ಶಾಸಕ ಜಮೀರ್ ಅಹಮದ್ ರಾಜ ವಿಲಾಸಿ ಬಂಗಲೆ ರಹಸ್ಯ ಸ್ಟೋರಿ!
ಬೆಂಗಳೂರು, ಆ. 05: ಜಾರಿ ನಿದೇಶನಾಲಯದ ದಾಳಿಗೆ ಒಳಗಾಗಿರುವ ಜಮೀರ್ ಕಂಟೋನ್ಮೆಂಟ್ ರೈಲ್ವೆ ಸಮೀಪ ಕಟ್ಟಿರುವ ರಾಜ ವಿಲಾಸಿ ಬಂಗಲೆ ಇದೀಗ ರಾಜ್ಯದ ಗಮನ ಸೆಳೆದಿದೆ. ಆ ಬಂಗಲೆ ಹಿಂದೆ ಮೂವರು ಹೆಣ್ಣು ಮಕ್ಕಳ ನೋವಿನ ಕಥೆಯಿದೆ. ನ್ಯಾಯಕ್ಕಾಗಿ ಕಾನೂನು ಸಮರ ಮಾಡಲಾಗದೇ ಅಸಹಾಯಕರಾಗಿರುವ ಹೆಣ್ಣು ಮಕ್ಕಳ ಶಾಪ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ತಟ್ಟಿತೇ ? ಇಡಿ ತನಿಖೆಗೆ ಒಳಪಟ್ಟಿರುವ ಭವ್ಯ ಬಂಗಲೆಗೆ ಸಂಬಂಧಿಸಿದ ವಹಿವಾಟಿನ ಚಿತ್ರಣ ಇಲ್ಲಿದೆ.
ಇಡೀ ರಾಜ್ಯದ ಗಮನ ಸೆಳೆದಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ರಾಜ ವಿಲಾಸಿ ಬಂಗಲೆ ಎಲ್ಲರ ಕಣ್ಣು ಕೆಂಪಾಗಿಸಿದೆ. ವಿದೇಶದಿಂದ ದುಬಾರಿ ಮೊತ್ತದ ಖರ್ಜೂರ ಬಂಗಲೆ ಕೂಡಿದೆ. ಇನ್ನು ಎಲ್ಲಿ ನೋಡಿದರೂ ಚಿನ್ನವನ್ನು ಮರೆಸುವ ಹಳದಿ ಉಪಕರಣಗಳ ವೈಭವ. ಆ ಭವ್ಯ ಬಂಗಲೆ ಹಿಂದೆ ಒಂದು ಕಣ್ಣೀರ ಕಥೆಯಿದೆ. ಬಂಗಲೆ ಕಟ್ಟಿರುವ ಜಾಗದ ಅಸಲಿ ಸಂಗತಿಯನ್ನು "ಒನ್ಇಂಡಿಯಾ ಕನ್ನಡ" ಇಲ್ಲಿ ವಿವರಿಸಿದೆ.
ಭವ್ಯ ಬಂಗಲೆ ಜಾಗದ ಕಥೆಯಿದು
ಶಾಸಕ ಜಮೀರ್ ಅಹಮದ್ ಖಾನ್ ಅವರು ಬಂಬೂ ಬಜಾರ್ ಬಳಿ ಕಟ್ಟಿರುವ ಭವ್ಯ ಬಂಗಲೆಯ ನಿವೇಶನವನ್ನು 2015 ರಲ್ಲಿ ಖರೀದಿ ಮಾಡಿದ್ದು ಅದರ ಸೇಲ್ ಡೀಡ್ ಒನ್ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ. ಸುಮಾರು 33 ಸಾವಿರ ಚದರಡಿ ಜಾಗವನ್ನು ಜಮೀರ್ ಅಹಮದ್ ಖಾನ್ 15 ಕೋಟಿ ರು.ಗೆ ಖರೀದಿ ಮಾಡಿರುವುದಾಗಿ ದಾಖಲೆಗಳಲ್ಲಿ ತೋರಿಸಿದ್ದಾರೆ. ನಿಜವಾಗಿಯೂ ಅದರ ಮಾರುಕಟ್ಟೆ ಬೆಲೆ 30 ಕೋಟಿ ರೂ.ಗೂ ಅಧಿಕ ಎಂದೇ ಹೇಳಲಾಗುತ್ತಿದೆ.
