ಕಾಂಗ್ರೆಸ್ ಗೆಲುವು ಧನಾತ್ಮಕವೇನೂ ಅಲ್ಲ
ಮಧು ಕೃಷ್ಣಮೂರ್ತಿಯವರ 2009ನೇ ಲೋಕಸಭಾ ಚುನಾವಣೆಯ ಫಲಿತಾಂಶದ ವಿಶ್ಲೇಷಣೆ ಓದಿದ ನಂತರ ಬರೆಯಬೇಕೆನ್ನಿಸಿದ ಒಂದೆರಡು ಮಾತು. ಅವರ ಲೇಖನ ಭಾಗಶಃ ಸರಿಯೆನ್ನಿಸಿ, ಗೆಲ್ಲುವ ಕುದುರೆಯನ್ನು (ಗೆದ್ದಾದ ಮೇಲೆ) ಸರಿಯಾಗಿ ಗುರುತಿಸಿದರೂ ಗೆಲುವಿಗೆ ಕಾರಣ ಹೇಳುವಲ್ಲಿ ಸೋತಿದ್ದರಿಂದ ಕೆಲವು ಪೂರಕ, ಮತ್ತು ಕೆಲವು counter points ಅನ್ನು ಹೇಳಲು ಇಚ್ಚಿಸುತ್ತೇನೆ.
ಪ್ರಧಾನಿ ಮನಮೋಹನ ಸಿಂಗ್ ದುರ್ಬಲರು ಎಂಬ ಬಿಜೆಪಿಯ ಪ್ರಚಾರ ಚುನಾವಣಾ ಪೂರ್ವದ್ದೇನಲ್ಲ. ಕಳೆದ ಮೂರು ವರ್ಷಗಳಿಂದ ಅವಕಾಶ ಸಿಕ್ಕಾಗೆಲ್ಲ ಬಿಜೆಪಿಯ ನಾಯಕರು ಪ್ರಧಾನಿಯ ಹಿಂದೆ ಇರುವ ನಿಜವಾದ ಶಕ್ತಿಗಳನ್ನು ಬಹಿರಂಗವಾಗಿ ಗುರುತಿಸುತ್ತಲೇ ಇದ್ದಾರೆ. ಜತೆಗೆ ಲಾಲ್ ಕೃಷ್ಣ ಅಡ್ವಾಣಿಯವರ ಬಹಿರಂಗ ಚರ್ಚೆಯ ಪಂಥಾಹ್ವಾನಕ್ಕೆ ಮನಮೋಹನ ಸಿಂಗ್ ಹೆದರಿರಲಿಲ್ಲವೆ? ಇದು ನಿಜವಲ್ಲದಿದ್ದರೆ ಕೃಷ್ಣಮೂರ್ತಿಯವರು ತಿಳಿದವರಾದರೆ ನನ್ನ ಈ ಗ್ರಹಿಕೆಯನ್ನು ತಿದ್ದಬೇಕು.
ಇದೇ ಸಂದರ್ಭದಲ್ಲಿ ಬಿಜೆಪಿಯ ಉನ್ನತ ನಾಯಕತ್ವದಿಂದ ಬಂದ ಆಕ್ಷೇಪಾರ್ಹವಾದ ಮತ್ತೊಂದು ಹೇಳಿಕೆಯನ್ನು ಉದ್ಧರಿಸಲು ಇಚ್ಚಿಸುತ್ತೇನೆ. ಯಶವಂತ್ ಸಿನ್ಹಾ, ಮಾಜಿ ವಿದೇಶಾಂಗ ಮಂತ್ರಿ, ಪ್ರಧಾನ ಮಂತ್ರಿಯವರನ್ನು 'ಶಿಖಂಡಿ'ಯೆಂದು ಜರೆದಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ, ಯಶವಂತ ಸಿನ್ಹಾರ ಈ ಹೇಳಿಕೆ ಎಷ್ಟು ಜನರಿಗೆ ನೆನಪಿದೆ?
