ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಎಸೆತ : ಸಿಎಂ ಸಂಯಮದಿಂದ ವರ್ತಿಸಬೇಕಾಗಿತ್ತು

By * ಸಿ. ನಾಗೇಶ್, ಅರಕಲಗೂಡು.
|
Google Oneindia Kannada News

Yeddyurappa should have controlled his anger after chappal incident
ಮಾನ್ಯರೇ.

ರಾಜಕಾರಣಿಗಳ ಮೇಲೆ ಚಪ್ಪಲಿ ಎಸೆತ ಈಗ ಸಾಮಾನ್ಯ ಎನಿಸಿದೆ. ಜನಸಾಮಾನ್ಯರ ಈ ನಡವಳಿಕೆಯ ಹಿಂದೆ ರಾಜಕಾರಣಿಗಳ ಬಗೆಗಿನ ಅಸಹನೆ ಚಪ್ಪಲಿ ಮತ್ತು ಶೂಗಳ ಮೂಲಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ದೇಶದ ಹಲವೆಡೆ ಪತ್ರಕರ್ತರು, ನಿವೃತ್ತ ಶಿಕ್ಷಕ,ಗ್ರಾ.ಪಂ. ಸದಸ್ಯ ಮತ್ತು ಸಾಮಾನ್ಯ ನಾಗರಿಕರು ಇಂತಹ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ.

ಎಲ್ಲ ಪ್ರಕರಣಗಳನ್ನು ಪ್ರತ್ಯೇಕವಾಗಿ ಗಮನಿಸಿದರೆ ಅಂತಹ ಕ್ರಿಯೆಯ ಹಿಂದಿನ ಹತಾಶೆ, ನೋವು ಮತ್ತು ಸಿಟ್ಟುಗಳ ವಾಸ್ತವಿಕತೆ ತೆರೆದುಕೊಳ್ಳುತ್ತಿದೆ. ಇದುವರೆಗಿನ ಎಲ್ಲ ಪ್ರಕರಣಗಳಲ್ಲೂ ಇಂತಹದ್ದೊಂದು ಕ್ರಿಯೆಯ ಹಿಂದಿನ ವಾಸ್ತವಿಕತೆಯನ್ನು ಅರಿತ ರಾಜಕೀಯ ಮುಖಂಡರು ಸಂಯಮ ಮತ್ತು ಸಹನೆಯಿಂದ ವರ್ತಿಸಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಹಾಗಾಗಿಲ್ಲ. ಸಾರ್ವಜನಿಕವಾಗಿ ಇಂತಹದ್ದೊಂದು ಅಗೌರವ ಮುಖ್ಯಮಂತ್ರಿಯವರಿಗೆ ಆಗಿದ್ದು ಒಳ್ಳೆಯ ಬೆಳವಣಿಗೆಯಲ್ಲ. ಈ ಘಟನೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ಆದರೆ ಯಡಿಯೂರಪ್ಪ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡದ್ದು ಎಷ್ಟು ಸರಿ?

ರಾಷ್ಟ್ರದ ಒಬ್ಬ ಹಿರಿಯ, ಮುತ್ಸದ್ದಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗೆಗೆ ತೃತೀಯ ರಂಗದ ಬಗ್ಗೆ ಹಾಸನದ ಜನರನ್ನು ಕೆರಳಿಸುವ ಪ್ರಚೋದನಾಕಾರಿ ಭಾಷಣವನ್ನು ಮುಖ್ಯಮಂತ್ರಿ ಮಾಡಿದ್ದು ತಪ್ಪಲ್ಲವೇ? ಇಂತಹ ಮಾತುಗಳೇ ಚಪ್ಪಲಿ ಎಸೆತಕ್ಕೆ ಕಾರಣವಲ್ಲವೇ? ಸಿಎಂ ಪದವಿ ಒಂದು ಜವಾಬ್ದಾರಿ ಹುದ್ದೆ ಅದನ್ನರಿತು ಹೊಣೆಗಾರಿಕೆಯಿಂದ ವರ್ತಿಸಬೇಕಾದ ಅಗತ್ಯವೂ ಇದೆ. ಆದರೆ ಯಡಿಯೂರಪ್ಪ ಮಾಡಿದ್ದೇನು? ಚಪ್ಪಲಿ ಎಸೆತದ ಮರುಕ್ಷಣವೇ ಇದನ್ನು ದೇವೇಗೌಡ ಮತ್ತವರ ಮಕ್ಕಳು ಮಾಡಿಸಿದ್ದಾರೆ, ನಾನು ಮಂಡ್ಯದ ಗಂಡು, ಪೋಲೀಸರೆ ನೀವು ಗಂಡಸಾದರೆ ಆತನನ್ನು 6 ತಿಂಗಳು ಜೈಲಿಗಟ್ಟಿ... ಇದು ಅವರ ವಾಗ್ಜರಿಯ ತುಣುಕು.