ಆದರೆ, ಜಮೀರ್ ಅವರು ಕೇವಲ 15 ಕೋಟಿ ರೂ.ಗೆ ಖರೀದಿ ಮಾಡಿರುವುದಾಗಿ ದಾಖಲೆಗಳಲ್ಲಿ ತೋರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ದಾಖಲೆಗಳ್ಲಿ ತೋರಿಸುವ ಮೊತ್ತ ಬೇರೆ. ಆದರೆ, ಖರೀದಿ ಮಾಡಿರುವ ಮೊತ್ತವೇ ಬೇರೆಯದ್ದೇ ಆಗಿರುತ್ತದೆ. ಆದರೆ, ಸಹೋದರರ ನಡುವಿನ ಭೂ ವಿವಾದ ಇತ್ಯರ್ಥ ಪಡಿಸುವ ಹೆಸರಿನಲ್ಲಿ ಈ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಖರೀದಿ ಮಾಡಿದರೇ ಎಂಬ ಅನುಮಾನ ಮೂಡುತ್ತದೆ.
ಅಡ್ವಾನ್ಸ್ ಮಾಡಿದ್ದು 2007 ರಲ್ಲಿ, ಸಾಲ ಮಾಡಿದ್ದು 2015 ರಲ್ಲಿ
ಈ ಆಸ್ತಿಯನ್ನು 2016 ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಆಸ್ತಿ ವಿವರ ಪಟ್ಟಿಯಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಈ ಸ್ವತ್ತನ್ನು ಖರೀದಿಸಲು ಸುಮಾರು ಹದಿನೈದು ಕೋಟಿ ರೂ.ಗಳನ್ನು ತನ್ನ ಆಪ್ತರಿಂದ ವೈಯಕ್ತಿಕ ಸಾಲ ಪಡೆದಿರುವುದಾಗಿ ತೋರಿಸಿದ್ದಾರೆ. ಯು. ಮಲ್ಲಿಕಾರ್ಜುನ ಅವರಿಂದ ಮೂರು ಕೋಟಿ ರೂ. ಲಿಂಗರಾಜು ಅವರಿಂದ ಒಂದು ಕೋಟಿ ರೂ. ಶಮಿಕ್ ಎಂಟರ್ ಪ್ರೈಸಸ್ ಅವರಿಂದ 85 ಲಕ್ಷ ರೂ. ಉಮ್ರಾ ಬಿಲ್ಡರ್ ನಿಂದ ನಾಲ್ಕು ಕೋಟಿ ರೂ., ವಿನಯ್ ಕುಮಾರ್ ಎಂಬುವರಿಂದ 1 ಕೋಟಿ ರೂ. ಸೇರಿದಂತೆ ಒಟ್ಟಾರೆ ಹದಿನೈದು ಮಂದಿಯಿಂದ ಕೈ ಸಾಲ ಪಡೆದಿರುವುದಾಗಿ ತೋರಿಸಿದ್ದಾರೆ. ನ್ಯಾಷನಲ್ ಟ್ರಾವೆಲ್ಸ್ ಮಾಲೀಕ ಜಮೀರ್ ಅವರಿಗೆ ಇಷ್ಟು ಮಂದಿ ವೈಯಕ್ತಿಕ ಸಾಲ ನೀಡಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಕೋಟ್ಯಂತರ ರೂಪಾಯಿ ಜಮೀರ್ಗೆ ಸಾಲ ಕೊಟ್ಟವರು ''ಇಡಿ'' ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅನಿವಾರ್ಯತೆ ಎದುರಾದರೂ ಅಚ್ಚರಿ ಪಡಬೇಕಿಲ್ಲ.
ಆಸ್ತಿಯ ಮೂಲ ಮಾಲೀಕ ಯಾರು ಗೊತ್ತೇ?