ಎರಡನೆಯ ಬಹುಮುಖ್ಯ ಅಂಶ; ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಜನ್ಮ ಭೂಮಿಯಾಗಲೀ, ರಾಮ ಸೇತುವಾಗಲೀ ಮಹತ್ವದ ವಿಷಯಗಳಾಗಿರಲಿಲ್ಲ. ಸಂಸ್ಕೃತಿ ಮತ್ತು ಪರಂಪರೆಯ ವಿಷಯಗಳ ಬಗ್ಗೆ ಇದ್ದ ನಾಲ್ಕು ಸಾಲುಗಳು ಮಾತ್ರ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವ ಬಗ್ಗೆ ಇವೆ. (ನೋಡಿ: ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ, 2009; ಪುಟ 48). ಭಾರತದ ಆರ್ಥಿಕತೆಯ ಬಗ್ಗೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಬಗ್ಗೆ, ಭಾರತದ ರಕ್ಷಣೆಯ ಬಗ್ಗೆ, ಭಾರತದ ವಿದೇಶಾಂಗ ನೀತಿಯ ಬಗ್ಗೆ ಇದ್ದ 47 ಪುಟಗಳನ್ನು ಕಡೆಗಣಿಸಿ ಕೇವಲ ಇವು ನಾಲ್ಕು ಸಾಲು ಮಾತ್ರ ನಿಮಗೆ ಹೆಚ್ಚೆನಿಸಿದ್ದು ಆಶ್ಚರ್ಯವಲ್ಲವೆ!
ಬಿಜೆಪಿ ಸೋಲಲು ಹಲವು ಕಾರಣಗಳಿದ್ದಂತೆ ಕಾಂಗ್ರೆಸ್ ಗೆಲ್ಲಲೂ ಹಲವು ಕಾರಣಗಳಿವೆ. ಆದರೆ ಇದು ಕಾಂಗ್ರೆಸ್ ಗೆ ದೊರಕಿದ ಗೆಲುವು ಎಂದೇನೂ ಕಾಂಗ್ರೆಸ್ಸಿಗರು ಹಿಗ್ಗುವುದು ಬೇಡ. ಉತ್ತರಖಂಡ ರಾಜ್ಯವನ್ನು ಹೊರತುಪಡಿಸಿದರೆ ಬಿಜೆಪಿಯ ರಾಜ್ಯ ಸರಕಾರವಿರುವ ಎಲ್ಲೆಡೆ ಬಿಜೆಪಿ ಉತ್ತಮ ಫಲಿತಾಂಶವನ್ನೇ ಗಳಿಸಿದೆ. ಇದು ಕೇಂದ್ರ ಸರ್ಕಾರದ ಕುಯುಕ್ತಿಗಳನ್ನು ಮೀರಿಯೂ ಸಹ. ಉದಾಹರಣೆಗೆ, ಮಧ್ಯಪ್ರದೇಶ. ಬರದ ಬಾಧೆಗೆ ಒಳಗಾಗಿರುವ ಈ ರಾಜ್ಯದಲ್ಲಿ, ಬರ ಪರಿಹಾರ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ವಿಳಂಬವಾಗಲು ಕಾರಣ ಚುನಾವಣೆಯಿಂದಾಗಿ ಜಾರಿಯಲ್ಲಿದ್ದ ನೀತಿ ಸಂಹಿತೆ! ಪರಿಣಾಮ - ಅಧಿಕತಃ ಜನರು ವಲಸೆ ಹೋಗಿ ಬಿಜೆಪಿಗೆ ಇದ್ದ 'ಸಪೋರ್ಟ್ ಬೇಸ್' ಕಡಿಮೆಯಾಯಿತು. ಹೀಗಿದ್ದೂ 16 ಲೋಕಸಭಾ ಸದಸ್ಯರನ್ನು ಮಧ್ಯಪ್ರದೇಶದಲ್ಲಿ ಬಿಜೆಪಿ ಪಡೆದಿದೆ.
