾಯಕನಿಗಾಗಿ ಜನ ಕಾಯುತ್ತಿದ್ದಾರೆ.
ದೇಶದ ಎಲ್ಲೋ ಒಂದು ಕಡೆ ಕಿಡಿ ಹೊತ್ತಿದರೂ ಹಾಹಾ ಅನ್ನುವುದರೊಳಗೆ ಅದು ಸರ್ವವ್ಯಾಪಿಯಾಗಬಹುದಾದ ಸಾಧ್ಯತೆ ಈಗ ಇದೆ. ನ್ಯಾಯಮೂರ್ತಿ ಹೆಗಡೆಯವರು, ಅವರು ಮಾಡಲಿ ಇವರು ಮಾಡಲಿ ಅಂತ ಕಾಯದೆ ತಾವೇ ಈ ಕಾರ್ಯಕ್ಕೆ ಮುಂದಾಗಲಿ ಅಂತ ಹಾರೈಸುವೆ.
ಈಗ ಒದಗಿ ಬಂದಿರುವ ಈ ಐತಿಹಾಸಿಕ ಕ್ಷಣದಲ್ಲಿ ಅವರು ಸಾರಾಸಾರ ವಿಚಾರ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಿ. ಇಂಥದೊಂದು ಜನಾಂದೋಲನ ಪ್ರಾರಂಭವಾದರೆ ಸ್ವಯಂಸೇವಕನಾಗಲು ನಾನಂತೂ ಸಿದ್ಧ