ಆಸ್ತಿಯ ಮೂಲದ ವಿವರ: ಜಮೀರ್ ಅಹಮದ್ ಖಾನ್ ಶಿವಾಜಿನಗರದ ಕಂಟೋನ್ಮೆಂಟ್ ಸಮೀಪ ಖರೀದಿ ಮಾಡಿರುವ 33,000 ಚದರಡಿ ಜಾಗ ಮೂಲತಃ ಎಸ್. ಅಬ್ದಲ್ ಖಾದರ್ ಎಂಬುವರಿಗೆ ಸೇರಿದ್ದು. 1970ರಲ್ಲಿ ಖರೀದಿ ಮಾಡಿದ್ದು ಇದನ್ನು ಪತ್ನಿ ಮಯಿಮುನ್ನೀಸಾ ಅವರಿಗೆ ಗಿಫ್ಟ್ ಡೀಡ್ ಮಾಡಿದ್ದರು. ಮಯಿಮುನ್ನೀಸಾಗೆ ಮೂವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳಿದ್ದು, ಒಬ್ಬ ಸಯ್ಯದ್ ಅಸ್ಲಾಂ, ಸಯ್ಯದ್ ಅಫ್ಜಲ್, ಸಯ್ಯದ್ ಅಜಾಮ್, ಹೆಣ್ಣು ಮಕ್ಕಳಾದ ಸಯಿಬಾ ಬೇಗಮ್, ಸಯ್ಯದ್ ಬೇಗಂ, ಫರೀದಾ ಬೇಗಂ. ಇವರಲ್ಲಿ ಸಯ್ಯದ್ ಅಜಾಮ್ ವಿಕಲಾಂಗನಾಗಿದ್ದು, ಈತನಿಗೆ ಹೆಚ್ಚುವರಿ ಪಾಲು ಶೇ. 12 ರಷ್ಟು ಹೆಚ್ಚುವರಿಯಾಗಿ ನೀಡುವಂತೆ ತಾಯಿ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು.
ಸಯ್ಯದ್ ಅಜಾಮ್ 1998 ರಲ್ಲಿ ಮೃತಪಟ್ಟಿದ್ದು, ಈತನ ಪತ್ನಿ ಮತ್ತು ಮುವರು ಹೆಣ್ಣು ಮಕ್ಕಳು ಮೈಸೂರಿನಲ್ಲಿದ್ದಾರೆ. ರುಸ್ಕರ್ ಅಂಜುಂ, ನಿಕ್ಸರ್ ಅಂಜುಂ ಅಫ್ಸರ ಅಂಜಂ ಮೂವರು ಮಕ್ಕಳಿದ್ದಾರೆ. ಮಯಮುನ್ನೀಸಾ ತನ್ನ ಆಸ್ತಿಯನ್ನು ಮಕ್ಕಳಿಗೆ ಪಾಲುದಾರಿಕೆ ಮಾಡಿ ಕೊಟ್ಟಿರುವ ಮದರ್ ಡೀಡ್ ಪ್ರಕಾರ ವಿಕಲಾಂಗನಾಗಿದ್ದ ಅಜಾಮ್ಗೆ ಸಮ ಪಾಲು ಜತೆಗೆ ಹೆಚ್ಚುವರಿ 12% ರಷ್ಟು ನೀಡಬೇಕಿತ್ತು.
ಜಮೀರ್ ಸೇಲ್ ಡೀಡ್ ಕಹಾನಿ!
