ಹೊಣೆಗಾರಿಕೆ ಬಿಜೆಪಿ ಹೆಗಲೇರಿದೆ
ಆದರೆ, ಅದೃಷ್ಟದ ಜೊತೆಗೆ ಸವಾಲೂ ಬೃಹತ್ತಾದುದಾಗಿದೆ. ಬಿಬಿಎಂಪಿಯ ಬಿಜೆಪಿ ಆಡಳಿತವೀಗ ಬೃಹತ್ ಬೆಂಗಳೂರನ್ನು ಸಂಭಾಳಿಸಬೇಕಾಗಿದೆ, ಅಭಿವೃದ್ಧಿ ಪಡಿಸಬೇಕಾಗಿದೆ. ರಾಜ್ಯದ ಆಡಳಿತವೂ ಇದೇ ಪಕ್ಷದ ಕೈಯಲ್ಲಿರುವುದು ಈ ದಿಸೆಯಲ್ಲೊಂದು ವಿಶೇಷ ಅನುಕೂಲವಾಗಿದೆ. ಈ ಅವಕಾಶ ಮತ್ತು ಅನುಕೂಲಗಳನ್ನು ಉಪಯೋಗಿಸಿಕೊಂಡು ರಾಜಧಾನಿಯ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕಾದ್ದು ಬಿಬಿಎಂಪಿಯ ನೂತನ ಆಡಳಿತದ ಆದ್ಯ ಕರ್ತವ್ಯವಾಗಿದೆ.
ಬೆಂಗಳೂರಿನ ಅಭಿವೃದ್ಧಿಗೆ ಮೂರು ಮುಖಗಳಿರುತ್ತವೆಂಬುದನ್ನು ಹೊಸದಾಗಿ ಆಯ್ಕೆಗೊಂಡ ಸದಸ್ಯರು ಅರಿತು ಮೂರೂ ಮುಖಗಳ ಸ್ವಾಸ್ಥ್ಯ-ಸೊಬಗುಗಳನ್ನು ಹೆಚ್ಚಿಸುವ ದಿಸೆಯಲ್ಲಿ ಮುನ್ನಡೆಯಬೇಕು. ಬೃಹತ್ ಬೆಂಗಳೂರಿನ ನಿವಾಸಿಗಳ ಕ್ಷೇಮಾಭ್ಯುದಯ ಮೊದಲನೆಯ ಮುಖ. ರಾಜ್ಯದ ರಾಜಧಾನಿಯಾಗಿ ಬೆಂಗಳೂರು ಈ ರಾಜ್ಯಕ್ಕೆ ಸಲ್ಲಿಸಬೇಕಾದ ಸೇವೆ ಎರಡನೆಯ ಮುಖ. ಮೆಟ್ರೊಪಾಲಿಟನ್ ಸಿಟಿಯಾಗಿ, ಅಂದರೆ ಮಹಾನಗರವಾಗಿ ಬೆಂಗಳೂರು ಈ ದೇಶಕ್ಕೆ ನೀಡಬೇಕಾದ ಕೊಡುಗೆ ಮೂರನೆಯ ಮುಖ.
ಈ ಮೂರೂ ಮುಖಗಳ ಉನ್ನತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರಾಡಳಿತವು ಕ್ರಿಯಾಶೀಲವಾಗಬೇಕು. ಅದುವೇ ಬೆಂಗಳೂರಿನ ಸರ್ವಾಂಗೀಣ ಪ್ರಗತಿಯತ್ತ ದೃಢ ಹೆಜ್ಜೆ. ಈ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿ, ಜೊತೆಗೆ ಮೂರೂ ಮುಖಗಳ ಸಮತೋಲ ಕಾಯ್ದುಕೊಂಡು ಅತೀವ ಜವಾಬ್ದಾರಿಯಿಂದ ಸಾಗಬೇಕಾದ ಹೊಣೆಗಾರಿಕೆ ಈಗ ಬಿಬಿಎಂಪಿಯ ಬಿಜೆಪಿ ಆಡಳಿತದ ಹೆಗಲೇರಿದೆ.