ಕುವೆಂಪು ಹುಟ್ಟೂರಲ್ಲಿ ರೆಸಾರ್ಟ್ ಏಕೆ?
ಕುವೆಂಪು ಅವರ ಮನೆ, ಸಮಾಧಿ, ಕವಿಶೈಲ, ವಸ್ತುಸಂಗ್ರಹಾಲಯ, ಹೇಮಾಂಗಣ, ತೇಜಸ್ವಿಯವರ ಸಮಾಧಿ, ಅಧ್ಯಯನ ಕೇಂದ್ರ, ಜೈವಿಕ ವನ ಹೀಗೆ ಇಲ್ಲಿರುವ ಹತ್ತಾರು ತಾಣಗಳಿಗೆ ನಿತ್ಯವೂ ನೂರಾರು ಅಭಿಮಾನಿಗಳು, ಮಕ್ಕಳು ಭೇಟಿ ನೀಡುತ್ತಿದ್ದು, ಅವರ ಅಗತ್ಯತೆಗಳ ಪೂರೈಕೆಗಾಗಿ ಪ್ರತಿಷ್ಠಾನದಿಂದ ಅವಿರತ ಪ್ರಯತ್ನ ನಡೆದಿದೆ.
ಈ ಎಲ್ಲ ಪ್ರಯತ್ನಗಳಿಗೆ ಮಾರಕವಾಗುವಂತೆ, ಕನ್ನಡ ಸಂಸ್ಕೃತಿಗೆ ಅಪಚಾರವಾಗುವಂತೆ ಕುಪ್ಪಳಿ ಪ್ರವೇಶದ್ವಾರದಲ್ಲಿ ಒಂದು ರೆಸಾರ್ಟ್ ನಿರ್ಮಾಣ ವಾಗುತ್ತಿದೆ! ಕವಿಮನೆಗೆ ಬರುವ ನೂರಾರು ಸಂದರ್ಶಕರು ನಡೆದಾಡಲೂ ಆಗದಂತೆ ಸುತ್ತಮುತ್ತಲ ಜಮೀನಿಗೆ ಮುಳ್ಳುಬೇಲಿ ಬಿದ್ದಿದೆ.
ಸರಕಾರ ಕೂಡಲೇ ಎಚ್ಚೆತ್ತು, ಕವಿಮನೆಯ ಸುತ್ತಮುತ್ತ ಇರುವ ಜಮೀನನ್ನು ವಶಪಡಿಸಿಕೊಂಡು, ಕನ್ನಡಿಗರ ಅಭಿಮಾನದ ಕವಿಮನೆಯ ಪರಿಸರ ಮಾಲಿನ್ಯದಿಂದ ಹಾಳಾಗುವುದನ್ನು ತಪ್ಪಿಸಬೇಕು. ರೆಸಾರ್ಟ್ ನಿರ್ಮಾಣ ವಿರೋಧಿಸಿ ಸ್ಥಳೀಯ ಪರಿಸರವಾದಿಗಳು ಹಾಗೂ ಕುವೆಂಪು, ತೇಜಸ್ವಿ ಅಭಿಮಾನಿಗಳು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಆದರೆ, ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ದುರಂತವಾದರೂ ಸತ್ಯ.