ವಾಸ್ತವದಲ್ಲಿ ಅಜಂ 1998 ರಲ್ಲಿ ಸಾವನ್ನಪ್ಪಿದ್ದು, ಅವರ ಪತ್ನಿ ಮೈಸೂರಿಗೆ ಹೋಗಿದ್ದರು. ಹೀಗಾಗಿ ಅವರಿಗೆ ಕಾನೂನು ಪ್ರಕಾರ ಈ ಸ್ವತ್ತಿಗೆ ಪಾಲುದಾರರು ಅಲ್ಲ ಎಂಬುದನ್ನು ಜಮೀರ್ ಖರೀದಿ ಮಾಡಿರುವ ಸೇಲ್ ಡೀಡ್ ನಲ್ಲಿ ಉಲ್ಲೇಖಿಸಿ ನೋಂದಣಿ ಮಾಡಿಸಲಾಗಿದೆ. ಇದೇ ಆಸ್ತಿ ವಿಚಾರವಾಗಿ ಮಯಮುನ್ನೀಸಾ ಹೆಣ್ಣು ಮಕ್ಕಳು ನ್ಯಾಯಾಲಯದ ಮೊರೆ ಹೋಗಿ ಇತ್ಯರ್ಥ ಮಾಡಿಕೊಂಡಿರುವುದು ಉಲ್ಲೇಖವಾಗಿದೆ. ವಿವಾದಕ್ಕೆ ಒಳಗಾಗಿದ್ದ ಜಮೀನನ್ನು ಜಮೀರ್ ಅಹಮದ್ ಖರೀದಿ ಮಾಡಿದ್ದು, ವಿಕಲಾಂಗ ಅಜಾಂ ಕುಟುಂಬಕ್ಕೆ ಐದು ಪೈಸೆ ಸಹ ನೀಡಿಲ್ಲ ಎಂಬ ಅರೋಪ ಕೇಳಿ ಬಂದಿದೆ. ಈ ಜಮೀನು ವಿವಾದಕ್ಕೆ ಒಳಗಾಗಿ ಶಾಸಕ ಜಮೀರ್ ಅಹಮದ್ ಖಾನ್ ಬಳಿ ಹೋಗಿದ್ದು, ವಿವಾದವನ್ನೇ ಬಳಸಿಕೊಂಡರೇ ನ್ಯಾಷನಲ್ ಟ್ರಾವೆಲ್ಸ್ ಮಾಲೀಕ?
ಖರೀದಿ ಮಾಡಿ ಸೇಲ್ ಡೀಡ್ ಆಗಿದ್ದು 2015 ರಲ್ಲಿ!
2015 ರಲ್ಲಿ ಜಮೀರ್ ಅಹಮದ್ ಖರೀದಿ ಮಾಡಿ ನೋಂದಣಿ ಮಾಡಿಸಿಕೊಂಡಿದ್ದರೂ, ಸೇಲ್ ಡೀಡ್ ದಾಖಲೆಗಳಲ್ಲಿ 2007 ಸೆಪ್ಟೆಂಬರ್ 23 ರಂದು ಒಂದೂವರೆ ಕೋಟಿ ಹಣವನ್ನು ಮುಂಗಡವಾಗಿ ನೀಡಿದ್ದಾರೆ. ಹಂತ ಹಂತವಾಗಿ 2015 ರ ವರೆಗೂ ಮಯಮುನ್ನೀಸಾ ಇಬ್ಬರು ಪುತ್ರರಿಗೆ ಲಕ್ಷ ಲಕ್ಷ ಹಣ ನೀಡಿದ್ದಾರೆ. ವಿಪರ್ಯಾಸವೆಂದರೆ 2007 ರಲ್ಲಿ ಮುಂಗಡ ಹಣ ನೀಡಿದ ಜಮೀರ್ ಅಹಮದ್ ಖಾನ್ ಎಂಟು ವರ್ಷದ ಬಳಿಕ ಸೇಲ್ ಡೀಡ್ ಮಾಡಿಸಿಕೊಂಡಿದ್ದಾರೆ.
ಸಹೋದರರ ನಡುವೆ ಆಸ್ತಿ ವಿಚಾರವಾಗಿ ಉಂಟಾಗಿದ್ದ ವಿವಾದವನ್ನೇ ಬಂಡವಾಳ ಮಾಡಿಕೊಂಡು 40 ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ 15 ಕೋಟಿ ರೂ.ಗೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ ಈ ಆಸ್ತಿಯನ್ನು ಖರೀದಿಸಲು ಹದಿನೈದು ಮಂದಿ ಬಳಿ ಸಾಲ ಮಾಡಿರುವುದಾಗಿ 2016 ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಿದ್ದು, ಈ ಹಣಕಾಸು ವಹಿವಾಟು ಸಾಕಷ್ಟು ಅನುಮಾನಗಳಿಗೆ ಡೆ ಮಾಡಿಕೊಟ್ಟಿದೆ.