ಇನ್ನು ಕಾಂಗ್ರೆಸ್ಸಿನ ಮಟ್ಟಿಗೆ ಹೇಳುವುದಾದರೆ ಅದು ತಥಾ ಕಥಿತ ತೃತೀಯ ರಂಗಕ್ಕೆ ಬರಬಹುದಾಗಿದ್ದ ಮತಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಾಫಲ್ಯ ಗಳಿಸಿದ್ದು ನಿಜ. ಉತ್ತರ ಪ್ರದೇಶದ ಫಲಿತಾಂಶಗಳನ್ನು ನೋಡಿ, ನಿರೀಕ್ಷೆ (ಮತ್ತು ಆತಂಕ ಎನ್ನಲು ಅಡ್ಡಿಯಿಲ್ಲ!) ಇದ್ದದ್ದು ಮಾಯಾವತಿಯ ಬಹುಜನ ಸಮಾಜ ಪಕ್ಷ ಹೆಚ್ಚು ಎಂಪಿಗಳನ್ನು ಪಡೆಯುತ್ತದೆ ಎಂದು. ಸಮಾಜವಾದಿ ಪಕ್ಷವಂತೂ ತಾವು 'ಕಿಂಗ್ ಮೇಕರ್' ಆಗುವ ಕನಸು ಕಾಣುತ್ತಿದ್ದರು. ಬಿಜೆಪಿ ಒಂದು ಕ್ಷೇತ್ರ ಕಳೆದುಕೊಂಡರೂ, ಕಾಂಗ್ರೆಸ್ ಕಸಿದಿದ್ದು ಸಮಾಜವಾದಿ ಪಕ್ಷದ ಕ್ಷೇತ್ರಗಳನ್ನು. ಜತೆಗೆ ಉತ್ತರ ಪ್ರದೇಶದಲ್ಲಿ ಕ್ಷೇತ್ರೀಯ ರಾಜಕೀಯಕ್ಕೆ ಹೆಚ್ಚು ಬಲ ಬಂದಿರುವುದು 4ರಿಂದ ಆರಕ್ಕೆ ಏರಿದ ಇತರ ಪಕ್ಷಗಳ ಎಂಪಿಗಳ ಸಂಖ್ಯೆ.
ಮಹಾರಾಷ್ಟ್ರದ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ರಾಜ್ ಠಾಕ್ರೆ ಎಂಬ ವ್ಯಕ್ತಿಯನ್ನು ದೇಶ ಘಾತುಕ ಕೆಲಸ ಮಾಡಿದರೂ ಬಂಧಿಸದೆ, ಬಂಧಿಸಿದರೂ ಜೈಲಿನಲ್ಲಿ ಶಿಶುವಂತೆ ಸಂರಕ್ಷಿದ್ದಕ್ಕೆ ಕಾಂಗ್ರೆಸ್ ಗೆ ದೊರೆತ ಪ್ರತಿಫಲ ಶಿವಸೇನೆಯ ಸೊರಗಿದ ಚುನಾವಣಾ ಪ್ರಕ್ರಿಯೆ. ಇದರ ಜತೆ, ಅನನುಭವಿ ಉದ್ಧವ ಠಾಕ್ರೆ, ಎನ್ ಸಿಪಿಯ ಶರದ್ ಪವಾರ್ ಜತೆ ನಡೆಸಿದ ಕಣ್ಣು ಮುಚ್ಚಾಲೆಯಿಂದ ಎನ್ ಡಿಎದ ಒಟ್ಟು 'ಪರ್ ಫಾರ್ಮೆನ್ಸ್' ಗೆ ಧಕ್ಕೆ ಬಂದಿತು.
ಒಟ್ಟಿನಲ್ಲಿ, ನನ್ನ ಅಭಿಪ್ರಾಯದಲ್ಲಿ, ಕಾಂಗ್ರೆಸ್ ಗೆ ಇದು ಧನಾತ್ಮಕ ಗೆಲುವೇನೂ ಅಲ್ಲ. ಮತ್ತು ಬಿಜೆಪಿಗೆ ಋಣಾತ್ಮಕ ಫಲಿತಾಂಶವೂ ಅಲ್ಲ. ಆದರೂ ಸಂವಿಧಾನವನ್ನು ಗೌರವಿಸುವ ಎಲ್ಲ ಪಕ್ಷಗಳಂತೆ ಬಿಜೆಪಿ ಸಹ ವಿರೋಧ ಪಕ್ಷದ ಸ್ಥಾನಕ್ಕೆ ಈ ಬಾರಿಯೂ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕೈ ಹಿಡಿದು ಎಳೆಯುವ ಅವಕಾಶವಾದಿ ಮಿತ್ರರಾಗಲೀ, ಕೇವಲ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ 'ಉದಾತ್ತ' ಉದ್ದೇಶದಿಂದ ಬೆಂಬಲ ನೀಡಿ ಕಾಲೆಳೆಯುವ ಎಡ ಪಕ್ಷಗಳಾಗಲೀ ಇಲ್ಲದ ಕಾರಣ ಮನ ಮೋಹನ ಸಿಂಗರೂ 'ದುರ್ಬಲ' ಪ್ರಧಾನಿ ಆಗದೆ ದೇಶಕ್ಕೆ ಒಳಿತನ್ನು ಮಾಡುತ್ತಾರೆಂದು ಹಾರೈಸುವ.