ಎಲ್ಲರ ಸಮ್ಮೇಳನವಾಗಬೇಕು ಸಾಹಿತ್ಯ ಸಮ್ಮೇಳನಗಳು
ಅವರುಗಳಿಗೆ ಈ ಕುರಿತು ಆಸಕ್ತಿ ಮೂಡುವಂತಾಗಲು ಸಾಹಿತ್ಯ ಸಮ್ಮೇಳನಗಳಲ್ಲಿ ಎಂಜಿನಿಯರಿಂಗ್ ಟೆಕ್ನಾಲಜಿಯನ್ನು ಕನ್ನಡದಲ್ಲಿ ಮಂಡಿಸುವ ಹಾಗೂ ವಿಜ್ಞಾನ, ಸಾಹಿತ್ಯಗಳು ಹೇಗೆ ಒಂದಕ್ಕೊಂದು ಪೂರಕ ಎನ್ನುವ ವಿಷಯವನ್ನು ಚರ್ಚೆಗೆ ತರುವ, ವೈದ್ಯಕೀಯ ವಿಜ್ಞಾನ ಹಾಗೂ ಅದರ ಹರವನ್ನು ಕನ್ನಡದಲ್ಲಿ ತಿಳಿಸಿಕೊಡುವ, ವಿಜ್ಞಾನ ಹಾಗೂ ವೈದ್ಯಕೀಯ ವಿಜ್ಞಾನದ ಕುರಿತಾಗಿ ಮಾರಾಟ ಮಳಿಗೆಗಳಲ್ಲಿ ಪುಸ್ತಕಗಳನ್ನಿಡುವ ವ್ಯವಸ್ಥೆಯಾಗಬೇಕು. ಇದರಿಂದ ಬಂದಿರುವ ಸಾಕಷ್ಟು ಬೇರೆ ಬೇರೆ ಕ್ಷೇತ್ರದ ಜನತೆಗೆ ಈ ಕ್ಷೇತ್ರಗಳ ಕುರಿತಾಗಿಯೂ ಸಹ ಆಸಕ್ತಿ ಮೂಡುತ್ತದೆ.
ನುರಿತ ವೈದ್ಯ, ವಿಜ್ಞಾನಿ ಇಂಥವರು ಗಳನ್ನು ಕರೆಸಿ ವಿಷಯಗಳನ್ನು ಮಂಡಿಸಲು ಅವಕಾಶ ನೀಡಿದರೆ ಕನ್ನಡ ಎಲ್ಲ ಕ್ಷೇತ್ರಗಳಿಗೂ ಬೇಕಾದದ್ದು ಎನ್ನುವುದರ ಅರಿವಾಗುತ್ತದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ, ಆಗಿಹೋದ ಅನಾಹುತಗಳ ಬಗೆಗೆ ಅತ್ತರೆ ಪ್ರಯೋಜನವಿಲ್ಲ. ಅದಕ್ಕಾಗಿ ಜಾಗೃತಿ ಮೂಡಿಸಬೇಕು, ನಾನೆಷ್ಟು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಂಡು ಓದುತ್ತೇನೆ, ಓದಿದ್ದನ್ನು ಎಷ್ಟು ಜನರೊಂದಿಗೆ ಹಂಚಿಕೊಳ್ಳುತ್ತೇನೆ ಎನ್ನುವುದನ್ನು ಪ್ರತಿ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರೂ ಯೋಚಿಸಿದರೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಾತ್ರ ವಿಜೃಂಭಿಸುವ ಕನ್ನಡ ಸಾಹಿತ್ಯ, ವರ್ಷದ ಎಲ್ಲ ದಿನಗಳಲ್ಲಿಯೂ ವಿಜೃಂಭಿಸಲು ಸಾಧ್ಯ ಅಲ್ಲವೆ?
ಪ್ರತಿಯೊಂದು ವಿಷಯದಲ್ಲೂ ಸ್ಪರ್ಧಾತ್ಮಕವಾಗಿದ್ದು ಬೇರೆ ಭಾಷೆಯೊಂದಿಗೆ ಕನ್ನಡದ ಹೋರಾಟ ನಡೆಯುತ್ತಿರುವ ಈ ಸಮಯದಲ್ಲಿ ಸಾಹಿತ್ಯ ಸಮ್ಮೇಳನಗಳು ಕೇವಲ ಜಾತ್ರೆಗಳಾಗಬಾರದು. ಅವುಗಳು ನಮ್ಮ ಮುಂದಿನ ಪೀಳಿಗೆಗೆ ಕನ್ನಡದ ಬಗೆಗೆ ಹೊಸ ವಿಷಯಗಳನ್ನು ಸಾರಿ ಹೇಳುವ ಮಾಧ್ಯಮಗಳಾಗಬೇಕು. ಇದೆಲ್ಲ ಕೇವಲ ಶಬ್ದಜಾಲದಿಂದ ಆಗುವ ಮಾತಲ್ಲ, ಇದರಲ್ಲಿ ಸಾಹಿತಿಗಳೊಂದಿಗೆ, ವಿಜ್ಞಾನಿ, ವೈದ್ಯ, ಶಿಕ್ಷಕ, ವಕೀಲ... ಎಲ್ಲರೂ ಕೈಜೋಡಿಸಬೇಕಲ್ಲವೆ ಆಗ ಕನ್ನಡ ಸಾಹಿತ್ಯ ಸಮ್ಮೇಳನಗಳು ಮುದ್ರಣ ಮಾಧ್ಯಮದಲ್ಲಷ್ಟೇ ಅಚ್ಚಾಗದೆ ನಮ್ಮೆಲ್ಲರ ಹೃದಯದಲ್ಲೂ ಅಚ್ಚಾಗುತ್ತವೆ.