ಈ ಮೂರು ಹೆಣ್ಣು ಮಕ್ಕಳ ಹಿಡಿಶಾಪ ತಟ್ಟಿತೇ
ಹುಟ್ಟು ವಿಕಲಾಂಗನಾಗಿದ್ದ ಅಜಾಂಗೆ ಮೂವರು ಹೆಣ್ಣು ಮಕ್ಕಳು. ತಂದೆ ತೀರಿಕೊಂಡ ನಂತರ ತಾಯಿ ಜತೆ ಮೈಸೂರಿಗೆ ತೆರಳಿದ್ದರು. ಜೀವನಾಧಾರವಾಗಿದ್ದ ಅಪ್ಪನ ಪಾಲು ಕೇಳಿದರೆ ಅವರ ಸಹೋದರರು ಸ್ಪಂದನೆ ಮಾಡಿಲ್ಲ. ತಾಯಿ ಮಾಡಿಕೊಟ್ಟಿದ್ದ ಮದರ್ ಡೀಡ್ ಮುಂದಿಟ್ಟು ನ್ಯಾಯ ಕೇಳಿದರೂ ಕೊಟ್ಟಿಲ್ಲ. ಅನೇಕ ವ್ಯಕ್ತಿಗಳ ಬಳಿ ಈ ಮೂವರು ಹೆಣ್ಣು ಮಕ್ಕಳು ಹೋಗಿ ನ್ಯಾಯಕ್ಕಾಗಿ ಗೋಗರೆದಿದ್ದಾರೆ. ಶಾಸಕ ಜಮೀರ್ ಅಹಮದ್ ಗಮನಕ್ಕೂ ತಂದಿದ್ದಾರೆ.
ಆದರೆ ಆ ಹೆಣ್ಣು ಮಕ್ಕಳಿಗೆ ಯಾವ ನ್ಯಾಯವೂ ಸಿಕ್ಕಿಲ್ಲ. ಈಗಲೂ ಅವರು ತಮ್ಮ ಪಾಲು ಪಡೆಯಲು ಅಲೆಯುತ್ತಿದ್ದಾರೆ. ಆದರೆ ಅದೇ ಜಾಗದಲ್ಲಿ ರಾಜ ವಿಲಾಸಿ ಭಂಗಲೆ ಕಟ್ಟಿ ಶಾಸಕ ಜಮೀರ್ ಅಹಮದ್ ಖಾನ್ ವೈಭವ ಜೀವನ ನಡೆಸುತ್ತಿದ್ದಾರೆ. ಅದೇ ಮನೆಯಲ್ಲಿ ತನ್ನ ಮಗಳ ವೈಭವ ಮದುವೆ ಮಾಡಿ ಜಮೀರ್ ಗಮನ ಸೆಳೆದಿದ್ದರು. ಅಂಧ ತಂದೆಯ ಪಾಲು ಪಡೆದು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಮಕ್ಕಳ ಶಾಪ ತಟ್ಟಿತೇ ಎನ್ನುವ ಮಾತು ಕೇಳಿ ಬರುತ್ತಿದೆ. ಸಹೋದರರ ನಡುವಿನ ಮನಸ್ತಾಪವನ್ನೇ ಬಂಡವಾಳ ಮಾಡಿಕೊಂಡು ಜಮೀರ್ ಅತಿ ಕಡಿಮೆ ಬೆಲೆಗೆ ಈ ಆಸ್ತಿ ಖರೀದಿ ಮಾಡಿ ಬೇನಾಮಿ ವಹಿವಾಟು ನಡೆಸಿದರೇ ಎಂಬ ಅನುಮಾನ ಮೂಡಿದೆ. ಇದು ಇಡಿ ಅಧಿಕಾರಿಗಳ ದಾಳಿಗೆ ಒಳಗಾಗಿರುವ ಭಂಗಲೆಯ ವೃತ್ತಾಂತ. ಈ ಆಸ್ತಿಯ ವಿವರಗಳನ್ನು ಇಡಿ ಕೆಣಕಿದಲ್ಲಿ ಜಮೀರ್ ಅಹಮದ್ ಖಾನ್ ಅವರ ಬೇನಾಮಿ ವಹಿವಾಟು ವಿವರ ಸಿಕ್ಕಿಬಿದ್ದರೂ ಅಚ್ಚರಿ ಪಡಬೇಕಿಲ್ಲ.