ಇನ್ನು ಹಾಸನದ ಮಟ್ಟಿಗೆ ಹೇಳುವುದಾದರೆ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಮಾಡಿದ್ದೇನು? 40 ಸಾವಿರ ಹೆಕ್ಟೇರುಗಳಲ್ಲಿ ಬೆಳೆದ ಆಲೂಗಡ್ಡೆ ನಷ್ಟವಾದಾಗ ಜಿಲ್ಲೆಯ ರೈತರ ಕಣ್ಣೀರಿಗೆ ಬೆಲೆ ಕೊಡಲಿಲ್ಲ. ಗೊಬ್ಬರದ ಅಭಾವವಿತ್ತು, ಜಿಲ್ಲೆಯ ಅಭಿವೃದ್ದಿ ಕಾಮಗಾರಿ ಸ್ಥಗಿತವಾಗಿವೆ, ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇತರೆ ಮುಖ್ಯ ಕಚೇರಿಗಳ ಸ್ಥಳಾಂತರವಾಗಿದೆ, ಪ.ಪೂ. ಕಾಲೇಜುಗಳ ರದ್ದತಿಯಾಗಿದೆ, ರಾಜ್ಯದ ಆಯ-ವ್ಯಯದಲ್ಲಿ ಜಿಲ್ಲೆಯ ಅಭಿವೃದ್ದಿಗೆ ಚಿಕ್ಕಾಸು ಇಲ್ಲ, ಹೊಸ ಯೋಜನೆಗಳು ಇಲ್ಲ, ಇರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ, ಜಿಲ್ಲೆಯ ಉಸ್ತುವಾರಿ ಸಚಿವರು ಅಡ್ರೆಸ್‌ಗೆ ಇಲ್ಲ.

ಒಬ್ಬ ಗನ್ ಮ್ಯಾನ್‌ನ ಖಾಸಗಿ ಕಾರ್ಯಕ್ರಮಕ್ಕೆ ಜಿಲ್ಲೆಗೆ ಬಂದು ಹೋಗುವ ಸಿಎಂ ಯಡಿಯೂರಪ್ಪ ರೈತರ ಕಷ್ಟ ಕೇಳಲು ಬರಲಿಲ್ಲ. ಇವರ ರಾಜಕೀಯ ದ್ವೇಷದಿಂದ ಜಿಲ್ಲೆಯ ಜನಸಾಮಾನ್ಯರಿಗೆ ಅನ್ಯಾಯವಾಗಿದೆ. ಇಂತಹವರು ಚುನಾವಣೆ ಸಂದರ್ಭದಲ್ಲಿ ಬಂದು ಬಾಯಿಗೆ ಬಂದಂತೆ ಮಾತನಾಡಿದರೆ ಸಹಿಸುವ ಶಕ್ತಿ ಯಾರಿಗಿದೆ ಸ್ವಾಮಿ? ಅಷ್ಟಕ್ಕೂ ಪ್ರಚೋದನಕಾರಿ ಭಾಷಣ ಮಾಡಿ ಘಟನೆಗೆ ಕಾರಣರಾಗಿರುವ ಯಡಿಯೂರಪ್ಪನವರ ಮೇಲೆ ಚುನಾವಣಾ ಆಯೋಗ ಯಾವ ಕ್ರಮ ಜರುಗಿಸುವುದೋ ಕಾದು ನೋಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X